ಮಸೀದಿ ಚಿತ್ರಕ್ಕೆ ಕೇಸರಿ ಧ್ವಜದ ಪೋಸ್ಟ್ ನೆಪ ; ಹಳೇ ಹುಬ್ಬಳ್ಳಿ ಉದ್ವಿಗ್ನ, ರಾತ್ರೋರಾತ್ರಿ ಸಾವಿರಾರು ಉದ್ರಿಕ್ತರಿಂದ ಗಲಾಟೆ, ಪೊಲೀಸರಿಗೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ! 

17-04-22 11:22 am       HK Desk news   ಕ್ರೈಂ

ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಚಿತ್ರವೊಂದನ್ನು ಎಡಿಟ್‌ ಮಾಡಿ ಯುವಕನೊಬ್ಬ ಸ್ಟೇಟಸ್‌ ಹಾಕಿಕೊಂಡ ಘಟನೆ ನೆಪದಲ್ಲಿ ಹಳೆ ಹುಬ್ಬಳ್ಳಿ ಪೇಟೆಯಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದ್ದು ಆಕ್ರೋಶಿತರು ಶನಿವಾರ ತಡರಾತ್ರಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿ, ಎ.17: ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಚಿತ್ರವೊಂದನ್ನು ಎಡಿಟ್‌ ಮಾಡಿ ಯುವಕನೊಬ್ಬ ಸ್ಟೇಟಸ್‌ ಹಾಕಿಕೊಂಡ ಘಟನೆ ನೆಪದಲ್ಲಿ ಹಳೆ ಹುಬ್ಬಳ್ಳಿ ಪೇಟೆಯಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದ್ದು ಆಕ್ರೋಶಿತರು ಶನಿವಾರ ತಡರಾತ್ರಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ದೇವಸ್ಥಾನ, ಪೊಲೀಸ್ ಠಾಣೆಗೆ ಕಲ್ಲು ತೂರಿ ದೊಂಬಿ ನಡೆಸಿದ್ದಾರೆ. 

‘ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುತ್ತೇವೆ, ಜೈ ಶ್ರೀರಾಮ್‌, ಹಿಂದೂ ಸಾಮ್ರಾಟ್‌‘ ಎಂದು ಮಸೀದಿ ಚಿತ್ರದ ಮೇಲೆ ಬರೆದು ಕೇಸರಿ ಧ್ವಜ ಹಾರಾಡುವ ರೀತಿ ವಿಡಿಯೋ ಎಡಿಟ್ ಮಾಡಲಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಉದ್ವಿಗ್ನ ಸ್ಥಿತಿ ತಲೆದೋರಿದ್ದು ಹಳೆ ಹುಬ್ಬಳ್ಳಿ ಪೇಟೆಯಲ್ಲಿ ರಾತ್ರೋರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ಸೇರಿದ್ದಾರೆ. ಉದ್ರಿಕ್ತರು ಗಲಾಟೆ ನಡೆಸುತ್ತಾ ದೊಂಬಿ ಎಬ್ಬಿಸಿದ್ದು ಪೊಲೀಸ್ ಠಾಣೆ ಮುಂದೆ ಸೇರಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಬರುತ್ತಿದ್ದಂತೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ. 

ಬೆಂಗಳೂರಿನ ಡಿಜೆ ಹಳ್ಳಿಯ ಘಟನೆ ರೀತಿಯಲ್ಲೇ ಸಾವಿರಾರು ಮಂದಿ ಒಮ್ಮಿಂದೊಮ್ಮೆಲೇ ಸೇರಿ ಗಲಾಟೆ ನಡೆಸಿದ್ದಾರೆ. ಪೊಲೀಸ್ ಮತ್ತು ಸಾರ್ವಜನಿಕ ವಾಹನ, ಬಸ್ ಗಳ ಮೇಲೆ ಕಲ್ಲು ತೂರಿ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ಕಾಡದೇವರಮಠ, ಕಾನ್ಸ್ ಟೇಬಲ್ ಗುರುಪಾದಪ್ಪ  ಸ್ವಾದಿ ಸೇರಿದಂತೆ ಹಲವಾರು ಪೊಲೀಸರು, ರಾಜಕೀಯ ನಾಯಕರು, ಸಾರ್ವಜನಿಕರು ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಬಳಿಯ ದೇವಸ್ಥಾನ, ಪೊಲೀಸ್ ಜೀಪ್, ಬಸ್ ಗಳ ಮೇಲೆ ಕಲ್ಲುತೂರಾಟ ನಡೆದಿದೆ. ಒಟ್ಟಿನಲ್ಲಿ ರಾತ್ರೋರಾತ್ರಿ ಹಳೆ ಹುಬ್ಬಳ್ಳಿ ರಣಾಂಗಣ ಆಗಿತ್ತು. 

ಏಕಾಏಕಿ ರೊಚ್ಚಿಗೆದ್ದು ಗಲಾಟೆ ಮಾಡಲು ಆರಂಭಿಸಿದ್ದು ಅಲ್ಲಿನ ಆಸ್ಪತ್ರೆ ಮೇಲೂ ದಾಳಿ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು, ಅಶ್ರುವಾಯು ಪ್ರಯೋಗಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.  ಕಲ್ಲು ತೂರಾಟದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. 

ಪೊಲೀಸ್‌ ಕಮಿಷನರ್‌ ಲಾಬುರಾಮ್, ಘಟನೆ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದಾರೆ. ಘಟನೆ ನಡೆದ ಸುತ್ತಲಿನ ಪ್ರದೇಶದಲ್ಲಿದ್ದ ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನಾಲ್ಕು ಪೊಲೀಸ್ ವಾಹನಗಳು ಜಖಂ ಆಗಿವೆ. ನಗರದ ಪ್ರಮುಖ ಧಾರ್ಮಿಕ ಸ್ಥಳಗಳ ಎದುರು ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಭಾನುವಾರ ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಕರೆಸಿಕೊಳ್ಳಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

ಮುಂಜಾಗ್ರತಾ ಕ್ರಮವಾಗಿ ಭದ್ರಾವತಿಯ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕರೆಸಿಕೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಭಾನುವಾರ ರಜೆ ಮೇಲೆ ಹೋದ ಸಿಬ್ಬಂದಿಗೂ ಕರ್ತವ್ಯಕ್ಕೆ ಮರಳಲು ಸೂಚಿಸಿದ್ದಾರೆ. ಇದೇ ವೇಳೆ, ಪ್ರಚೋದನಕಾರಿ ಪೋಸ್ಟ್‌ ಮಾಡಿದ್ದ ಆರೋಪದಲ್ಲಿ ಅಭಿಷೇಕ್‌ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಗಲಾಟೆ ಪ್ರಕರಣ ಸಂಬಂಧಿಸಿ 30 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

Four policemen were injured after an incident of stone-pelting was reported in Karnataka's Hubli city late on Saturday. The authorities later imposed section 144 in the area. According to the details, a mob that had gathered outside a police station suddenly turned violent and started pelting stones at the police station and police vehicles.