ಕಿಡ್ನಿ ಕೊಡ್ತೀರಾ, ನಾಲ್ಕು ಕೋಟಿ ಆಫರ್ ! ಬೆಂಗಳೂರಿನಲ್ಲಿ ಕಿಡ್ನಿ ರಾಕೆಟ್ ಪತ್ತೆ, ಪ್ರತಿಷ್ಠಿತ ಆಸ್ಪತ್ರೆಗಳ ವೆಬ್ ಸೈಟ್ ಸೃಷ್ಟಿಸಿ ಕೋಟಿ ಆಮಿಷವೊಡ್ಡಿ ದೋಖಾ ! ಮೂವರು ವಿದೇಶಿ ಪ್ರಜೆಗಳ ಬಂಧನ

25-04-22 11:10 pm       Mangalore Correspondent   ಕ್ರೈಂ

ಕಿಡ್ನಿ ಮಾರಾಟ ಮತ್ತು ಕೊಳ್ಳುವವರನ್ನೇ ಟಾರ್ಗೆಟ್ ಮಾಡಿಕೊಂಡು ಬೆಂಗಳೂರಿನಲ್ಲಿ ಬೃಹತ್ ಕಿಡ್ನಿ ಮಾರಾಟ ಜಾಲವೊಂದು ಸಕ್ರಿಯವಾಗಿದ್ದು, ಕಿಡ್ನಿ ರಾಕೆಟ್ ಸಂಬಂಧಿಸಿ ಮೂವರು ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಎ.25: ಕಿಡ್ನಿ ಮಾರಾಟ ಮತ್ತು ಕೊಳ್ಳುವವರನ್ನೇ ಟಾರ್ಗೆಟ್ ಮಾಡಿಕೊಂಡು ಬೆಂಗಳೂರಿನಲ್ಲಿ ಬೃಹತ್ ಕಿಡ್ನಿ ಮಾರಾಟ ಜಾಲವೊಂದು ಸಕ್ರಿಯವಾಗಿದ್ದು, ಕಿಡ್ನಿ ರಾಕೆಟ್ ಸಂಬಂಧಿಸಿ ಮೂವರು ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿಸಿ ಗ್ರಾಹಕರನ್ನು ಯಾಮಾರಿಸಿ, ಹಣದ ಆಮಿಷವೊಡ್ಡಿ ಜಾಲ ನಡೆಸುತ್ತಿದ್ದರು ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಇತ್ತೀಚೆಗೆ ಸಾಗರ್ ಆಸ್ಪತ್ರೆಯ ನಕಲಿ ವೆಬ್ ಸೈಟ್ ಸೃಷ್ಟಿಸಿ, ಕಿಡ್ನಿ ಡೊನೇಶನ್ ಬಗ್ಗೆ ಹಣ ಕೇಳುತ್ತಿರುವ ಬಗ್ಗೆ ಆಸ್ಪತ್ರೆ ಸಿಬಂದಿಯೇ ಆಗ್ನೇಯ ವಿಭಾಗದ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಅಮೃತಹಳ್ಳಿಯ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.

ಕಿಡ್ನಿಗೆ ಬರೋಬ್ಬರಿ ನಾಲ್ಕು ಕೋಟಿ ಆಫರ್..!

ಕಿಡ್ನಿ ಮಾರಾಟ ಮಾಡುವುದಿದ್ದರೆ, ನಾಲ್ಕು ಕೋಟಿ ಕೊಡುವುದಾಗಿ ಆಫರ್ ನೀಡುತ್ತಿದ್ದರು. ಗ್ರಾಹಕರು ಇದನ್ನು ನಂಬಿ ಬಲೆಗೆ ಬಿದ್ದರೆ, ಹಣದ ಆಫರ್ ಹೆಸರಲ್ಲಿ ದೋಖಾ ಮಾಡುತ್ತಿದ್ದರು. ಖಾಸಗಿ ಆಸ್ಪತ್ರೆಯ ವೆಬ್ ಸೈಟ್ ಆಗಿದ್ದರಿಂದ ಸತ್ಯ ಇರಬಹುದು ಎಂದುಕೊಂಡು ಗ್ರಾಹಕರು ಸುಲಭದಲ್ಲಿ ಬಲಿ ಬೀಳುತ್ತಿದ್ದರು. ಕಿಡ್ನಿ ಮಾರಾಟ ಮಾಡುವವರು, ಕಿಡ್ನಿ ಅಗತ್ಯ ಉಳ್ಳವರನ್ನೇ ಟಾರ್ಗೆಟ್ ಮಾಡಿ ಗ್ಯಾಂಗ್ ಕಾರ್ಯಾಚರಣೆ ನಡೆಸ್ತಾ ಇತ್ತು.

ತನಿಖೆ ವೇಳೆ ಕಿಡ್ನಿ ಹೆಸರಲ್ಲಿ ಬೃಹತ್ ಜಾಲ ನಡೆಸುತ್ತಿರುವುದು ಕಂಡುಬಂದಿದೆ. ಸಾಗರ್ , ಬ್ಯಾಪ್ಟಿಸ್ಟ್, ಕಾವೇರಿ ಆಸ್ಪತ್ರೆ ಸೇರಿದಂತೆ ಪ್ರಸಿದ್ಧ ಖಾಸಗಿ ಆಸ್ಪತ್ರೆಗಳ ನಕಲಿ ವೆಬ್ ಸೈಟ್ ಸೃಷ್ಟಿಸಿ, ಗ್ರಾಹಕರಿಗೆ ಕಿಡ್ನಿ ಆಫರ್ ನೀಡುತ್ತಿದ್ದರು. ಮಾರಾಟ ಮಾಡುವವರಿದ್ದರೆ ಒಂದು ಕಿಡ್ನಿಗೆ 4 ಕೋಟಿ ಕೊಡೋದಾಗಿ ಆಫರ್ ನೀಡುತ್ತಿದ್ದರು. ಕಿಡ್ನಿ ಕೊಳ್ಳುವವರಿದ್ದರೂ, ಅದೇ ರೀತಿಯ ಆಫರ್ ನೀಡಲಾಗಿತ್ತು. ಕಿಡ್ನಿ ನೀಡುವುದಕ್ಕೂ ಮೊದಲು ವಾಟ್ಸ್ ಆ್ಯಪ್ ಮುಖಾಂತರ ರಿಜಿಸ್ಟರ್ ಫೀಸ್ ಹಾಗೂ ವಿವಿಧ ಮಾದರಿಯ ಶುಲ್ಕ ನೀಡಬೇಕು ಎಂದು ಹೇಳಿ ಹಣ ವಸೂಲಿ ಮಾಡುತ್ತಿದ್ದರು. ಎಲ್ಲವನ್ನೂ ಫೋನ್ ಮುಖಾಂತರವೇ ನಡೆಸುತ್ತಿದ್ದ ಆರೋಪಿಗಳು ಕೋಟಿ ಹಣದ ಆಸೆ ಹುಟ್ಟಿಸಿ ಜನರನ್ನು ಟ್ರಾಪ್ ಮಾಡುತ್ತಿದ್ದರು. ಆನಂತರ ವಿವಿಧ ಹಂತಗಳಲ್ಲಿ ಫೀಸ್ ನೆಪದಲ್ಲಿ ಹಣ ಕೀಳುತ್ತಿದ್ದರು.

ಬ್ಯಾಂಕ್ ನಲ್ಲಿ ಇಂತಿಷ್ಟು ಅಡ್ವಾನ್ಸ್ ಹಣ ಡೆಪಾಸಿಟ್ ಆಗಿದೆಯೆಂದು ಹೇಳಿ, ಅದರಿಂದ ನಿಮ್ಮ ಖಾತೆಗೆ ಹಣ ಬರಬೇಕು ಅಂದ್ರೆ ಬರಲಿರುವ ಹಣದ ಶೇ.30ರಷ್ಟು ಹಣವನ್ನು ನಮಗೆ ನೀಡಬೇಕೆಂದು ಕೇಳುತ್ತಿದ್ದರು. ಇದನ್ನು ನಂಬಿದ ಹಲವರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಆದರೆ ಇದುವರೆಗೂ ಹಣ ಕಳಕೊಂಡ ಬಗ್ಗೆ ಯಾರು ಕೂಡ ದೂರು ನೀಡಿಲ್ಲ. ಹಣ ಕಳಕೊಂಡವರಿದ್ದರೆ ಪೊಲೀಸ್ ದೂರು ನೀಡುವಂತೆ ಬೆಂಗಳೂರು ಆಗ್ನೇಯ ವಿಭಾಗದ ಎಸಿಪಿ ಸುಬ್ರಮಣೇಶ್ವರ ರಾವ್ ಮನವಿ ಮಾಡಿದ್ದಾರೆ.

Karnataka police announced on Monday that they busted a fake kidney donation racket in Bengaluru and arrested three foreign nationals in connection. According to police, the accused created fake websites of reputed hospitals in Bengaluru and targeted both kidney donors and recipients.