ಹಿಂದು ಸಂಘಟನೆಯ ಯುವಕರಿಗೆ ಠಾಣೆಯಲ್ಲಿ ಕೂಡಿಹಾಕಿ ಹಲ್ಲೆ ; ಬಜ್ಪೆ ಇನ್ಸ್ ಪೆಕ್ಟರ್ ಸಂದೇಶ್ ಸೇರಿ ನಾಲ್ವರು ಪೊಲೀಸರ ಅಮಾನತು, ಇಲಾಖಾ ತನಿಖೆಗೆ ಆದೇಶ

25-04-22 07:26 pm       Mangalore Correspondent   ಕ್ರೈಂ

​​​​​​​ಪ್ರಕರಣ ಒಂದಕ್ಕೆ ಸಂಬಂಧಿಸಿ ಹಿಂದು ಸಂಘಟನೆಯ ಮೂವರು ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ಕರೆಸಿ ಹಲ್ಲೆ ನಡೆಸಿದ ವಿಚಾರದಲ್ಲಿ ಬಜ್ಪೆ ಠಾಣೆ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ ಮತ್ತು ಮೂವರು ಪೊಲೀಸ್ ಸಿಬಂದಿಯನ್ನು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅಮಾನತು ಮಾಡಿ ಆದೇಶ ಮಾಡಿದ್ದಾರೆ.

ಮಂಗಳೂರು, ಎ.25: ಪ್ರಕರಣ ಒಂದಕ್ಕೆ ಸಂಬಂಧಿಸಿ ಹಿಂದು ಸಂಘಟನೆಯ ಮೂವರು ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ಕರೆಸಿ ಹಲ್ಲೆ ನಡೆಸಿದ ವಿಚಾರದಲ್ಲಿ ಬಜ್ಪೆ ಠಾಣೆ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ ಮತ್ತು ಮೂವರು ಪೊಲೀಸ್ ಸಿಬಂದಿಯನ್ನು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅಮಾನತು ಮಾಡಿ ಆದೇಶ ಮಾಡಿದ್ದಾರೆ.

ಕಟೀಲು ಪರಿಸರದ ಶ್ರೀರಾಮ ಸೇನೆಯ ಕಾರ್ಯಕರ್ತರು ಎನ್ನಲಾದ ಮಹೇಶ್, ದುರ್ಗಾಚರಣ್ ಮತ್ತು ದೀಪಕ್ ಎಂಬ ಮೂವರು ಯುವಕರ ಮೇಲೆ ಬಜ್ಪೆ ಠಾಣೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಲಾಗಿತ್ತು. ಎ.22ರಂದು ಘಟನೆ ನಡೆದಿದ್ದು, ಈ ಮೂವರಲ್ಲಿ ಇಬ್ಬರು ವೆನ್ಲಾಕ್ ಆಸ್ಪತ್ರೆಯಲ್ಲಿ ಮತ್ತು ಇನ್ನೊಬ್ಬ ಯುವಕ ಕಟೀಲಿನ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಗೆ ಠಾಣೆಯಲ್ಲಿ ಕೂಡಿಹಾಕಿ ಗಂಭೀರ ಹಲ್ಲೆ ನಡೆಸಲಾಗಿದೆ ಎಂದು ಮೇಲಧಿಕಾರಿಗಳಿಗೆ ದೂರು ನೀಡಿದ್ದರಿಂದ ಉತ್ತರ ವಿಭಾಗದ ಎಸಿಪಿ ಮಹೇಶ್ ಕುಮಾರ್ ತನಿಖೆ ನಡೆಸಿ ವರದಿ ನೀಡಿದ್ದರು. ಅದನ್ನು ಆಧರಿಸಿ, ಇನ್ಸ್ ಪೆಕ್ಟರ್ ಸೇರಿ ನಾಲ್ವರನ್ನು ಇಲಾಖಾ ತನಿಖೆ ಬಾಕಿಯಿರಿಸಿ ಅಮಾನತು ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಡಿಸಿಪಿ ಹರಿರಾಮ್ ಶಂಕರ್ ಅವರಿಗೆ ಹೊಣೆ ವಹಿಸಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಸೀಯಾಳ ಹಾಕಲು ಅಡ್ಡಿಪಡಿಸಿದ್ದಕ್ಕೆ ಹಲ್ಲೆ  

ಇತ್ತೀಚೆಗೆ ಕಟೀಲು ದೇಗುಲ ಪರಿಸರದಲ್ಲಿ ಮೂಡುಬಿದ್ರೆ ಮೂಲದ ಮುಸ್ಲಿಂ ವ್ಯಕ್ತಿ ಸೀಯಾಳ ಹಾಕಲು ಟೆಂಪೋದಲ್ಲಿ ಬಂದಿದ್ದಾಗ, ಹಿಂದು ಸಂಘಟನೆಯ ಇಬ್ಬರು ಯುವಕರು ಅಡ್ಡಹಾಕಿದ್ದರು ಎನ್ನಲಾಗಿದೆ. ಇಲ್ಲಿ ನೀವು ಸೀಯಾಳ ಹಾಕಲು ಅವಕಾಶ ಇಲ್ಲ ಎಂದು ಹೇಳಿ ವ್ಯಾಪಾರಿಯನ್ನು ಮರಳಿ ಕಳಿಸಿದ ಘಟನೆ ನಸುಕಿನ ಜಾವ ನಡೆದಿತ್ತು. ಈ ಬಗ್ಗೆ ಸೀಯಾಳ ವ್ಯಾಪಾರಿ ಬಜ್ಪೆ ಇನ್ಸ್ ಪೆಕ್ಟರ್ ಸಂದೇಶ್ ಅವರಿಗೆ ದೂರು ನೀಡಿದ್ದರು. ಘಟನೆ ಬಗ್ಗೆ ವಿಚಾರಣೆ ನಡೆಸಲು ಎಪ್ರಿಲ್ 22ರಂದು ಇಬ್ಬರು ಯುವಕರನ್ನು ಠಾಣೆಗೆ ಕರೆತಂದಿದ್ದು, ಈ ವೇಳೆ ಎದುರುತ್ತರ ನೀಡಿದ್ದಾರೆಂದು ಪೊಲೀಸರು ಲಾಠಿಯಲ್ಲಿ ಹೊಡೆದಿದ್ದಾರೆ. ಇದನ್ನು ಕೇಳಲು ಬಂದ ಸ್ಥಳೀಯ ಮಹೇಶ್ ಎಂಬವರ ಮೇಲೂ ಪೊಲೀಸರು ದೈಹಿಕ ಹಲ್ಲೆ ನಡೆಸಿದ್ದರು. ಲಾಠಿ ಏಟಿನಿಂದಾಗಿ ನಡೆಯಲು ಸಾಧ್ಯವಾಗದೆ, ಒಬ್ಬನಿಗೆ ಮೂತ್ರ ಮಾಡುವುದಕ್ಕೂ ಕಷ್ಟ ಆಗಿರುವುದರಿಂದ ವಿಷಯ ತಿಳಿದು ಬಿಜೆಪಿ ಕಾರ್ಯಕರ್ತರು ಎ.24ರಂದು ಬಜ್ಪೆ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಗಮನಕ್ಕೂ ತರಲಾಗಿತ್ತು.

ಮೊದಲು ಮೂವರು ಪೊಲೀಸ್ ಸಿಬಂದಿಯನ್ನು ಮಾತ್ರ ಅಮಾನತು ಮಾಡುವುದಾಗಿ ಮಾಹಿತಿಗಳಿದ್ದವು. ಆದರೆ ಸ್ಥಳೀಯ ಬಿಜೆಪಿ ನಾಯಕರು ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧ ಆರೋಪಿಸಿ, ಗೃಹ ಸಚಿವರಿಗೆ ಒತ್ತಡ ಹೇರಿದ್ದರು. ಇದರಿಂದಾಗಿ ಗೃಹ ಸಚಿವರು ಮಂಗಳೂರು ಕಮಿಷನರ್ ಬಳಿ ವರದಿ ಕೇಳಿದ್ದರಿಂದ ಇನ್ಸ್ ಪೆಕ್ಟರ್ ಸೇರಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಎಸಿಪಿ ನೀಡಿರುವ ವರದಿಯಲ್ಲಿ ಮೂವರು ಯುವಕರಿಗೆ ಗಂಭೀರ ಹಲ್ಲೆ ಆಗಿರುವ ಬಗ್ಗೆ ಉಲ್ಲೇಖ ಇದೆ. ಅಲ್ಲದೆ, ಹೊಟ್ಟೆಯ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ ಕಲೆಗಳು ಕಂಡುಬಂದಿರುವ ಬಗ್ಗೆ ವರದಿ ನೀಡಿದ್ದಾರೆ.

ಬಜ್ಪೆ ಇನ್ಸ್ ಪೆಕ್ಟರ್ ಸಂದೇಶ್ ಈ ಹಿಂದೆಯೂ ಸಾರ್ವಜನಿಕರ ಜೊತೆ ಅನುಚಿತವಾಗಿ ವರ್ತಿಸಿದ್ದ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ಆರ್ಟಿಐ ಕಾರ್ಯಕರ್ತರು, ಸ್ಥಳೀಯ ಸಾರ್ವಜನಿಕರು ದೂರು ಹಿಡಿದು ಹೋದರೂ ಉದ್ಧಟತನದಿಂದ ವರ್ತಿಸಿದ್ದ ಬಗ್ಗೆ ಆರೋಪಿಸಲಾಗಿತ್ತು. ಇದೇ ವಿಚಾರದಲ್ಲಿ ಬಜ್ಪೆ ಠಾಣಾ ವ್ಯಾಪ್ತಿಯ ಎರಡು ಗ್ರಾಪಂ ಸಭೆಗಳಲ್ಲಿ ಇನ್ಸ್ ಪೆಕ್ಟರ್ ವಿರುದ್ಧ ಠರಾವು ಮಂಡಿಸಿದ ಪ್ರಸಂಗವೂ ನಡೆದಿತ್ತು. ಸಾರ್ವಜನಿಕರ ಜೊತೆ ಅನುಚಿತವಾಗಿ ವರ್ತಿಸುವ ಸಂದೇಶ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ಪಂಚಾಯತ್ ಮಟ್ಟದಲ್ಲಿ ಆಗ್ರಹವೂ ಕೇಳಿಬಂದಿತ್ತು.

Mangalore Three police staffs along with Baje Police Inspector Sandesh suspended for assaulting Ram Sene Members brutally. The two are said to be admitted at Wenlock hospital and another one at Kateel. The matter has also been brought to the notice of Home Minister.