ಕಡೆಗೂ ಬಂತು ಲೋಕಾಯುಕ್ತಕ್ಕೆ ಪವರ್ ; ಹೈಕೋರ್ಟ್ ಆದೇಶ ಪಾಲಿಸಲು ಎಡಿಜಿಪಿ ಸುತ್ತೋಲೆ, ಇನ್ನಾದ್ರೂ ಮರುಕಳಿಸೀತೇ ಹಳೆ ಖದರ್ ! 

26-08-22 08:12 pm       Bangalore Correspondent   ಕರ್ನಾಟಕ

ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಎಸಿಬಿ ರದ್ದುಗೊಳಿಸಿ, ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ಆದೇಶಿಸಿತ್ತು. ಅಲ್ಲದೆ, ಭ್ರಷ್ಟಾಚಾರ ಪ್ರಕರಣಗಳನ್ನು ಎಸಿಬಿ ಬದಲು ಲೋಕಾಯುಕ್ತವೇ ತನಿಖೆ ನಡೆಸುವಂತೆ ಆದೇಶ ಮಾಡಿತ್ತು.‌

ಬೆಂಗಳೂರು, ಆಗಸ್ಟ್ 26 : ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಎಸಿಬಿ ರದ್ದುಗೊಳಿಸಿ, ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ಆದೇಶಿಸಿತ್ತು. ಅಲ್ಲದೆ, ಭ್ರಷ್ಟಾಚಾರ ಪ್ರಕರಣಗಳನ್ನು ಎಸಿಬಿ ಬದಲು ಲೋಕಾಯುಕ್ತವೇ ತನಿಖೆ ನಡೆಸುವಂತೆ ಆದೇಶ ಮಾಡಿತ್ತು.‌ ಅದರಂತೆ, ಇನ್ಮುಂದೆ ಸಾರ್ವಜನಿಕರು ನೀಡುವ ಭ್ರಷ್ಟಾಚಾರ ಕುರಿತ ದೂರುಗಳನ್ನು ಲೋಕಾಯುಕ್ತ ಕಾಯ್ದೆಯಡಿ ದಾಖಲಿಸಿಕೊಳ್ಳುವಂತೆ ಲೋಕಾಯುಕ್ತ ಎಡಿಜಿಪಿ ತನ್ನ ಕೆಳಗಿನ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. 

ಈ ಬಗ್ಗೆ ಕರ್ನಾಟಕ ಲೋಕಾಯುಕ್ತ ಎಡಿಜಿಪಿ ಹೆಸರಲ್ಲಿ ಸುತ್ತೋಲೆ ಹೊರಡಿಸಲಾಗಿದ್ದು, ಹೈಕೋರ್ಟ್ ಆದೇಶ ಪಾಲನೆಗೆ ಸೂಚಿಸಿದ್ದಾರೆ. ಎಲ್ಲ ಜಿಲ್ಲೆಗಳ ಲೋಕಾಯುಕ್ತ ಎಸ್ಪಿ, ಡಿಎಸ್ಪಿ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಗಳು, ಲೋಕಾಯುಕ್ತದಡಿ ಬರುವ 1988ರ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಂತೆ ದೂರುಗಳನ್ನು ದಾಖಲಿಸಿಕೊಳ್ಳಲು ಸೂಚಿಸಿದ್ದಾರೆ. ಇನ್ಮುಂದೆ ಸಾರ್ವಜನಿಕರಿಂದ ಯಾವುದೇ ರೀತಿಯ ಭ್ರಷ್ಟಾಚಾರ ಕುರಿತ ದೂರುಗಳನ್ನು ಇದೇ ಕಾಯ್ದೆಯಡಿ ದಾಖಲಿಸುವಂತೆ ಸೂಚಿಸಿದ್ದಾರೆ. ಈ ಮೂಲಕ ಲೋಕಾಯುಕ್ತಕ್ಕೆ ಮತ್ತೆ ಅಧಿಕಾರ ನೀಡಿ ಆದೇಶ ಮಾಡಿದ್ದಾರೆ. 

ಪ್ರತಿ ಜಿಲ್ಲೆಯಲ್ಲಿ ಲೋಕಾಯುಕ್ತ ವಿಭಾಗ ಇದ್ದು ಎಸಿಬಿ ರಚನೆಯಾದ ಬಳಿಕ ದಾಳಿ ನಡೆಸುವ ಮತ್ತು ಕೇಸು ದಾಖಲಿಸುವ ಅಧಿಕಾರ ಕಳಕೊಂಡಿತ್ತು. ಅದರ ಬದಲಿಗೆ ಪ್ರತ್ಯೇಕ ಭ್ರಷ್ಟಾಚಾರ ನಿಗ್ರಹ ದಳ ಅಸ್ತಿತ್ವಕ್ಕೆ ಬಂದಿತ್ತು. ರಾಜ್ಯ ಸರಕಾರದ ಮರ್ಜಿಯಲ್ಲಿ ಅಂದರೆ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಣತಿಯಿಲ್ಲದೆ ಕೇಸು ದಾಖಲಿಸಿಕೊಳ್ಳಲು ಮತ್ತು ಹಿರಿಯ ಅಧಿಕಾರಿಗಳ ಮೇಲೆ ದಾಳಿ ನಡೆಸುವಷ್ಟು ಅಧಿಕಾರ ಇರಲಿಲ್ಲ. ಹೀಗಾಗಿ ಎಸಿಬಿ ಅನ್ನುವುದು ರಾಜ್ಯ ಸರಕಾರದ ಮರ್ಜಿಯಲ್ಲೇ ನಡೆಯಬೇಕಿತ್ತು. ಇದರಿಂದ ಐಎಎಸ್‌, ಐಪಿಎಸ್ ದರ್ಜೆಯ ಅಧಿಕಾರಿಗಳ ಮೇಲೆ ದಾಳಿ ನಡೆಸುವುದು ಸಾಧ್ಯವಾಗುತ್ತಿರಲಿಲ್ಲ‌. ದೊಡ್ಡ ತಿಮಿಂಗಿಲಗಳು ರಾಜಕಾರಣಿಗಳ ಮೂಲಕ ತಿಂದು ತೇಗಿದರೂ ಆಶ್ರಯ ಪಡೆದುಕೊಳ್ಳುತ್ತಿದ್ದರು. 

ಇದೇ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರಕಾರ ಎಸಿಬಿ ರಚಿಸಿದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ, ವಾದ ಆಲಿಸಿದ ಬಳಿಕ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡಿತ್ತು.

Lokayukta gains back power in Karnataka, follow court order as of 1988 circular by ADGP.