ಗಾಂಜಾ ಗ್ಯಾಂಗ್ ಹಿಂದೆ ಬಿದ್ದ ಪೊಲೀಸರ ಕಾರು ಚಿತ್ತೂರು ಬಳಿ ಅಪಘಾತ ; ಶಿವಾಜಿನಗರ ಪಿಎಸ್ಐ ಸೇರಿ ಮೂವರ ಸಾವು 

24-07-22 01:28 pm       Bangalore Correspondent   ಕರ್ನಾಟಕ

​​​​​ಗಾಂಜಾ ಗ್ಯಾಂಗ್​ ಬೆನ್ನತ್ತಿ ಆಂಧ್ರ ಪ್ರದೇಶಕ್ಕೆ ತೆರಳಿದ್ದ ಶಿವಾಜಿನಗರ ಠಾಣೆ ಪೊಲೀಸರ ಕಾರು ಚಿತ್ತೂರಿನ ಬಳಿ ಅಪಘಾತಕ್ಕೀಡಾಗಿದ್ದು ಪಿಎಸ್ಐ ಸೇರಿ ಮೂವರು ಪೊಲೀಸ್​ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. 

ಬೆಂಗಳೂರು, ಜುಲೈ 24 : ಗಾಂಜಾ ಗ್ಯಾಂಗ್​ ಬೆನ್ನತ್ತಿ ಆಂಧ್ರ ಪ್ರದೇಶಕ್ಕೆ ತೆರಳಿದ್ದ ಶಿವಾಜಿನಗರ ಠಾಣೆ ಪೊಲೀಸರ ಕಾರು ಚಿತ್ತೂರಿನ ಬಳಿ ಅಪಘಾತಕ್ಕೀಡಾಗಿದ್ದು ಪಿಎಸ್ಐ ಸೇರಿ ಮೂವರು ಪೊಲೀಸ್​ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. 

ಪೊಲೀಸ್​ ಸಿಬ್ಬಂದಿಯ ಇನ್ನೋವಾ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿ ಸುಮಾರು 30 ಅಡಿ ತಗ್ಗಿನಲ್ಲಿದ್ದ ಮತ್ತೊಂದು ರಸ್ತೆಗೆ ಪಲ್ಟಿಯಾಗಿ ಬಿದ್ದಿದೆ. ಇದರಿಂದ ತೀವ್ರ ಗಾಯಗೊಂಡ ಮೂವರು ಪೊಲೀಸ್ ಸಿಬಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಮತ್ತು ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಶಿವಾಜಿನಗರ ಠಾಣೆಯ ಪಿಎಸ್ಐ ಅವಿನಾಶ್, ಪ್ರೊಬೇಷನರಿ ಪಿಎಸ್‌ಐ ದೀಕ್ಷಿತ್, ಪೊಲೀಸ್​ ಕಾನ್ಸ್​ಟೇಬಲ್​ ಅನಿಲ್ ಸೇರಿ ಆರು ಸಿಬಂದಿಯ ತಂಡವು ಖಾಸಗಿ ಏಜನ್ಸಿಯಿಂದ ಇನ್ನೋವಾ ಕಾರನ್ನು ಬಾಡಿಗೆ ಪಡೆದು ಗಾಂಜಾ ಗ್ಯಾಂಗ್​ ಹಿಡಿಯಲು ಆಂಧ್ರಕ್ಕೆ ತೆರಳಿದ್ದರು. ನಸುಕಿನ ಜಾವ 3 ಗಂಟೆ ಸುಮಾರಿಗೆ ತಂಡವೊಂದನ್ನು ಬೆನ್ನಟ್ಟುವ ಧಾವಂತದಲ್ಲಿ ಪೊಲೀಸರ ಕಾರು ಡಿವೈಡರ್ ಹೊಡೆದು ಪಲ್ಟಿಯಾಗಿದೆ ಎನ್ನಲಾಗುತ್ತಿದೆ. 

ಸಬ್​ ಇನ್ಸ್‌ಪೆಕ್ಟರ್ ಅವಿನಾಶ್, ಕಾನ್ಸ್​ಟೇಬಲ್​ ಅನಿಲ್ ಹಾಗೂ ಖಾಸಗಿ ಕಾರು ಚಾಲಕ ಮೃತಪಟ್ಟಿದ್ದಾರೆ. ಪ್ರೊಬೆಷನರಿ ಪಿಎಸ್‌ಐ ದೀಕ್ಷಿತ್​, ಕಾನ್ಸ್​ಟೇಬಲ್​ ಶರಣಬಸವ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಶನಿವಾರ ಹೊರಟಿದ್ದ ಪೊಲೀಸರ ತಂಡ ಚಿತ್ತೂರಿನಲ್ಲಿ ಆರೋಪಿಗಳು ಸಿಗದ ಹಿನ್ನೆಲೆಯಲ್ಲಿ ತಿರುಪತಿಯತ್ತ ಹೊರಟಿತ್ತು. ಈ ವೇಳೆ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇತ್ತ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಸಹೋದ್ಯೋಗಿಗಳ ದಾರುಣ ಸಾವು ಹಿನ್ನಲೆಯಲ್ಲಿ ನೀರವ ಮೌನ ಆವರಿಸಿದೆ.

Bangalore Shivajinagara police meet with a ghastly accident in Andhra by chasing Ganja Gang at Andhra, three dead on spot including Police Sub Inspector.