ಗುಟ್ಕಾ-ಪಾನ್‌ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-ಟರ್ನ್‌, ಆದೇಶ ಹಿಂಪಡೆದ ಸರ್ಕಾರ

14-08-26 05:32 pm       HK News Staffer   ಕರ್ನಾಟಕ

ಕೇವಲ ಎರಡು ದಿನಗಳ ಹಿಂದೆ ರಾಜ್ಯದಲ್ಲಿ ಜಾರಿಯಾದ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಒಂದು ವರ್ಷದ ಬ್ಯಾನ್ ಇದೀಗ ರದ್ದಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆದೇಶ ವಾಪಾಸ್‌ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರು , ಆ.14: ಕೇವಲ ಎರಡು ದಿನಗಳ ಹಿಂದೆ ರಾಜ್ಯದಲ್ಲಿ
ಜಾರಿಯಾದ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಒಂದು ವರ್ಷದ ಬ್ಯಾನ್ ಇದೀಗ ರದ್ದಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆದೇಶ ವಾಪಾಸ್‌ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

ರಾಜ್ಯಾದ್ಯಂತ ಗುಟ್ಕಾ ಹಾಗೂ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಒಂದು ವರ್ಷದ ನಿಷೇಧ ಹೇರಲಾಗಿತ್ತು. ಗುಟ್ಕಾ ಹಾಗೂ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ದಾಸ್ತಾನು, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಆಹಾರ ಸುರಕ್ಷತಾ ಆಯುಕ್ತರು ನಿಷೇಧಿಸಿದ್ದರು. ಇದೀಗ ಡಿಕೆ ಶಿವಕುಮಾ‌ರ್ ಇದನ್ನು ರದ್ದು ಮಾಡಲು ಸೂಚನೆ ನೀಡಿದ್ದಾರೆ.

ತನಗೆ ಮಾಹಿತಿ ನೀಡದೆ ಈ ಆದೇಶ ಹೊರಡಿಸಲಾಗಿದೆ. ಇದರಿಂದ ಹಲವಾರು ರೈತರು ನಷ್ಟ ಅನುಭವಿಸಲಿದ್ದಾರೆ ಎಂದು ಸಿಎಂ ಗರಂ ಆಗಿದ್ದು, ಕೂಡಲೇ ಆದೇಶ ಹಿಂಪಡೆಯುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಇದಕ್ಕೂ ಮೊದಲು ಗುರುವಾರ ಬಿಜೆಪಿ ಮತ್ತು ಕಾಂಗ್ರೆಸ್‌ ಶಾಸಕರ ನಿಯೋಗವೊಂದು ಸಿಎಂ ಬಳಿ ತೆರಳಿ ಆದೇಶ ಹಿಂಪಡೆಯುವಂತೆ ಮನವಿ ಮಾಡಿದ್ದರು. ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ, ಕಾಂಗ್ರೆಸ್ ಶಾಸಕ ಡಿಜಿ ಶಾಂತನೇಗೌಡ ನೇತೃತ್ವದ ನಿಯೋಗವು ಈ ಮನವಿ ಮಾಡಿತ್ತು.

ಕರ್ನಾಟಕದ ಮಲೆನಾಡು, ಕರಾವಳಿ ಮತ್ತು ಬಯಲು ಸೀಮೆಯ ಲಕ್ಷಾಂತರ ರೈತ ಕುಟುಂಬಗಳಿಗೆ ಅಡಿಕೆ ಪ್ರಮುಖ ಜೀವನೋಪಾಯವಾಗಿದೆ. ಆಹಾರ ಸುರಕ್ಷತೆ ಇಲಾಖೆಯು ಸಾರ್ವಜನಿಕ ಆರೋಗ್ಯದ ನೆಪದಲ್ಲಿ ಗುಟ್ಕಾ ಮತ್ತು ತಂಬಾಕು ಮಿಶ್ರಿತ ಪಾನ್ ಮಸಾಲಾಗಳನ್ನು ನಿಷೇಧಿಸಲು ಮುಂದಾದಾಗ, ಇಡೀ ಅಡಿಕೆ ಮಾರುಕಟ್ಟೆ ಕುಸಿಯುವ ಭೀತಿ ಎದುರಾಗಿತ್ತು. ಅಡಿಕೆಗೆ ಪ್ರಮುಖ ಮಾರುಕಟ್ಟೆಯಾಗಿರುವ ಈ ಉದ್ಯಮ ಸ್ಥಗಿತಗೊಂಡರೆ ರೈತರು ಸಾಲದ ಸುಳಿಗೆ ಸಿಲುಕಬೇಕಾಗುತ್ತಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ತಕ್ಷಣವೇ ಅರಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಯಾವುದೇ ವಿಳಂಬವಿಲ್ಲದೆ ರೈತರ ಪರವಾಗಿ ನಿಂತು ನಿಷೇಧದ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ.

ಸರ್ಕಾರದ ಈ ನಿರ್ಧಾರವನ್ನು ಕೃಷಿ ವಲಯ ಹಾಗೂ ಅಡಿಕೆ ಬೆಳೆಗಾರರ ಸಂಘಟನೆಗಳು ಮುಕ್ತಕಂಠದಿಂದ ಶ್ಲಾಘಿಸಿವೆ. ಒಂದು ವೇಳೆ ನಿಷೇಧ ಜಾರಿಯಲ್ಲಿದ್ದಿದ್ದರೆ ಕೇವಲ ರೈತರಿಗಷ್ಟೇ ಅಲ್ಲದೆ, ಕೃಷಿ ಕಾರ್ಮಿಕರು, ವರ್ತಕರು ಮತ್ತು ಮಾರುಕಟ್ಟೆಯನ್ನು ನಂಬಿದ್ದ ಕೋಟ್ಯಂತರ ರೂಪಾಯಿಗಳ ಗ್ರಾಮೀಣ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳುತ್ತಿತ್ತು. ಸರ್ಕಾರವು ಸರಿಯಾದ ಸಮಯಕ್ಕೆ ಮಧ್ಯಪ್ರವೇಶಿಸಿ ಆದೇಶವನ್ನು ರದ್ದುಗೊಳಿಸಿರುವುದರಿಂದ ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಸ್ಥಿರತೆ ಮತ್ತು ವಿಶ್ವಾಸ ಮೂಡುವಂತಾಗಿದೆ.