ಗಂಡ ನಿರುದ್ಯೋಗಿಯಾಗಿದ್ದರೂ ವಿಚ್ಚೇದಿತ ಪತ್ನಿಗೆ ಜೀವನಾಂಶ ನೀಡಲೇಬೇಕು ; ಹೈಕೋರ್ಟ್ 

25-02-23 02:52 pm       Bangalore Correspondent   ಕರ್ನಾಟಕ

ವಿಚ್ಚೇದನ ಪ್ರಕರಣದಲ್ಲಿ ಪತಿ ನಿರುದ್ಯೋಗಿಯಾಗಿದ್ದರೂ ಉದ್ಯೋಗ ಹುಡುಕಿ ಸಂಪಾದನೆ ಮಾಡಬೇಕು ಮತ್ತು ತನ್ನ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡಲೇಬೇಕು ಎಂದು ಬೆಂಗಳೂರಿನ ಹೈಕೋರ್ಟ್ ತೀರ್ಪು ನೀಡಿದೆ. 

ಬೆಂಗಳೂರು, ಫೆ.25 : ವಿಚ್ಚೇದನ ಪ್ರಕರಣದಲ್ಲಿ ಪತಿ ನಿರುದ್ಯೋಗಿಯಾಗಿದ್ದರೂ ಉದ್ಯೋಗ ಹುಡುಕಿ ಸಂಪಾದನೆ ಮಾಡಬೇಕು ಮತ್ತು ತನ್ನ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡಲೇಬೇಕು ಎಂದು ಬೆಂಗಳೂರಿನ ಹೈಕೋರ್ಟ್ ತೀರ್ಪು ನೀಡಿದೆ. 

ಮೇಲ್ಮನವಿ ಪ್ರಕರಣದಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀರ್ಪು ಪ್ರಕಟಿಸಿದ್ದು, ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡುವುದು ಪತಿಯ ಕರ್ತವ್ಯ. ಆದ್ದರಿಂದ ಆತ ನಿರುದ್ಯೋಗಿಯಾಗಿದ್ದರೆ, ಕೆಲಸವನ್ನು ಹುಡುಕಬೇಕು ಮತ್ತು ಸಂಪಾದಿಸಬೇಕು ಎಂದು ಹೇಳಿದೆ.

ಮೈಸೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪನ್ನ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಮೇಲಿನಂತೆ ತೀರ್ಪು ನೀಡಿದೆ.

ಅರ್ಜಿದಾರರು ತಾನು ಅನಾರೋಗ್ಯದಿಂದ ಬಳಲುತ್ತಿದ್ದು, ಸೂಕ್ತ ಕೆಲಸವಿಲ್ಲ. ಹೀಗಾಗಿ ಜೀವನಾಂಶ ಪಾವತಿಸುವ ಸ್ಥಿತಿಯಲ್ಲಿ ಇಲ್ಲ ಎಂದು ವಾದಿಸಿದ್ದರು. ಆದ್ರೆ, ಅರ್ಜಿಯನ್ನ ವಜಾಗೊಳಿಸಿರುವ ಹೈಕೋರ್ಟ್, ಪತಿ ತನ್ನ ಪತ್ನಿಗೆ ಮಾಸಿಕ 10,000 ರೂ. ಪರಿಹಾರ ಪಾವತಿಸುವ ಸ್ಥಿತಿಯಲ್ಲಿಲ್ಲ ಎಂಬುದು ಸ್ವೀಕಾರಾರ್ಹವಲ್ಲ. ಆತ ಕೆಲಸ ಮಾಡಲು ಸಮರ್ಥನಿದ್ದು, ಕೆಲಸವನ್ನ ಹುಡುಕಿಕೊಂಡು ಪರಿಹಾರ ನೀಡಬೇಕು ಎಂದು ನ್ಯಾಯಪೀಠ ಪುನರುಚ್ಚರಿಸಿದೆ. ಅದರಂತೆ, ಪತ್ನಿಗೆ 6,000 ರೂ. ಮತ್ತು ಮಗುವಿಗೆ 4,000 ರೂ. ಜೀವನಾಂಶ ನೀಡುವಂತೆ ತೀರ್ಪು ನೀಡಿದೆ.

Karnataka Court orders to pay for maintenance money to wife even if he is unemployed.