ಲಾಯರ್ ಫೀಸ್ ಕೊಡಲು ಕಳ್ಳತನಕ್ಕಿಳಿದವರಿಗೆ ಸಿಕ್ಕಿತ್ತು ಗುಡ್ಡೆ ಹಾಕುವಷ್ಟು ನೋಟಿನ ಮೂಟೆ ! ಕೋಟಿ ಕೋಟಿ ದುಡ್ಡಿನ ಮೂಟೆ ಹೊತ್ತುಕೊಂಡು ಫಾರಿನ್ ವಿಸ್ಕಿ ಹೀರುತ್ತಲೇ ಹೊರಬಿದ್ದಿದ್ದರು !

07-04-22 09:18 pm       Bengaluru Correspondent   ಕ್ರೈಂ

ಮನೆ ಕಳ್ಳತನವನ್ನೇ ಕಸುಬಾಗಿಸ್ಕೊಂಡು ಸಣ್ಣಪುಟ್ಟ ಕಳ್ಳತನ ಮಾಡಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕಳ್ಳರವರು. ಪ್ರಕರಣ ಒಂದರಲ್ಲಿ ಜೈಲು ಪಾಲಾಗಿ ಹೊರಬಂದ ಬಳಿಕ ಲಾಯರ್ ಫೀಸ್ ಎರಡು ಲಕ್ಷ ಆಗಿದೆ ಎಂದು ಕಳ್ಳತನಕ್ಕೆ ಹೊಂಚು ಹಾಕಿದ್ದರು. ಬೀಗ ಹಾಕಿದ್ದ ಮನೆಯೊಂದಕ್ಕೆ ರಾತ್ರಿ ವೇಳೆ ನುಗ್ಗಿದ್ದ ಕಳ್ಳರ ತಂಡ ಅಲ್ಲಿ ಹುಡುಕಾಡಿದ್ದಾಗ ನಿಧಿಯೇ ಸಿಕ್ಕಿತ್ತು.

ಬೆಂಗಳೂರು, ಎ.7: ಮನೆ ಕಳ್ಳತನವನ್ನೇ ಕಸುಬಾಗಿಸ್ಕೊಂಡು ಸಣ್ಣಪುಟ್ಟ ಕಳ್ಳತನ ಮಾಡಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕಳ್ಳರವರು. ಪ್ರಕರಣ ಒಂದರಲ್ಲಿ ಜೈಲು ಪಾಲಾಗಿ ಹೊರಬಂದ ಬಳಿಕ ಲಾಯರ್ ಫೀಸ್ ಎರಡು ಲಕ್ಷ ಆಗಿದೆ ಎಂದು ಕಳ್ಳತನಕ್ಕೆ ಹೊಂಚು ಹಾಕಿದ್ದರು. ಬೀಗ ಹಾಕಿದ್ದ ಮನೆಯೊಂದಕ್ಕೆ ರಾತ್ರಿ ವೇಳೆ ನುಗ್ಗಿದ್ದ ಕಳ್ಳರ ತಂಡ ಅಲ್ಲಿ ಹುಡುಕಾಡಿದ್ದಾಗ ನಿಧಿಯೇ ಸಿಕ್ಕಿತ್ತು. ಅಲ್ಲಿ ಮೂಟೆ ಹೊರುವಷ್ಟು ಹಣದ ರಾಶಿಯನ್ನು ನೋಡಿ ತಮ್ಮ ಕಣ್ಣನ್ನೇ ನಂಬದಾಗಿದ್ದರು. ಜೊತೆಗೆ ಫಾರಿನ್ ವಿಸ್ಕಿ, ಸ್ಕಾಚ್ ಕೂಡ ಇತ್ತು. ರಾತ್ರಿಯೆಲ್ಲಾ ಫಾರಿನ ವಿಸ್ಕಿ ಕುಡಿದು ಮಜಾ ಉಡಾಯಿಸಿ, ಮೂಟೆ ಕಟ್ಟಿಕೊಂಡು ಕೋಟಿ ಹಣವನ್ನು ದೋಚಿಕೊಂಡು ಹೋಗಿದ್ದರು.  

ಕೇಳಿದರೆ, ಇದೇನೋ ಸಿನಿಮಾ ಕತೆಯೇನೋ ಅನ್ನುವಂತಿದೆ. ಆದರೆ, ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಸಿನಿಮಾ ಕತೆಯೇನೋ ಅನ್ನುವಷ್ಟರ ಮಟ್ಟಿಗೆ ಸಂಶಯ ಪಡುವ ರೀತಿಯ ಕಳ್ಳರನ್ನು ಬಂಧಿಸಿ, ಕಳ್ಳರ ಕರಾಮತ್ತನ್ನು ಹೊರಗೆಡವಿದ್ದಾರೆ. ಮಂಡ್ಯ ಮೂಲದ ಸುನಿಲ್ ಹಾಗೂ ಮಾಗಡಿ ಮೂಲದ ದಿಲೀಪ್ ಎಂಬ ಕಳ್ಳರನ್ನು ಪತ್ತೆ ಮಾಡಿ, ಹಣದ ಮೂಟೆ ಸಿಕ್ಕಿದ ಕತೆಯನ್ನು ಹೇಳಿದ್ದಾರೆ.

ಸುನಿಲ್ ಹಾಗೂ ದಿಲೀಪ್ ಇಬ್ಬರಿಗೂ ಪರಸ್ಪರ ಪರಿಚಯ ಆಗಿದ್ದು ಜೈಲಿನಲ್ಲಿ. ಒಂದೇ ಸಮಯದಲ್ಲಿ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದರು. ಆದರೆ, ಜೈಲಿನಿಂದ ಹೊರತಂದಿದ್ದಕ್ಕಾಗಿ ವಕೀಲರಿಗೆ ಫೀಸು ಕೊಡಬೇಕಿತ್ತು. ಫೀಸು ಕೊಡಲು ಹೊಸ ಕಳ್ಳತನವನ್ನೇ ಮಾಡಬೇಕೆಂದು ಮತ್ತೊಂದು ಬೇಟೆಗೆ ಇಳಿದಿದ್ದರು. ಅದಕ್ಕಾಗಿ ಕುಮಾರಸ್ವಾಮಿ ಲೇಔಟ್ ಬಳಿಯ ಸಾಗರ್ ಆಸ್ಪತ್ರೆ ಬಳಿ ಹೊಂಚು ಹಾಕಿದ್ದರು.

ಮಧ್ಯಪ್ರದೇಶ ಮೂಲದ ಸಂದೀಪ್ ಲಾಲ್ ಎನ್ನುವ ವ್ಯಾಪಾರಿ ಮನೆಗೆ ಬೀಗ ಹಾಕಿ ಚೆನ್ನೈಗೆ ತೆರಳಿದ್ದ. ಬೀಗ ಹಾಕಿದ್ದ ಮನೆಗಾಗಿ ಹುಡುಕಾಡುತ್ತಿದ್ದಾಗಲೇ ಸಂದೀಪ್ ಲಾಲ್ ಮನೆ ಪತ್ತೆಯಾಗಿತ್ತು. ನಾಲ್ಕು ದಿನಗಳ ಕಾಲ ಮನೆಯ ಬಗ್ಗೆ ಸರ್ಚ್ ಮಾಡಿದ್ದ ಕಳ್ಳರು ಕೊನೆಗೆ ಬೀಗ ಮುರಿದು ಒಳಹೊಕ್ಕಿದ್ದರು. ಮನೆಯ ಪೂರ್ತಿ ಹುಡುಕಾಡಿದ್ರೂ ನಗದು ಹಣ ಸಿಕ್ಕಿರಲಿಲ್ಲ. ಕೊನೆಗೆ ಮಂಚದಡಿ ಸಾದಾ ಸೀದಾ ಗೋಣಿ ಚೀಲ ಇಟ್ಟಿದ್ದನ್ನು ಹೊರಕ್ಕೆಳೆದಿದ್ದರು. ಚೀಲ ಬಿಚ್ಚಿ ಕೆಳಕ್ಕೆ ಸುರಿಯುತ್ತಲೇ ಹಣದ ರಾಶಿಯೇ ಕೆಳಕ್ಕೆ ಬಿದ್ದಿತ್ತು. ಮೂಟೆ ಕಟ್ಟಿದ್ದ ನಾಲ್ಕು ಚೀಲಗಳನ್ನೂ ಹೊರಕ್ಕೆಳೆದು ನೋಡುತ್ತಲೇ ಕಳ್ಳರಿಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನುವಂತಾಗಿತ್ತು.

ರಾಶಿ ರಾಶಿ ಇದ್ದ ನೋಟಿನ ಕಂತೆಯನ್ನು ಎರಡು ಗೋಣಿ ಚೀಲದಲ್ಲಿ ಕಟ್ಟಿಕೊಂಡು ಹೊರಡಲು ಅನುವಾಗಿದ್ದರು. ಅಷ್ಟರಲ್ಲೇ ಕಪಾಟಿನಲ್ಲಿ ಇಟ್ಟಿದ್ದ ವಿದೇಶಿ ಮದ್ಯದ ಬಾಟಲಿ ಕಂಡಿತ್ತು. ಫಾರಿನ್ ವಿಸ್ಕಿಯನ್ನು ನೋಡುತ್ತಲೇ ನೀರನ್ನೂ ಹಾಕದೇ ಅಲ್ಲಿಯೇ ಗಟಾರನೆ ಕುಡಿದು ಗಂಟಲಿನ ತೇವ ಆರಿಸಿಕೊಂಡಿದ್ದರು. ಅಷ್ಟೇ ಅಲ್ಲಾ, ಎರಡು ಗಂಟೆಗಳ ಕಾಲ ಅಲ್ಲಿಯೇ ವಿಸ್ಕಿ ಕುಡಿದು ಡ್ಯಾನ್ಸ್ ಕೂಡ ಮಾಡಿದ್ದರು. ಹಣವನ್ನು ಮನೆಗೊಯ್ದು ತಾವು ಅವರಿವರಲ್ಲಿ ಮಾಡಿಕೊಂಡಿದ್ದ ಸಣ್ಣ ಪುಟ್ಟ ಸಾಲ ಸೇರಿದಂತೆ ಭರಪೂರ ಖರ್ಚು ಮಾಡಿದ್ದಾರೆ. ಒಂದೇ ವಾರದಲ್ಲಿ ಬಾರ್, ಹೊಟೇಲು, ಫ್ರೆಂಡ್ಸ್, ಹೆಣ್ಣು ಅಂತ 25 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇಷ್ಟರಲ್ಲಿ ಚೆನ್ನೈನಿಂದ ಮರಳಿದ್ದ ಸಂದೀಪ್ ಲಾಲ್ ಮನೆ ಕಳ್ಳತನ ತಿಳಿದು ಶಾಕ್ ಆಗಿದ್ದ. ಆದರೆ ಹಣದ ಮೂಟೆ ಕಳವಾಗಿದ್ದನ್ನು ಪೊಲೀಸರಿಗೆ ಹೇಳುವಂತಿರಲಿಲ್ಲ, ಒಂದಷ್ಟು ಬಂಗಾರದ ಒಡವೆ, ಹಣ ಕಳವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದ.

ಪೊಲೀಸರು ಹಳೆ ಅಪರಾಧಿಗಳ ಲಿಸ್ಟ್ ತೆಗೆದು ಚಾರ್ಜ್ ಮಾಡಲು ಆರಂಭಿಸಿದ್ದರು. ದಿಲೀಪ್ ಮತ್ತು ಸುನಿಲ್ ಹಳೆ ಲಿಸ್ಟಲ್ಲಿದ್ದುದರಿಂದ ಮತ್ತು ಅವರು ಮಾಡುತ್ತಿದ್ದ ಖರ್ಚನ್ನು ನೋಡಿ ಪೊಲೀಸರಿಗೆ ಅನುಮಾನ ಬಂದಿತ್ತು. ಇಬ್ಬರನ್ನೂ ಉಪಾಯದಿಂದ ಎಳೆತಂದು ಬಾಯಿ ಬಿಡಿಸಿದಾಗ ಹಣದ ಮೂಟೆ ಹೊತ್ತೊಯ್ದ ಕತೆಯನ್ನೇ ಪೊಲೀಸರಿಗೆ ಹೇಳಿದ್ದಾರೆ. ಇದನ್ನು ಕೇಳಿದ ಪೊಲೀಸರು ಕೂಡ ಹೌಹಾರಿದ್ದಾರೆ. ಸದ್ಯ ಬಂಧಿತರ ಬಳಿಯಿಂದ ಬರೋಬ್ಬರಿ 1.76 ಕೋಟಿ ರೂಪಾಯಿ ನಗದು ಹಣ ಮತ್ತು 180 ಗ್ರಾಮ್ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ದೂರು ದಾಖಲಾದ ಒಂದೇ ವಾರದಲ್ಲಿ ಪೊಲೀಸರು ಆರೋಪಿಗಳನ್ನು ಸೆರೆಹಿಡಿದಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ವಿಭಾಗದ ಎಸಿಪಿ ಸಂದೀಪ್ ಪಾಟೀಲ್, ಮನೆ ಓನರ್ ದೂರು ಆಧರಿಸಿ ಪೊಲೀಸರು ಬೆನ್ನು ಹತ್ತಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಆರೋಪಿ ಸುನಿಲ್ ಮೇಲೆ ಏಳು ಕಳ್ಳತನ ಕೇಸ್ ಇದೆ. ದಿಲೀಪ್ ಮೇಲೆ ಮಾಗಡಿ ಠಾಣೆಯಲ್ಲಿ ಡ್ರಗ್ಸ್ ಕೇಸ್ ಇದ್ದು ವಿಚಾರಣೆ ನಡೆಸಲಾಗುತ್ತಿದೆ. ಹಣದ ಅವಶ್ಯಕತೆ ಇದ್ದುದರಿಂದ ಕಳ್ಳತನ ಮಾಡಿದ್ದೇವೆ ಎಂದು ಒಪ್ಪಿದ್ದಾರೆ. ಒಟ್ಟು ಒಂದು ಕೋಟಿ 76 ಲಕ್ಷ ರೂಪಾಯಿ ಜಪ್ತಿ ಮಾಡಿದ್ದೇವೆ. ಮನೆಯಲ್ಲಿ ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಅನ್ನೋದರ ಬಗ್ಗೆ ತನಿಖೆ ನಡೆಸುತ್ತೇವೆ. ದೂರು ನೀಡಿದ್ದಾಗ ಚಿನ್ನಾಭರಣ ಕಳವಾಗಿದೆ ಎಂದು ಹೇಳಿಕೆ ನೀಡಿದ್ದರು. ಆನಂತರ ದುಡ್ಡು ಮಿಸ್ ಆಗಿದೆ ಎಂದಿದ್ದರು. ಈ ಬಗ್ಗೆ ಬೇರೆ ಇಲಾಖೆಗೂ ಮಾಹಿತಿ ನೀಡಿದ್ದೇವೆ. ದೂರುದಾರ ವ್ಯಕ್ತಿಯನ್ನು ವಿಚಾರಣೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

Bangalore Two have been arrested for robbery of crores of Money. The had to rob in order to pay the lawyers fees a thriller crime story that shook the entire police department.