ಮಕ್ಕಳ ಕಳ್ಳನೆಂದು ಯುವಕನಿಗೆ ಹಲ್ಲೆ ; ಪೊಲೀಸರ ವಶಕ್ಕೆ ನೀಡಿದ್ದ ವ್ಯಕ್ತಿ ಬಗ್ಗೆ ಅಪರಿಚಿತ ಶವ ಪ್ರಕಟಣೆ ! ಪೊಲೀಸರ ನಡೆ ಬಗ್ಗೆ ಸಂಶಯ 

07-10-22 03:19 pm       Bangalore Correspondent   ಕರ್ನಾಟಕ

ಬೆಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದ್ದು ಮಕ್ಕಳ ಕಳ್ಳನೆಂದು ವದಂತಿ ನಂಬಿದ ಜನರು ಉತ್ತರ ಭಾರತ ಮೂಲದ ವ್ಯಕ್ತಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.

ಬೆಂಗಳೂರು, ಅ.7 : ಬೆಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದ್ದು ಮಕ್ಕಳ ಕಳ್ಳನೆಂದು ವದಂತಿ ನಂಬಿದ ಜನರು ಉತ್ತರ ಭಾರತ ಮೂಲದ ವ್ಯಕ್ತಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಅದೇ ವ್ಯಕ್ತಿ ಬೇರೊಂದು ಜಾಗದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದು ಪೊಲೀಸರು ಅಪರಿಚಿತ ಶವವೆಂದು ಪ್ರಕಟಣೆ ಹೊರಡಿಸಿದ್ದು ಸಂಶಯಕ್ಕೆ ಕಾರಣವಾಗಿದೆ. 

ಕಳೆದ ಸೆ.23 ರಂದು ರಾತ್ರಿ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜ್ಯೋತಿಪುರದಲ್ಲಿ ಮಕ್ಕಳ ಕಳ್ಳನೆಂಬ ವದಂತಿ ನಂಬಿದ ಜನರು ಉತ್ತರ ಭಾರತ ಮೂಲದ ಯುವಕನಿಗೆ ಥಳಿಸಿದ್ದರು. ಮುಖ ಮೂತಿ ನೋಡದೆ ಥಳಿಸಿ, ಬಳಿಕ 112 ಗೆ ಕರೆ ಮಾಡಿ ಪೊಲೀಸರ ಕೈಗೆ ಒಪ್ಪಿಸಿದ್ದರು. ಅಪರಿಚಿತ ವ್ಯಕ್ತಿಯನ್ನ ಹೊಯ್ಸಳದಲ್ಲಿ ಕರೆದೊಯ್ದಿದ್ದ  ಪೊಲೀಸರು ಹೊರಗೆಲ್ಲೋ ಬಿಟ್ಟಿದ್ದರೋ ಅಥವಾ ಲಾಕಪ್ ನಲ್ಲಿ ಹೊಡೆದು ಮೃತಪಟ್ಟವನನ್ನು ಹೊರಗೆ ಬಿಸಾಕಿ ಅಪರಿಚಿತ ಶವವೆಂದು ತೋರಿಸುತ್ತಿದ್ದಾರೋ ಅನ್ನುವ ಸಂಶಯ ವ್ಯಕ್ತವಾಗಿದೆ. ಯಾಕಂದ್ರೆ, ಅದೇ ದಿನ ಬೆಳಗ್ಗೆ ಆಗುವಷ್ಟರಲ್ಲಿ ಆತ ಕೆ.ಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಣವಾಗಿ ಬಿದ್ದಿದ್ದ ಎನ್ನಲಾಗುತ್ತಿದ್ದು ಕೆಆರ್ ಪುರಂ ಪೊಲೀಸರು ಅಪರಿಚಿತ ಶವವೆಂದು ಪ್ರಕಟಣೆ ನೀಡಿದ್ದಾರೆ. 

ಹೀಗಾಗಿ ಪೊಲೀಸರ ನಿರ್ಲಕ್ಷ್ಯದಿಂದ ಯುವಕ ಸಾವನ್ನಪ್ಪಿದ ಬಗ್ಗೆ ಸಂಶಯ ಕೇಳಿಬಂದಿದೆ. ಕೆಆರ್ ಪುರಂ ಹಾಗೂ ರಾಮಮೂರ್ತಿ ನಗರ ಪೊಲೀಸರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಇದಲ್ಲದೆ, ಮಕ್ಕಳ ಕಳ್ಳನೆಂದು ಥಳಿಸಿದ್ದ ಸ್ಥಳೀಯರ ಬಳಿ ಪೊಲೀಸರೇ ಆತನ ಚಿಕಿತ್ಸೆಗಾಗಿ ಹಣ ವಸೂಲಿ ಮಾಡಿದ್ದರೆಂಬ ಆರೋಪವೂ ವ್ಯಕ್ತವಾಗಿದೆ. 

ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಮಾನವ ಹಕ್ಕು ಆಯೋಗ, ಡಿಜಿಪಿ, ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಸಾರ್ವಜನಿಕರು ಥಳಿಸಿ ಹೊಯ್ಸಳ ವಾಹನದಲ್ಲಿ ಕಳುಹಿಸಿರುವ ದೃಶ್ಯ ಲಭ್ಯವಾಗಿದ್ದು ಆ ಸಂದರ್ಭದಲ್ಲಿ ನಡೆದುಕೊಂಡೇ ಸಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದು ಹೇಗೆ?  ಹೊಯ್ಸಳ ವಾಹನದಲ್ಲಿ ತೆರಳಿದ್ದ ವ್ಯಕ್ತಿ ಅಪರಿಚಿತ ಶವ ಆಗಿದ್ದು ಹೇಗೆಂದು ಸ್ಥಳೀಯರು ಮತ್ತು ಸಾಮಾಜಿಕ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ.

Bangalore Man mistaken for child lifter beaten, arrested found dead later.