ಬೆಂಗಳೂರು - ಮೈಸೂರು 'ದಶಪಥ' ಟೋಲ್ ವಸೂಲಿ ; ಟೋಲ್ ಸಂಗ್ರಹದ ವಿರುದ್ಧ ಸವಾರರು ಕೆಂಡಾಮಂಡಲ,  ಮೊದಲ ದಿನವೇ ತಾಂತ್ರಿಕ ಸಮಸ್ಯೆ , ಪ್ರತಿಭಟನೆ ಬಿಸಿ

14-03-23 12:01 pm       HK News Desk   ಕರ್ನಾಟಕ

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ‌ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಶೇಷಗಿರಿಹಳ್ಳಿ ಟೋಲ್ ಬಳಿ ಪ್ರತಿಭಟನೆ ನಡೆಸಿದರು‌.

ರಾಮನಗರ, ಮಾ.14: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ‌ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಶೇಷಗಿರಿಹಳ್ಳಿ ಟೋಲ್ ಬಳಿ ಪ್ರತಿಭಟನೆ ನಡೆಸಿದರು‌.

ಹೆದ್ದಾರಿಯಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರು, ಬಿಜೆಪಿ ಸರ್ಕಾರ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಹೆದ್ದಾರಿ ಪ್ರಾಧಿಕಾರವು ಸರ್ವೀಸ್ ರಸ್ತೆಗಳನ್ನು ಪೂರ್ಣಗೊಳಿಸದೆಯೇ ಟೋಲ್ ಆರಂಭಿಸಿದೆ. ಶೇಷಗಿರಿಹಳ್ಳಿ, ಹೆಜ್ಜಾಲ ಬಳಿ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿಲ್ಲ. ಹೆಜ್ಜಾಲ ಬಳಿ ಶಾಲಾ ವಿದ್ಯಾರ್ಥಿಗಳಿಗೆ ಸ್ಕೈ ವಾಕ್ ನಿರ್ಮಿಸಿಲ್ಲ. ಹೀಗೆ ಅಪೂರ್ಣ ಕಾಮಗಾರಿ ನಡುವೆಯೇ ಹೆದ್ದಾರಿ ಟೋಲ್ ಆರಂಭಿಸಲಾಗಿದೆ ಎಂದು ದೂರಿದರು.

ಟೋಲ್ ಸಂಗ್ರಹ ವಿರೋಧಿಸಿ ಶೇಷಗಿರಿಹಳ್ಳಿ ಟೋಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಮೂರು ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಪ್ರತಿಭಟನಾಕಾರರನ್ನು ರಾಮನಗರಕ್ಕೆ ಕರೆದೊಯ್ಯಲಾಯಿತು

ಮೊದಲ ದಿನವೇ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್​ವೇ ಟೋಲ್​ನಲ್ಲಿ ತಾಂತ್ರಿಕ ಸಮಸ್ಯೆ, ವಾಹನ ಸವಾರರ ಆಕ್ರೋಶ ; 

ಟೋಲ್ ವಿರುದ್ಧ ವಾಹನ ಸವಾರರು ಗರಂ ಆಗಿದ್ದಾರೆ. ಟೋಲ್ ಸಂಗ್ರಹ ಆರಂಭವಾದ ಮೊದಲ ದಿನವೇ ಬೆಳ್ಳಂ ಬೆಳಗ್ಗೆಯೇ ಟೋಲ್ ಸಿಬ್ಬಂದಿ ವಿರುದ್ಧ ವಾಹನ ಸವಾರರು ಸಿಡಿಮಿಡಿಗೊಂಡಿದ್ದಾರೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸರಿಯಾದ ಸಿದ್ಧತೆ ಮಾಡಿಕೊಂಡಿಲ್ಲ. ಟೆಕ್ನಿಕಲ್ ಎರರ್ ಆಗುತ್ತಿದೆ. ಫಾಸ್ಟ್ಯಾಗ್ ಇದ್ರೂ ಟೋಲ್ ಪ್ಲಾಜಾ ಸ್ಕ್ಯಾನ್ ತೆಗೆದುಕೊಳ್ಳುತ್ತಿಲ್ಲ. ಸ್ಕ್ಯಾನ್ ಆಗೋದ್ರಲ್ಲಿ ವಿಳಂಬವಾಗುತ್ತಿದೆ. ಅಲ್ಲದೆ ಟೋಲ್ ಕಂಬಿ ಕೂಡ ಸರಿಯಾಗಿ ವರ್ಕ್ ಆಗುತ್ತಿಲ್ಲ. ಸ್ಕ್ಯಾನ್ ಆಗಿ ವಾಹನ ಚಲಿಸುವಾಗಲೇ ವಾಹನದ ಮೇಲೆ ಕಂಬಿ ಬೀಳುತ್ತಿದೆ. ಹೀಗಾಗಿ ವಾಹನ ಚಾಲಕರು ಗರಂ ಆಗುತ್ತಿದ್ದಾರೆ. ಸಿದ್ಧತೆ ಮಾಡಿಕೊಳ್ಳದೇ ಯಾಕೆ ಟೋಲ್‌ ತಗೋತಿರಿ ಅಂತ ‌ಅವಾಜ್ ಹಾಕುತ್ತಿದ್ದಾರೆ.

ಇನ್ನು ಈ ಬಗ್ಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಕೆ ಬಳಿ ಮಾತನಾಡಿದ ವಾಹನ ಸವಾರರೊಬ್ಬರು ಆಕ್ರೋಶ ಹೊರ ಹಾಕಿದ್ದಾರೆ. ಸಿದ್ಧತೆಯಿಲ್ಲದೇ ಟೋಲ್‌ ದರ ಸಂಗ್ರಹಿಸಲಾಗುತ್ತಿದೆ. ಸರಿಯಾದ ವ್ಯವಸ್ಥೆ ಇಲ್ಲ, ಟೋಲ್ ಕೂಡ ಸರಿಯಾಗಿ ವರ್ಕ್ ಆಗ್ತಿಲ್ಲ. ಟೋಲ್ ಕಂಬಿ ಕಾರಿನ ಮೇಲೆ ಬೀಳುತ್ತಿದೆ, ಗ್ಲಾಸ್ ಒಡೆದು ಹೋದ್ರೆ ಏನ್ಮಾಡಬೇಕು. ಮೊದಲು ಟೋಲ್ ವ್ಯವಸ್ಥೆ ಸರಿ‌ ಮಾಡಲಿ. ಟೋಲ್ ತಗೋತಾರೆ ಅನ್ನೋದೆ ಗೊತ್ತಿರಲಿಲ್ಲ. ನಿನ್ನೆ ಸಂಜೆಯೇ ಇಲ್ಲಿಂದ ಹೋಗಿದ್ದೀನಿ. ನಿನ್ನೆನೇ ಮಾಹಿತಿ ನೀಡಬೇಕಿತ್ತು. ಕೊನೆ ಪಕ್ಷ ಮುಂದೆ ನೊಟೀಸ್ ಆದ್ರೂ ಹಾಕಬೇಕಿತ್ತು ಎಂದು ಟೋಲ್ ವಿರುದ್ಧ ವಾಹನ ಸವಾರ ಸತೀಶ್ ಆಕ್ರೋಶ ಹೊರ ಹಾಕಿದರು.

ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ;

ಈ ನಡುವೆ ಟೋಲ್‌ ಪ್ಲಾಜಾದ ಎದುರು ವಿವಿಧ ಕನ್ನಡ ಪರ ಸಂಘಟನೆಗಳು, ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಟೋಲ್‌ ದರ ಕಡಿಮೆ ಮಾಡಬೇಕು. ಮೊದಲು ಸರ್ವಿಸ್‌ ರಸ್ತೆಯನ್ನು ಪೂರ್ಣಗೊಳಿಸಿ, ಶೌಚಾಲಯ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದವು. ಪೊಲೀಸರು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದರು. ಮೂರು ಬಸ್‌ಗಳಲ್ಲಿ ಪ್ರತಿಭನಾನಿರಂತರನ್ನು ಬಿಡದಿ ಪೊಲೀಸ್ ಠಾಣೆಯತ್ತ ಕರೆದುಕೊಂಡು ಹೋಗುತ್ತಿದ್ದಾರೆ. ಇತ್ತ ಈ ವಿರೋಧದ ನಡುವೆ ಹೆದ್ದಾರಿ ಪ್ರಾಧಿಕಾರದಿಂದ ಟೋಲ್‌ ಶುಲ್ಕ ಸಂಗ್ರಹವು ಮುಂದುವರೆದಿದೆ. ನಿರಂತರ ಪ್ರತಿಭಟನೆ ಹಿನ್ನೆಲೆ ಪೊಲೀಸರು ಟೋಲ್‌ ಕೇಂದ್ರದ ಬಳಿಯೇ ಬೀಡುಬಿಟ್ಟಿದ್ದಾರೆ.

ಯಾವುದಕ್ಕೆ ಎಷ್ಟು ಶುಲ್ಕ?

  • ಕಾರು, ಜೀಪ್​​, ವ್ಯಾನ್​ಗೆ ಏಕಮುಖ ಸಂಚಾರಕ್ಕೆ 135 ರೂ ದರ
  • ಕಾರು, ಜೀಪ್​​​, ವ್ಯಾನ್​​ಗೆ​ ಎರಡು ಕಡೆ ಸಂಚಾರಕ್ಕೆ 205 ರೂ.
  • ಸ್ಥಳೀಯ ವಾಹನಗಳ ಏಕಮುಖ ಸಂಚಾರಕ್ಕೆ 70 ರೂ. ನಿಗದಿ
  • ಕಾರು, ಜೀಪ್​​​, ವ್ಯಾನ್​​ಗಳಿಗೆ ತಿಂಗಳ ಪಾಸ್​​ ದರ 4,425 ರೂ.
  • ಲಘು ಸರಕುವಾಹನ, ಮಿನಿ ಬಸ್​ಗಳ ಏಕಮುಖ ಸಂಚಾರಕ್ಕೆ 220 ರೂ
  • ಲಘು ಸರಕುವಾಹನ, ಮಿನಿ ಬಸ್​ಗಳ ಎರಡು ಕಡೆ ಸಂಚಾರಕ್ಕೆ 330 ರೂ
  • ಲಘು ಸರಕುವಾಹನ, ಮಿನಿ ಬಸ್​ಗಳಿಗೆ ತಿಂಗಳ ಪಾಸ್​ ದರ 7315 ರೂ
  • ಟ್ರಕ್‌/ಬಸ್‌ ಏಕಮುಖ ಸಂಚಾರಕ್ಕೆ ಟೋಲ್​ ದರ 460 ರೂ. ನಿಗದಿ
  • ಟ್ರಕ್‌/ಬಸ್‌ ಎರಡು ಕಡೆ ಸಂಚಾರಕ್ಕೆ 690 ರೂಪಾಯಿ ನಿಗದಿ
  • ಟ್ರಕ್‌/ಬಸ್​​ಗಳ ತಿಂಗಳ ಟೋಲ್ ಪಾಸ್​ ದರ 15,325 ರೂ. ನಿಗದಿ
  • 3 ಆಕ್ಸೆಲ್‌ ವಾಣಿಜ್ಯ ವಾಹನ ಏಕಮುಖ ಸಂಚಾರ ₹500, ಎರಡು ಕಡೆ ₹750
  • ಅತಿ ಭಾರದ ವಾಹನಗಳು ಏಕಮುಖ ಸಂಚಾರಕ್ಕೆ 880 ರೂ. ನಿಗದಿ
  • ಅತಿ ಭಾರದ ವಾಹನಗಳು ಎರಡು ಕಡೆ ಸಂಚಾರಕ್ಕೆ ₹1315 ದರ ನಿಗದಿ

A massive protest took place near Sheshagiri Halli toll on newly-inaugurated Mysuru-Bengaluru Expressway on Tuesday, over fee being collected “without facilities". The highway was inaugurated by Prime Minister Narendra Modi on Sunday.