ಎಟಿಎಂ ಮೆಷಿನ್ ಒಡೆದು ಹಣ ಎಗರಿಸಲು ಯತ್ನ ; 19 ವರ್ಷದ ಯುವಕನ ಬಂಧನ

08-04-22 09:58 pm       Udupi Correspondent   ಕ್ರೈಂ

ಇಲ್ಲಿನ ಪೆರಂಪಳ್ಳಿ –ಅಂಬಾಗಿಲು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಅನ್ನು ಒಡೆದು ಹಣವನ್ನು ಎಗರಿಸಲು ಯತ್ನಿಸಿದ ಪ್ರಕರಣದಲ್ಲಿ ಉಡುಪಿ ಪೊಲೀಸರು ವಿಜಯನಗರ ಮೂಲದ 19 ವರ್ಷದ ಯುವಕನನ್ನು ಬಂಧಿಸಿದ್ದಾರೆ.

ಉಡುಪಿ, ಎ.8: ಇಲ್ಲಿನ ಪೆರಂಪಳ್ಳಿ –ಅಂಬಾಗಿಲು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಅನ್ನು ಒಡೆದು ಹಣವನ್ನು ಎಗರಿಸಲು ಯತ್ನಿಸಿದ ಪ್ರಕರಣದಲ್ಲಿ ಉಡುಪಿ ಪೊಲೀಸರು ವಿಜಯನಗರ ಮೂಲದ 19 ವರ್ಷದ ಯುವಕನನ್ನು ಬಂಧಿಸಿದ್ದಾರೆ.

ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಕೆನರಾ ಬ್ಯಾಂಕಿನ ಎಟಿಎಂಗಳಿಗೆ ಹಣ ತುಂಬುವ ಇಲೆಕ್ಟ್ರಾನಿಕ್ ಪೇಮೆಂಟ್ ಸರ್ವಿಸಸ್ ಕಂಪನಿಯ ಮ್ಯಾನೇಜರ್ ಸೈಮನ್ ಡಿಸೋಜ ಪೊಲೀಸರಿಗೆ ದೂರು ನೀಡಿದ್ದರು. ಇತ್ತೀಚೆಗೆ ಪೆರಂಪಳ್ಳಿ- ಅಂಬಾಗಿಲು ಎಂಬಲ್ಲಿ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಹಣ ತುಂಬಲು ಹೋಗಿದ್ದಾಗ ಮೆಷಿನನ್ನು ಒಡೆದು ಹಣ ಎಗರಿಸಲು ಪ್ರಯತ್ನಿಸಿದ್ದು ಕಂಡುಬಂದಿತ್ತು.

ಈ ಬಗ್ಗೆ ಉಡುಪಿ ನಗರ ಪೊಲೀಸರಿಗೆ ದೂರು ನೀಡಿದ ಮೇರೆಗೆ ತನಿಖೆ ಕೈಗೊಳ್ಳಲಾಗಿತ್ತು. ಸಿಸಿಟಿವಿ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಬೆಣ್ಣೆಕಲ್ಲು ನಿವಾಸಿ ಹನುಮಂತ (19) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಕರೆತಂದು ಉಡುಪಿ ಕೋರ್ಟಿಗೆ ಹಾಜರುಪಡಿಸಲಾಗಿದ್ದು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉಡುಪಿ ನಗರ ಠಾಣೆ ಇನ್ ಸ್ಪೆಕ್ಟರ್ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು.

Police arrested a 19-year-old, native of Vijayanagar district, on the accusation of trying to break open Canara Bank ATM located at Ambagilu-Perampalli cross road.