ಮತ್ತೆ ಬೀದಿಗೆ ಬಂದ ಸಿದ್ದು – ಡಿಕೆಶಿ ಮುನಿಸು ; ಮಂಡ್ಯದಲ್ಲಿ ನಾಯಕರ ಎದುರಲ್ಲೇ ಬೆಂಬಲಿಗರ ತಿಕ್ಕಾಟ, ಜನತಾ ಪರಿವಾರಿಗಳ ತೊಡರುಗಾಲು !

17-09-22 08:42 pm       Bangalore Correspondent   ಕರ್ನಾಟಕ

ಕಳೆದ ಬಾರಿ ಸಿದ್ದರಾಮೋತ್ಸವದಲ್ಲಿ ನಾವು ಜೊತೆಗಿದ್ದೇವೆ ಎಂದು ಪೋಸು ಕೊಟ್ಟಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಮತ್ತೆ ಶೀತಲ ಸಮರ ಎದ್ದಿದೆ.

ಬೆಂಗಳೂರು, ಸೆ.17: ಕಳೆದ ಬಾರಿ ಸಿದ್ದರಾಮೋತ್ಸವದಲ್ಲಿ ನಾವು ಜೊತೆಗಿದ್ದೇವೆ ಎಂದು ಪೋಸು ಕೊಟ್ಟಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಮತ್ತೆ ಶೀತಲ ಸಮರ ಎದ್ದಿದೆ. ಭಾರತ್ ಜೋಡೊ ಯಾತ್ರೆ ವೇಳೆ ತನ್ನ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ತಿರುವ ಡಿಕೆ ಶಿವಕುಮಾರ್ ಬಗ್ಗೆ ಸಿದ್ದರಾಮಯ್ಯ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಒಂದೆಡೆ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಯಶಸ್ಸಿಗಾಗಿ ಡಿಕೆಶಿ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದರೆ, ಸಿದ್ದು ಬಣದ ನಾಯಕರು ತೊಡರುಗಾಲು ಹಾಕುತ್ತಿದ್ದಾರೆ.

ಮಂಡ್ಯದಲ್ಲಿ ಶನಿವಾರ ನಡೆದ ಭಾರತ್ ಜೋಡೋ ಯಾತ್ರೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಇಬ್ಬರು ನಾಯಕರ ಒಳ ಜಗಳ ಬೀದಿಗೆ ಬಂದಿದೆ. ಬೆಳಗ್ಗೆ 11.30ಕ್ಕೆ ಕಾರ್ಯಕ್ರಮ ಆರಂಭ ಆಗಬೇಕಿದ್ದರೂ, ಡಿಕೆ ಶಿವಕುಮಾರ್ ಸಭೆಯ ಬಳಿಗೆ ಸುಳಿಯದೆ ತಡ ಮಾಡಿದ್ದಾರೆ. ಇದರ ನಡುವೆ, ಸಿದ್ದರಾಮಯ್ಯ ಸಭೆಗೆ ಆಗಮಿಸಿದ್ದು ಕೆಪಿಸಿಸಿ ಅಧ್ಯಕ್ಷರು ಬಾರದೆಯೇ ಸಭೆ ಆರಂಭಿಸುವಂತೆ ಮಾಡಿದ್ದಾರೆ. ಒಂದ್ಕಡೆ ಡಿಕೆಶಿಗೆ ಜೈಕಾರ, ಇನ್ನೊಂದ್ಕಡೆಯಿಂದ ಸಿದ್ದರಾಮಯ್ಯ ಪರ ಜೈಕಾರ ಘೋಷಣೆಗಳು ಕೇಳಿಬರುತ್ತಿದ್ದವು. ಇದರಿಂದ ಸಿಟ್ಟಾಗಿದ್ದ ಡಿಕೆಶಿ ಮಧ್ಯಾಹ್ನ 1.30ರ ವೇಳೆಗೆ ಸಭೆಗೆ ಆಗಮಿಸಿದ್ದು, ಅಷ್ಟರಲ್ಲಿ ಸಿದ್ದರಾಮಯ್ಯ ಅಲ್ಲಿಂದ ನಿರ್ಗಮಿಸಿದ್ದರು. ಡಿಕೆ ಶಿವಕುಮಾರ್ ಬರುವ ವೇಳೆಗೆ ಜನರು ಡಿಕೆಶಿಗೆ ಜೈಕಾರ ಕೂಗುತ್ತಾರೆ ಎಂದೇ ಸಿದ್ದರಾಮಯ್ಯ ಸಭೆಯಿಂದ ದೂರ ನಿಂತಿದ್ದರು.

ಆನಂತರ ಅರ್ಧ ಗಂಟೆ ಕಳೆದ ಬಳಿಕ ಸಿದ್ದರಾಮಯ್ಯ ಸಭೆಗೆ ಆಗಮಿಸಿದ್ದು, ಇಬ್ಬರು ನಾಯಕರು ತೋರಿಕೆಗೆ ಕೈಕುಲುಕಿದ್ದು ಬಿಟ್ಟರೆ ಪರಸ್ಪರ ಮಾತನಾಡಿಲ್ಲ. ಮುಖವನ್ನೂ ನೋಡಿಲ್ಲ. ಇದಲ್ಲದೆ, ಡಿಕೆಶಿ ಸಭೆಗೆ ಆಗಮಿಸುವ ವರೆಗೂ ಅಲ್ಲಿನ ಸ್ಥಳೀಯ ನಾಯಕರು ಕೂಡ ವೇದಿಕೆ ಹತ್ತಿರಲಿಲ್ಲ. ಕಳೆದ ಬಾರಿ ಮಂಡ್ಯ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಡಿಕೆಶಿ ಬೆಂಬಲಿಗ ಗಣಿಗ ರವಿಕುಮಾರ್ ಅವರನ್ನು ವೇದಿಕೆಗೆ ಬರುವಂತೆ ಪದೇ ಪದೇ ಆಹ್ವಾನಿಸಿದರೂ, ಅವರು ಸಭೆಗೆ ಆಗಮಿಸದೇ ಜನರ ನಡುವೆ ನಿಂತಿದ್ದರು. ಮಧ್ಯಾಹ್ನ ಡಿಕೆ ಶಿವಕುಮಾರ್ ಸಭೆಯತ್ತ ಬರುತ್ತಿದ್ದಂತೆ ಅವರ ಜೊತೆಗೆ ವೇದಿಕೆ ಏರಿದ್ದಾರೆ. ಆಮೂಲಕ ಮಂಡ್ಯದ ಸ್ಥಳೀಯ ನಾಯಕರಲ್ಲಿಯೂ ಡಿಕೆಶಿ ಮತ್ತು ಸಿದ್ದರಾಮಯ್ಯ ಬಣದ ತಿಕ್ಕಾಟ ಶುರುವಾಗಿದ್ದು, ಜನರೆದುರು ನಾಯಕರ ಶೀತಲ ಸಮರ ಬೀದಿಗೆ ಬಂದಂತಾಗಿದೆ.

Wake up now, fight climate change: RV Deshpande

ಶುಕ್ರವಾರವಷ್ಟೇ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಸಚಿವ ದೇಶಪಾಂಡೆ ಬಗ್ಗೆ ಡಿಕೆಶಿ ಬಹಿರಂಗ ಅಸಮಾಧಾನ ಹೇಳಿಕೊಂಡಿದ್ದರು. ದೇಶಪಾಂಡೆ ಅವರಲ್ಲಿ ಭಾರತ್ ಜೋಡೊ ಯಾತ್ರೆಗೆ ಜನ ಸೇರಿಸುವ ಬಗ್ಗೆ ಹೇಳಿದ್ದೆ. ಆಗಲ್ಲ ಎಂದಿದ್ದಾರೆ. ರಾಹುಲ್ ಪರವಾಗಿ ನಿಲ್ಲಲು ಆಗಲ್ಲ ಅಂದ್ರೆ ಬೇರೇನು ಮಾಡ್ತೀರಿ ಅಂತ ಕೇಳಬೇಕಾಗುತ್ತದೆ ಎಂದು ಡಿಕೆಶಿ ನೀಡಿದ್ದ ಹೇಳಿಕೆ, ಸಿದ್ದರಾಮಯ್ಯ ಬಣದ ದೇಶಪಾಂಡೆಗೆ ಚೇಳು ಕಡಿದಂತಾಗಿತ್ತು. ಅಷ್ಟೇ ಅಲ್ಲ, ಭಾರತ್ ಜೋಡೊ ಯಾತ್ರೆಗೆ ಶಾಸಕರು ಸಹಕಾರ ಕೊಡುತ್ತಿಲ್ಲ ಎಂದೂ ಡಿಕೆಶಿ ಹೇಳಿದ್ದರು. ನಾನು ಸ್ವಲ್ಪ ಫಾಸ್ಟ್ ಇದ್ದೇನೆ, ನನ್ನ ಜೊತೆ ಅಡ್ಜಸ್ಟ್ ಆಗುತ್ತಿಲ್ಲ ಎಂದು ವಿರೋಧಿಗಳನ್ನು ಕೆಣಕಿದ್ದರು. ಈ ಬಗ್ಗೆ ತಿರುಗೇಟು ನೀಡಿದ್ದ ದೇಶಪಾಂಡೆ, ಡಿಕೆಶಿ ತುಂಬ ಫಾಸ್ಟ್ ಇದ್ದಾರೆ, ಗೊತ್ತಿದೆ ಎಂದು ಹೇಳಿ ಕುಟುಕಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಮಂಡ್ಯದಲ್ಲಿ ಶನಿವಾರ ಭಾರತ್ ಜೋಡೋ ಬಗ್ಗೆ ಸಭೆ ನಡೆದಿದ್ದು, ಉಭಯ ಬಣಗಳ ನಡುವಿನ ತಿಕ್ಕಾಟ ಬೀದಿಗೆ ಬಂದಿದೆ.

ಮಂಡ್ಯದಲ್ಲಿ ಹಾಲಿ ಕಾಂಗ್ರೆಸ್ ನಲ್ಲಿರುವ ಜನತಾ ಪರಿವಾರ ಮೂಲದ ನಾಯಕರು ಸಿದ್ದರಾಮಯ್ಯ ಪರ ಇದ್ದರೆ, ಇತ್ತೀಚೆಗೆ ಕಾಂಗ್ರೆಸ್ ನಲ್ಲಿ ಗುರುತಿಸ್ಕೊಂಡು ಪಕ್ಷದಲ್ಲಿ ಡಿಕೆಶಿ ಮೂಲಕ ಸ್ಥಾನ ಗಿಟ್ಟಿಸಿಕೊಂಡಿರುವವರು ಡಿಕೆಶಿ ಗುಂಪಿನ ಪರ ಇದ್ದಾರೆ. ಹೇಗಿದ್ದರೂ, ಮಂಡ್ಯ ಪೂರ್ತಿ ಒಕ್ಕಲಿಗರ ಪ್ರಾಬಲ್ಯದ ಪ್ರದೇಶ. ಕಳೆದ ಚುನಾವಣೆಗೂ ಮುನ್ನ ಪೂರ್ತಿ ಜೆಡಿಎಸ್ ಬೆಲ್ಟ್ ಆಗಿದ್ದ ಮಂಡ್ಯದಲ್ಲಿ ಈಗ ಸ್ಥಿತಿ ಬದಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಎದುರು ಜೆಡಿಎಸ್ ನಾಯಕರು ತಮ್ಮ ಪ್ರತಿಷ್ಠೆ ಪಣಕ್ಕೊಡ್ಡಿ ಸೋತ ಬಳಿಕ ತಮ್ಮ ಇಮೇಜನ್ನು ಕಳಕೊಂಡಿದ್ದಾರೆ. ಇದೇ ವೇಳೆ, ಮತ್ತೊಬ್ಬ ಒಕ್ಕಲಿಗ ನಾಯಕ ಕಾಂಗ್ರೆಸ್ ಪಕ್ಷದ ಹಿಡಿತ ಸಾಧಿಸಿದ್ದು, ಸಮುದಾಯದ ಜನರಲ್ಲು ಒಡಕು ಸೃಷ್ಟಿಸಿದೆ. ಒಂದಷ್ಟು ನಾಯಕರು ಡಿಕೆಶಿ ಬೆನ್ನಿಗೆ ನಿಂತಿದ್ದರೆ, ಒಂದಷ್ಟು ಒಕ್ಕಲಿಗರು ಹಳೆಯ ತೆನೆ ಹೊತ್ತ ಮಹಿಳೆಯ ಪರವಾಗಿಯೇ ಇದ್ದಾರೆ.

Shivakumar, who is aspiring for the chief minister's post, has also managed to get an upperhand in the party affairs against his competitor and Opposition leader Siddaramaiah