ರಾಜ್ಯದಲ್ಲಿ ಮತ್ತೆ ಅತಂತ್ರ ವಿಧಾನಸಭೆ ; ಕಾಂಗ್ರೆಸ್ 95-105, ಬಿಜೆಪಿ 70-80 ಸ್ಥಾನಕ್ಕೆ ಕುಸಿತ, ಜೆಡಿಎಸ್ ಸ್ಥಾನವೂ ಕುಸಿತ, ಸ್ಥಾನ ಗಳಿಸುತ್ತಾ ಆಪ್ ? 

20-09-22 01:41 pm       Bangalore Correspondent   ಕರ್ನಾಟಕ

ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬಂದಿರುವುದರಿಂದ ರಾಜಕೀಯ ಪಕ್ಷಗಳು ಮತದಾರನ ಓಲೈಕೆಯಲ್ಲಿ ತೊಡಗಿವೆ. ಬಿಜೆಪಿ ಮತ್ತೆ ಬಹುಮತದಿಂದ ಅಧಿಕಾರ ಹಿಡಿಯಬೇಕೆಂದು ಹವಣಿಕೆಯಲ್ಲಿದ್ದರೆ, ಕಾಂಗ್ರೆಸ್ ಶತಾಯಗತಾಯ ಅಧಿಕಾರ ಹಿಡಿಯಲೇಬೇಕೆಂದು ಪಣ ತೊಟ್ಟಿದೆ.

ಬೆಂಗಳೂರು, ಸೆ.20: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬಂದಿರುವುದರಿಂದ ರಾಜಕೀಯ ಪಕ್ಷಗಳು ಮತದಾರನ ಓಲೈಕೆಯಲ್ಲಿ ತೊಡಗಿವೆ. ಬಿಜೆಪಿ ಮತ್ತೆ ಬಹುಮತದಿಂದ ಅಧಿಕಾರ ಹಿಡಿಯಬೇಕೆಂದು ಹವಣಿಕೆಯಲ್ಲಿದ್ದರೆ, ಕಾಂಗ್ರೆಸ್ ಶತಾಯಗತಾಯ ಅಧಿಕಾರ ಹಿಡಿಯಲೇಬೇಕೆಂದು ಪಣ ತೊಟ್ಟಿದೆ. ಈ ನಡುವೆ, ರಾಜಕೀಯ ಪಕ್ಷಗಳು ಖಾಸಗಿ ಕಂಪೆನಿಗಳಿಂದ ಸಮೀಕ್ಷೆಯನ್ನೂ ನಡೆಸುತ್ತಿದ್ದು ಜನಾಭಿಪ್ರಾಯ ತಿಳಿಯಲು ಮುಂದಾಗಿವೆ.‌ 

ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಈ ಬಾರಿಯೂ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎನ್ನುವ ವರದಿಗಳಿವೆ. ಅದರಲ್ಲೂ ಬಿಜೆಪಿಗೆ ದೊಡ್ಡ ಹಿನ್ನಡೆಯಾಗುವ ಬಗ್ಗೆ ಸರ್ವೇ ವರದಿಗಳು ಬಂದಿವೆಯಂತೆ. ಕಳೆದ ಮೇ - ಜೂನ್‌ ತಿಂಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಸಮಾನ ಸ್ಪರ್ಧೆ ಏರ್ಪಡಲಿದ್ದು, ಜೆಡಿಎಸ್‌ ಕೆಲವು ನಿರ್ದಿಷ್ಟ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಲಿದೆ ಎಂದು ಹೇಳಲಾಗಿತ್ತು. ಅಲ್ಲದೆ, ಪ್ರತಿಪಕ್ಷ ಕಾಂಗ್ರೆಸ್‌ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವಿನ ಸೀಟುಗಳ ಸಂಖ್ಯೆಯಲ್ಲಿ ಅಪಾರ ವ್ಯತ್ಯಾಸ ಇರುವುದಿಲ್ಲ ಎಂದು ವರದಿಗಳಲ್ಲಿ ಬಂದಿರುವ ಬಗ್ಗೆ ಹೇಳಲಾಗಿತ್ತು.

ಇದೀಗ ಆಗಸ್ಟ್‌ ತಿಂಗಳಲ್ಲಿ ಕೈಗೊಂಡ ಸಮೀಕ್ಷೆಯಲ್ಲಿಯೂ ಬಹುತೇಕ ಇದೇ ಫಲಿತಾಂಶ ಬರುವ ಲಕ್ಷಣಗಳಿವೆ. ಆದರೆ ಕಾಂಗ್ರೆಸ್ 95-105 ರ ನಡುವೆ ಸ್ಥಾನಗಳನ್ನು ಪಡೆಯುವ ಸಾಧ್ಯತೆ ಕಂಡುಬಂದಿದೆ. ಬಿಜೆಪಿ 70ರಿಂದ 80 ಸ್ಥಾನಕ್ಕೆ ಕುಸಿಯಲಿದೆ. ಇದೇ ವೇಳೆ, ತಾನೇ ಕಿಂಗ್ ಮೇಕರ್ ಎಂದು ಬೀಗುತ್ತಿರುವ ಜೆಡಿಎಸ್ 20 ಸ್ಥಾನ ಪಡೆಯಲಿದೆ ಎನ್ನುವ ಲೆಕ್ಕಾಚಾರದ ಫಲಿತಾಂಶ ಸಿಕ್ಕಿದೆ ಎನ್ನಲಾಗಿದೆ. ಹಾಗಾಗಿ, ಈ ಸಮೀಕ್ಷೆಯಡಿ ಉಳಿಯುವ 20ರಿಂದ 30 ಸ್ಥಾನಗಳನ್ನು ಯಾರೆಲ್ಲ ಹಂಚಿಕೊಳ್ಳುತ್ತಾರೆ ಎಂಬ ಬಗ್ಗೆ ಕುತೂಹಲ ಉಂಟಾಗಿದೆ.‌ ಆಪ್, ಕೆಆರ್ ಎಸ್, ಕಮ್ಯುನಿಸ್ಟ್ ಮತ್ತು ಪಕ್ಷೇತರರು ಸ್ಥಾನ ಪಡೆಯುತ್ತಾರಾ ಎನ್ನುವ ಬಗ್ಗೆ ಸಹಜ ಕುತೂಹಲ ಎದ್ದಿದೆ.  

Never thought..': Karnataka CM blames previous Congress govt for Bangalore  flood crisis | India News | Zee News

ಕಳೆದ ಆಗಸ್ಟ್‌ ತಿಂಗಳಲ್ಲಿ ರಾಜ್ಯಾದ್ಯಂತ ಸುರಿದ ಭಾರೀ ಮಳೆ ಮತ್ತು ಅದರಿಂದ ಉಂಟಾದ ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಕಾರ್ಯಾಚರಣೆ ಬಗ್ಗೆ ಜನರಲ್ಲಿ ಅಷ್ಟೊಂದು ಅಸಮಧಾನ ಇದೆಯಾ ಎನ್ನೋದ್ರ ಬಗ್ಗೆ ಸಮೀಕ್ಷೆಗಳಲ್ಲಿ ಜನರ ಅಭಿಪ್ರಾಯ ಕೇಳಲಾಗಿದೆ. ಇದಲ್ಲದೆ, ಕಳೆದ ಆರು ತಿಂಗಳಲ್ಲಿ ಬಿಜೆಪಿ ಸರಕಾರಕ್ಕೆ ಮುಜುಗರ ಸೃಷ್ಟಿಸಿರುವ ಭ್ರಷ್ಟಾಚಾರ ಪ್ರಕರಣಗಳಿಂದ ಜನರು ಯಾವ ರೀತಿಯ ಅಭಿಪ್ರಾಯ ಹೊಂದಿದ್ದಾರೆ, ಪ್ರಧಾನಿ ಮೋದಿಯ ಬಗ್ಗೆ ಅಭಿಪ್ರಾಯ ಯಾವ ರೀತಿ ಇದೆ ಎನ್ನುವ ಬಗ್ಗೆಯೂ ಸಮೀಕ್ಷೆ ನಡೆಸಲಾಗುತ್ತಿದೆ. ಪ್ರತಿಪಕ್ಷ ಕಾಂಗ್ರೆಸ್ ರಾಜ್ಯ ಸರಕಾರದ ಭ್ರಷ್ಟಾಚಾರ ಪ್ರಕರಣಗಳು, ಬೆಂಗಳೂರಿನಲ್ಲಿ ಮಳೆಯಿಂದಾದ ಅನಾಹುತವನ್ನು ಪ್ರಮುಖ ಅಜೆಂಡಾ ಮಾಡಿಕೊಂಡಿದೆ. ಬಿಜೆಪಿಗೆ ಪ್ರಧಾನಿ ಮೋದಿಯ ವರ್ಚಸ್ಸು ಮಾತ್ರ ವರದಾನ ಎನ್ನುವಂತಿದ್ದರೂ, ನಲ್ವತ್ತು ಪರ್ಸೆಂಟ್ ಕಮಿಷನ್ ಬಗ್ಗೆ ಮೋದಿ ಸುಮ್ಮನಾಗಿರುವುದು ಜನಾಭಿಪ್ರಾಯ ಬದಲಿಸಲು ಸಾಧ್ಯವಾಗುತ್ತಾ ಎನ್ನುವ ಜಿಜ್ಞಾಸೆಯೂ ಇದೆ. ಈ ಬಗ್ಗೆ ಜನರ ಅಭಿಪ್ರಾಯ ತಿಳಿಯಲು ಬಿಜೆಪಿ ಮೂರು ಖಾಸಗಿ ತಂಡಗಳಿಂದ ಸಮೀಕ್ಷೆ ನಡೆಸುತ್ತಲೇ ಇದೆ. 

ಬಿಜೆಪಿ - ಕಾಂಗ್ರೆಸ್ ಪೈಪೋಟಿ ನಡುವೆಯೂ ಆಮ್ ಆದ್ಮಿ ಪಕ್ಷ ನಿಧಾನಕ್ಕೆ ಜನರ ಗಮನ ಸೆಳೆಯಲು ಯಶಸ್ವಿಯಾಗಿದೆ.‌ ಆಮ್ ಆದ್ಮಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಹೀಗೆ ಪ್ರಮುಖ ನಗರಗಳನ್ನು ಕೇಂದ್ರೀಕರಿಸಿ ಪಕ್ಷದ ಚಟುವಟಿಕೆ ಆರಂಭಿಸಿದೆ. ಸದ್ದಿಲ್ಲದೆ ಮಾಡುತ್ತಿರುವ ಕಾರ್ಯಗಳು ಶಾಸಕ ಸ್ಥಾನ ಗೆಲ್ಲಲು ಆಗದಿದ್ದರೂ, ಗೆಲ್ಲುವ ಅಭ್ಯರ್ಥಿಯನ್ನು ಸೋಲಿಸಲು ಶಕ್ತವಾಗುತ್ತಾ ಅನ್ನೋದು ಕುತೂಹಲದ ಅಂಶ.