ದೇವರ ಪಾತ್ರಿಯಾಗಲು ಅವಕಾಶ ಸಿಗದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ್ನಾ ಯುವಕ ! 

18-09-20 12:53 pm       Udupi Correspondent   ಕ್ರೈಂ

ಗುರುವಾರ ಮಧ್ಯಾಹ್ನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಗಂಗೊಳ್ಳಿ, ಸೆಪ್ಟಂಬರ್ 18: ಗಂಗೊಳ್ಳಿಯ ಮಹಾಮ್ಮಾಯಿ ಮಹಾಸತಿ ದೇವಸ್ಥಾನದಲ್ಲಿ ಗುರುವಾರ ಮಧ್ಯಾಹ್ನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಯತ್ನಿಸಿದ್ದ ಯುವಕ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಗಂಗೊಳ್ಳಿ ದಾಕುಹಿತ್ಲು ನಿವಾಸಿ ರಾಘವೇಂದ್ರ ಖಾರ್ವಿ (35) ಮೃತರು. ಈ ಸಂದರ್ಭ ರಕ್ಷಿಸಲು ಹೋಗಿ ಗಾಯಗೊಂಡಿದ್ದ ಲಕ್ಷ್ಮಣ ಖಾರ್ವಿ ಹಾಗೂ ಜನಾರ್ದನ ಖಾರ್ವಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ದೇವಸ್ಥಾನದಲ್ಲಿ ಮಹಾಲಯ ಅಮಾವಾಸೆ ಪ್ರಯುಕ್ತ ವಿಶೇಷ ಪೂಜೆ ನಡೆಯುತಿತ್ತು. ಈ ವೇಳೆ ಏಕಾಏಕಿ ಪೆಟ್ರೋಲ್ ಕ್ಯಾನ್ ಹಿಡಿದು ದೇವಸ್ಥಾನದೊಳಗೆ ಬಂದಿದ್ದ ರಾಘವೇಂದ್ರ ಖಾರ್ವಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದ. ಆಗ ದೇವಳದಲ್ಲಿ ಉರಿಸಿಟ್ಟ ಕಾಲುದೀಪದ ಬೆಂಕಿ ಇವರಿಗೆ ತಗಲಿತು ಎನ್ನಲಾಗಿದೆ. ಕೂಡಲೇ ಅಲ್ಲೇ ಇದ್ದ ಕೆಲವರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. 

ಪಾತ್ರಿಯಾಗಲು ಅವಕಾಶ ನೀಡದ್ದಕ್ಕೆ ಆತ್ಮಹತ್ಯೆ ? 

ದೇವರು ಮೈಮೇಲೆ ಬರುತ್ತಿದ್ದರೂ ಸಮುದಾಯದ ದೇವಸ್ಥಾನದಲ್ಲಿ ಪಾತ್ರಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ರಾಘವೇಂದ್ರ ಖಾರ್ವಿ, ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ರಾಘವೇಂದ್ರ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join our WhatsApp group for latest news updates