ಕಡೂರು ಭಾಗದಲ್ಲಿ ಚರ್ಮಗಂಟು ರೋಗ ವ್ಯಾಪಕ ; ಇನ್ನೂ ಸಿಗದ ಲಸಿಕೆ, 900ಕ್ಕೂ ಹೆಚ್ಚು ಪ್ರಕರಣ ಪತ್ತೆ 

19-10-22 11:34 am       HK News Desk   ಕರ್ನಾಟಕ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ವ್ಯಾಪಕವಾಗಿ ಹರಡುತ್ತಿರುವುದು ಪತ್ತೆಯಾಗಿದೆ. ತಾಲೂಕಿನ ಹಲವು ಗ್ರಾಮಗಳಲ್ಲಿ 900ಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿರುವ ಬಗ್ಗೆ ಅಧಿಕಾರಿಗಳು ದೃಢಪಡಿಸಿದ್ದು ಆತಂಕ ಮೂಡಿಸಿದೆ.

ಚಿಕ್ಕಮಗಳೂರು, ಅ.19: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ವ್ಯಾಪಕವಾಗಿ ಹರಡುತ್ತಿರುವುದು ಪತ್ತೆಯಾಗಿದೆ. ತಾಲೂಕಿನ ಹಲವು ಗ್ರಾಮಗಳಲ್ಲಿ 900ಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿರುವ ಬಗ್ಗೆ ಅಧಿಕಾರಿಗಳು ದೃಢಪಡಿಸಿದ್ದು ಆತಂಕ ಮೂಡಿಸಿದೆ.

ಮೂಡಿಗೆರೆ, ಕಡೂರು, ಬೇಲೂರು ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರು ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ರೋಗದಿಂದಾಗಿ ಹಾಲು ಉತ್ಪಾದನೆಯ ಮೇಲೆ ಪರಿಣಾಮ ಎದುರಾಗಲಿದೆ. ಕಳೆದ ಜುಲೈ ತಿಂಗಳಲ್ಲಿಯೇ ದೇವನೂರು, ಬಿಸಿಲೇಹಳ್ಳಿ ಭಾಗದ ಕೆಲವೆಡೆ ರೋಗ ಕಾಣಿಸಿಕೊಂಡಿತ್ತು. ನಿಧಾನವಾಗಿ ವ್ಯಾಪಿಸಿದ ರೋಗ, ತಾಲ್ಲೂಕಿನಲ್ಲಿ 900ಕ್ಕೂ ಹೆಚ್ಚು ರಾಸುಗಳಿಗೆ ಹಬ್ಬಿದೆ. ಆದರೆ ಈವರೆಗೂ ತಾಲೂಕು ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. 

ಪ್ರಕರಣ ಹೆಚ್ಚುತ್ತಿದ್ದರೂ ರಾಜ್ಯ ಸರಕಾರದಿಂದ ಸೂಕ್ತ ಲಸಿಕೆ ಸರಬರಾಜಾಗಿಲ್ಲ. ಹೀಗಾಗಿ ಮೊದಲ ಹಂತದಲ್ಲಿ ತಾಲ್ಲೂಕು ಆಡಳಿತದಿಂದಲೇ 10,300 ಡೋಸ್ ಲಸಿಕೆಯನ್ನು ಖರೀದಿಸಲಾಗಿದೆ. ರೋಗ ಕಾಣಿಸಿಕೊಂಡ ಸ್ಥಳದಿಂದ ಸುತ್ತ ಮುತ್ತ ನಾಲ್ಕು ಕಿ.ಮೀ. ವ್ಯಾಪ್ತಿಯಲ್ಲಿ ಆರೋಗ್ಯವಂತ ಹಸುಗಳಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ರೋಗ ಪೀಡಿತ ದನಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಡೂರು ತಾಲೂಕು ವ್ಯಾಪ್ತಿಯ 32 ಹಳ್ಳಿಗಳಲ್ಲಿ 982 ಪ್ರಕರಣ ಪತ್ತೆಯಾಗಿದೆ. ಸದ್ಯ ರೋಗ ಪೀಡಿತ ರಾಸುಗಳು ಚಿಕಿತ್ಸೆಗೆ ಸ್ಪಂದಿಸುತ್ತಿವೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.‌

ರೋಗದಿಂದಾಗಿ ಎರಡು ಹಸುಗಳು ಮರಣ ಹೊಂದಿವೆ. ಎರಡನೇ ಹಂತದಲ್ಲಿ 20 ಸಾವಿರ ಡೋಸ್ ಲಸಿಕೆ ತರಿಸಲು ಸಿದ್ಧತೆ ನಡೆಸಲಾಗಿದೆ. ರೋಗ ಪೀಡಿತ ಹಸುಗಳ ಹಾಲು ಕುಡಿಯುವುದರಿಂದ ರೋಗ ಮಾನವನಿಗೆ ಹರಡುವುದಿಲ್ಲ. ರೋಗದ ಕಾರಣಕ್ಕೆ ಜನರು ಆತಂಕ ಪಡಬೇಕಾಗಿಲ್ಲ ಎಂದು ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆಲವೆಡೆ ರೋಗ ಕಾಣಿಸಿಕೊಂಡಿರುವ ಮಾಹಿತಿಯಿದ್ದು ಜಿಲ್ಲಾಡಳಿತ 20 ಸಾವಿರ ಡೋಸ್ ಲಸಿಕೆ ತರಿಸಿಕೊಂಡಿದೆ. ಈಗಾಗಲೇ ಲಸಿಕೆ ನೀಡಲಾಗುತ್ತಿದೆ ಎನ್ನುವ ಮಾಹಿತಿಯನ್ನು ಮಂಗಳೂರಿನ ಪಶು ಇಲಾಖೆ ಅಧಿಕಾರಿಗಳು ನೀಡಿದ್ದಾರೆ.

Lumpy skin disease in cattle found in Chikkamagaluru, more than 900 cases found.