'ಕಾಂತಾರ' ರಿಷಬ್ ಮಾಡಿದ್ದಲ್ಲ, ದೇವರೇ ಮಾಡಿಸಿದ್ದು, ಕೊನೆಯ 25 ನಿಮಿಷ ರೋಮಾಂಚನ ; ನಟ ಜಗ್ಗೇಶ್ ಬಣ್ಣನೆ 

19-10-22 01:48 pm       Bangalore Correspondent   ಕರ್ನಾಟಕ

ದೇಶಾದ್ಯಂತ 'ಕಾಂತಾರ' ಸಿನಿಮಾ ಭಾರೀ ಸದ್ದು ಮಾಡಿದ್ದು ಭರ್ಜರಿ ಕಲೆಕ್ಷನ್ ಜೊತೆಗೆ ಬಾಕ್ಸ್ ಆಫೀಸ್ ಚಿಂದಿ ಮಾಡಿದೆ. ಹಿಂದಿ ಅವತರಣಿಕೆ ಬಂದ ಬಳಿಕ ಉತ್ತರ ಭಾರತದ ವಿವಿಧ ಭಾಷೆಗಳ ನಟರು ಸಿನಿಮಾ ನೋಡಿ ಮೆಚ್ಚುಗೆ ತೋರುತ್ತಿದ್ದಾರೆ.

ಬೆಂಗಳೂರು, ಅ.19 : ದೇಶಾದ್ಯಂತ 'ಕಾಂತಾರ' ಸಿನಿಮಾ ಭಾರೀ ಸದ್ದು ಮಾಡಿದ್ದು ಭರ್ಜರಿ ಕಲೆಕ್ಷನ್ ಜೊತೆಗೆ ಬಾಕ್ಸ್ ಆಫೀಸ್ ಚಿಂದಿ ಮಾಡಿದೆ. ಹಿಂದಿ ಅವತರಣಿಕೆ ಬಂದ ಬಳಿಕ ಉತ್ತರ ಭಾರತದ ವಿವಿಧ ಭಾಷೆಗಳ ನಟರು ಸಿನಿಮಾ ನೋಡಿ ಮೆಚ್ಚುಗೆ ತೋರುತ್ತಿದ್ದಾರೆ. ಇದೀಗ ಕನ್ನಡದ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಕಾಂತಾರ ಸಿನಿಮಾ ನೋಡಿ ತಮ್ಮದೇ ಶೈಲಿಯಲ್ಲಿ ಕೊಂಡಾಡಿದ್ದಾರೆ. 

ಈ ಬಗ್ಗೆ ತಮ್ಮ ಇನ್ಸ್​ಸ್ಟಾಗ್ರಾಂ ಖಾತೆಯಲ್ಲಿ ಜಗ್ಗೇಶ್ ಮನದಾಳ ಬರೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಒಳಿತು ಬಯಸಿ ಬದುಕುತ್ತಿರುವ ಜೀವ ನನ್ನದು. ಕಾರಣ ನನ್ನ ಬದುಕಿಗೆ ಸಕಲವೂ ನೀಡಿದ ನನ್ನ ತಾಯಿ ಕನ್ನಡ ಚಿತ್ರರಂಗ. ಬಾಲ್ಯದಿಂದ ಕನ್ನಡ ಹಾಗೂ ರಾಜಣ್ಣನ ಹುಚ್ಚು ಅಭಿಮಾನಿಯಾದ ನಾನು ಕರುನಾಡು ದಾಟಿ ಹೊರಹೋಗದೆ ಬದುಕಿದ್ದೇನೆ. ನನ್ನ ಕನ್ನಡದ ಕಲಾರಂಗ ಜಗಮೆಚ್ಚುವ ರಂಗ ಆಗಬೇಕು ಎಂದು ಸದಾ ಹಂಬಲಿಸುವ ಜೀವ ನನ್ನದು.

Kantara Movie Review: Rishab Shetty delivers a compelling and rooted film-  Cinema express

ಇಂದು ಅಮೇರಿಕದ ಮಾಲ್​ನಲ್ಲಿ ಕಾಂತಾರ ಸಿನಿಮಾ ನೋಡುವ ಅವಕಾಶ ನನಗೆ ಸಿಕ್ಕಿತು. ನಾನು ದಕ್ಷಿಣ ಕನ್ನಡದಲ್ಲಿರುವ ದೇವಾಲಯಗಳ ಭಕ್ತ. ವರ್ಷಕ್ಕೆ ಒಂದು ಬಾರಿ ಪೊಳಲಿ, ಕಟೀಲು, ಉಡುಪಿ ಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆಯುವುದು ನನ್ನ 30 ವರ್ಷದ ಅಭ್ಯಾಸ. ಇದು ನನ್ನ ಪ್ರಕಾರ ಶ್ರೇಷ್ಠ ದೇವಭೂಮಿ. ಆಧ್ಯಾತ್ಮಿಕ ಅನುಭವಕ್ಕೆ ಅಲ್ಲಿ ಸಂತೃಪ್ತ ಭಾವ ಸಿಗುತ್ತದೆ. ಇಂತಹ ನಾಡಿನಿಂದ ಅದ್ಭುತ ನಟ, ನಿರ್ದೇಶಕ ರಿಷಭ್ ಶೆಟ್ಟಿ ಹುಟ್ಟಿ ಬಂದಿರುವುದು ಕನ್ನಡ ಚಿತ್ರರಂಗಕ್ಕೆ ಅದ್ಭುತ ಕೊಡುಗೆ.

ಸಿನಿಮಾದ ಕೊನೆಯ 25 ನಿಮಿಷ ನಾನು ಎಲ್ಲಿರುವೆ ಎಂಬುದು ಮರೆತು ಹೋದಂತೆ ಭಾಸವಾಯಿತು. ಚಿತ್ರ ನೋಡಿದ ಮೇಲೆ ದೇಹ ಮನಸ್ಸು ಮೌನವಾಯಿತು. ಹೊರಬಂದಾಗ ಮಂತ್ರಾಲಯದ ನರಸಿಂಹಾಚಾರ್ ವಾಟ್ಸ್ಯಾಪ್ ಕರೆ ಮಾಡಿ ರಾಯರ ದರ್ಶನ ಮಾಡಿಸಿದರು. ಸಿನಿಮಾ ನೋಡಿ ನನಗೆ ಇದು ರಿಷಭ್ ಮಾಡಿದ ಸಿನಿಮಾವಲ್ಲ. ಬದಲಿಗೆ ಆತನ ಹಿರಿಯರು, ತಂದೆ-ತಾಯಿಯ ಆಶೀರ್ವಾದಿಂದ, ನಶಿಸುತ್ತಿರುವ ಆಧ್ಯಾತ್ಮಿಕ ಭಾವ ಮತ್ತೆ ಮನುಷ್ಯರಿಗೆ ನೆನಪಿಸಲು ದೇವರೆ ಬಂದು ಆತನ ಕೈಯಲ್ಲಿ ಕಾಂತಾರ ಎಂಬ ಅದ್ಭುತ ಸಿನಿಮಾ ಮಾಡಿಸಿದ್ದಾರೆ.

ದೇವರು ನೂರು ಕಾಲ ಆಯುಷ್ಯ, ಆರೋಗ್ಯ, ರಿಷಭ್​ ಶೆಟ್ಟಿಗೆ ಕೊಟ್ಟು ಕನ್ನಡ ಕಲಾರಂಗಕ್ಕೆ ಆತನ ಸೇವೆ ಇದೆ ರೀತಿ ಮುಂದುವರಿಯಲಿ ಎಂದು ನಟ ಜಗ್ಗೇಶ್ ಹಾರೈಸಿದ್ದಾರೆ.

Kantara movie is not by Rishab its by God, thrilling experience says Kannada Actor Jaggesh.