ಬೆಂಗಳೂರಿನಲ್ಲಿ ಐದು ಕಡೆ ಪಿಎಫ್ಐ ಕಚೇರಿಗಳಿಗೆ ಬೀಗ ; ಮಂಗಳೂರು ಮೂಲದ ಮೊಹಮ್ಮದ್ ಅಶ್ರಫ್ ದೆಹಲಿಯಲ್ಲಿ ಬಂಧನ ! 

30-09-22 01:47 pm       Bangalore Correspondent   ಕರ್ನಾಟಕ

ಕಾನೂನುಬಾಹಿರ ಚಟುವಟಿಕೆ (ಯುಎಪಿಎ) ಆರೋಪದಡಿ ಕೇಂದ್ರ ಸರಕಾರ ಪಿಎಫ್ಐ ಮತ್ತು ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸಂಘಟನೆಗೆ ಸೇರಿದ ಐದು ಕಚೇರಿಗಳಿಗೆ ಪೊಲೀಸರು ಬೀಗ ಜಡಿದಿದ್ದಾರೆ.

ಬೆಂಗಳೂರು, ಸೆ.30: ಕಾನೂನುಬಾಹಿರ ಚಟುವಟಿಕೆ (ಯುಎಪಿಎ) ಆರೋಪದಡಿ ಕೇಂದ್ರ ಸರಕಾರ ಪಿಎಫ್ಐ ಮತ್ತು ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸಂಘಟನೆಗೆ ಸೇರಿದ ಐದು ಕಚೇರಿಗಳಿಗೆ ಪೊಲೀಸರು ಬೀಗ ಜಡಿದಿದ್ದಾರೆ.

ಜೆ.ಸಿ.ನಗರದ ಎಸ್‌ಕೆ ಗಾರ್ಡನ್‌ನಲ್ಲಿ ಪಿಎಫ್‌ಐ ರಾಜ್ಯ ಕೇಂದ್ರ ಕಚೇರಿ, ಹೆಬ್ಬಾಳದ ಮನುರಾಯನಪಾಳ್ಯದಲ್ಲಿ ಪಿಎಫ್‌ಐ ಮಾಧ್ಯಮ ಕೇಂದ್ರ, ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿ ಪಿಎಫ್‌ಐ ಸಹ ಸಂಘಟನೆಯಾದ ಎಂಪವರ್‌ ಆಫ್‌ ಇಂಡಿಯಾ ಫೌಂಡೇಷನ್‌ ಕಚೇರಿ, ಕ್ವೀನ್ಸ್‌ ರಸ್ತೆಯ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಕಚೇರಿ, ಟ್ಯಾನರಿ ರಸ್ತೆಯಲ್ಲಿ ಆಲ್‌ ಇಂಡಿಯಾ ಇಮಾಮ್ಸ್‌ ಕೌನ್ಸಿಲ್‌ (ಎಐಐಸಿ) ಕಾರ್ಯಾಲಯ ಸೇರಿ ಐದು ಕಚೇರಿಗಳಿಗೆ ಪೊಲೀಸರು ಬೀಗ ಹಾಕಿದ್ದಾರೆ. 

ಪಿಎಫ್‌ಐ ಹಾಗೂ ಅದರ ಸಹ ಸಂಘಟನೆಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಸಂಘಟನೆಗೆ ಸೇರಿದ ಕಚೇರಿ, ಆಸ್ತಿಗಳನ್ನು ಜಪ್ತಿ ಮಾಡಲು ಸೂಚಿಸಲಾಗಿದೆ. ಇದರಂತೆ, ಗುರುವಾರ ಮಧ್ಯಾಹ್ನ ಬೆಂಗಳೂರು ನಗರದಲ್ಲಿ ಐದು ಕಚೇರಿಗಳಿಗೆ ಪೊಲೀಸರು ಬೀಗ ಹಾಕಿದ್ದಾರೆ.

Man Wanted In 4 Murder Cases Arrested By Delhi Police

ಈ ನಡುವೆ, ರಾಜ್ಯದ ವಿವಿಧೆಡೆ ಬಂಧಿಸಿರುವ ಪಿಎಫ್‌ಐ ಸಂಘಟನೆಯ 15 ಪ್ರಮುಖ ನಾಯಕರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದು ಪ್ರತ್ಯೇಕವಾಗಿ ಕರೆದೊಯ್ದು ಪೂರ್ವ ವಿಭಾಗದ ಪೊಲೀಸರು ಗುರುವಾರ ವಿವಿಧ ಕಡೆಗಳಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಬೆಂಗಳೂರಿನ ಬೆನ್ಸಿನ್‌ ಟೌನ್‌ ಹಾಗೂ ಹೆಬ್ಬಾಳದ ಮನೋರಾಯನಪಾಳ್ಯದ ಪಿಎಫ್‌ಐ ಕಚೇರಿಗಳಲ್ಲಿ ತನಿಖಾ ತಂಡ ಮಹಜರು ನಡೆಸಿದೆ. ಅಲ್ಲದೆ ಮಂಗಳೂರು, ಮೈಸೂರು, ಕಲುಬರಗಿ, ಶಿವಮೊಗ್ಗ ಹಾಗೂ ಕೊಪ್ಪಳ ಸೇರಿ 9 ಜಿಲ್ಲೆಗಳಲ್ಲಿ ಕೂಡಾ ಪಿಎಫ್‌ಐ ಕಚೇರಿಗಳಲ್ಲಿ ಸಾಕ್ಷ್ಯ ಸಂಗ್ರಹ ಪ್ರಕ್ರಿಯೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು ಮೂಲದ ಮೊಹಮ್ಮದ್ ಆಶ್ರಫ್‌ ದೆಹಲಿಯಲ್ಲಿ ಬಂಧನ 

ದೆಹಲಿಯಲ್ಲಿ ಬಂಧಿಸಿ ಕರೆತಂದಿರುವ ಮಂಗಳೂರು ಮೂಲದ ಮೊಹಮ್ಮದ್ ಆಶ್ರಫ್‌ ಅಂಕಜಾಲು ಪಿಎಫ್‌ಐ ಸಂಘಟನೆಯಲ್ಲಿ ಪ್ರಭಾವಿಯಾಗಿದ್ದ. ಕರ್ನಾಟಕ ಮಾತ್ರವಲ್ಲದೆ ನೆರೆ ರಾಜ್ಯಗಳಲ್ಲಿಯೂ ನೆಟ್ವರ್ಕ್ ಹೊಂದಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಲಭಿಸಿದೆ. ಮೊಹಮ್ಮದ್ ಅಶ್ರಫ್ ಮಂಗಳೂರಿನ ಕಂಕನಾಡಿಯಲ್ಲಿ ಮನೆ ಹೊಂದಿದ್ದರೂ, ಸ್ಥಳೀಯವಾಗಿ ಪಿಎಫ್ಐ ಸಂಘಟನೆಯಲ್ಲಿ ಗುರುತಿಸಿಕೊಂಡಿರಲಿಲ್ಲ. ಪಿಎಫ್ಐ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಗುರುತಿಸ್ಕೊಂಡು ದೆಹಲಿ ಘಟಕದಲ್ಲಿ ಸಕ್ರಿಯವಾಗಿದ್ದ ಎನ್ನಲಾಗಿದೆ. 

ಸೆ.22 ರಂದು ಎನ್ಐಎ ಮತ್ತು ಸ್ಥಳೀಯ ಪೊಲೀಸರ ದಾಳಿ ಸಂದರ್ಭದಲ್ಲಿ ಐದನೇ ಆರೋಪಿಯಾಗಿದ್ದ ಮೊಹಮ್ಮದ್ ಅಶ್ರಫ್ ಸೇರಿ ನಾಲ್ವರು ಕೈಗೆ ಸಿಕ್ಕಿರಲಿಲ್ಲ. ಆನಂತರ ಶೋಧ ಕಾರ್ಯದಲ್ಲಿ ತೊಡಗಿದ್ದ ಪೊಲೀಸರು ಮೊಹಮ್ಮದ್ ಅಶ್ರಫ್ ನನ್ನು ದೆಹಲಿಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಮೊಹಮ್ಮದ್ ಅಶ್ರಫ್, ಪಿಎಫ್‌ಐ ಸಹವರ್ತಿ ವಿದ್ಯಾರ್ಥಿ ಸಂಘಟನೆಯಾಗಿದ್ದ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಸಂಸ್ಥಾಪಕರ ಪೈಕಿ ಒಬ್ಬನಾಗಿದ್ದ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ಸೇರಿ ಇತರೆ ರಾಜ್ಯಗಳಲ್ಲಿ ಸಹ ಆಶ್ರಫ್‌ ಸಂಪರ್ಕ ಜಾಲ ಹೊಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.‌ 

ಪಿಎಫ್ಐ ರಾಜ್ಯ ಕಾರ್ಯದರ್ಶಿ ಆಗಿದ್ದ ಎ.ಕೆ. ಅಶ್ರಫ್ ಎನ್ನುವಾತ ಮಂಗಳೂರಿನ ಜೋಕಟ್ಟೆ ನಿವಾಸಿಯಾಗಿದ್ದು ಸೆ.22ರಂದೇ ಬಂಧನಕ್ಕೊಳಗಾಗಿದ್ದ.‌ ಮಂಗಳೂರು ಸೇರಿ ಜಿಲ್ಲೆಯಾದ್ಯಂತ ಪರಿಚಯ ಹೊಂದಿದ್ದ. ಆದರೆ ಮೊಹಮ್ಮದ್ ಅಶ್ರಫ್ ಬಗ್ಗೆ ಮಂಗಳೂರಿನಲ್ಲಿ ಹೆಚ್ಚಿನವರಿಗೆ ಪರಿಚಯ ಇಲ್ಲ. ಮೊಹಮ್ಮದ್ ಅಶ್ರಫ್ ಸೇರಿ ರಾಜ್ಯದ 19 ಮಂದಿ ಪ್ರಮುಖ ಪಿಎಫ್ಐ ನಾಯಕರ ವಿರುದ್ಧ ಬೆಂಗಳೂರಿನ ಕೆಜೆ ಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

Five offices of PFI sealed in Bangalore, AK Ashraf alleged of having powerful networks in four states of India.