ಕರೆ ಮಾಡು, ವಾಟ್ಸಪ್ ಚಾಟ್ ಮಾಡು ಎಂದು ಕಿರುಕುಳ ; ಸಹೋದ್ಯೋಗಿ ಮಹಿಳೆ ಆತ್ಮಹತ್ಯೆ, ಚೆಸ್ಕಾಂ ಎಇಇ ವಿರುದ್ಧ ಪ್ರಕರಣ 

15-03-23 12:53 pm       HK News Desk   ಕರ್ನಾಟಕ

ಕರೆ ಮಾಡು, ವಾಟ್ಸಪ್ ಚಾಟ್ ಮಾಡು ಎಂದು ಸಹೋದ್ಯೋಗಿ ಮಹಿಳೆಗೆ ಮೇಲಧಿಕಾರಿ ಕಿರುಕುಳ ನೀಡಿದ್ದು ಇದರಿಂದ ಬೇಸತ್ತ ಚೆಸ್ಕಾಂ ಕಂಪ್ಯೂಟರ್ ಆಪರೇಟರ್ ಆಗಿದ್ದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿಯಲ್ಲಿ ನಡೆದಿದೆ. 

ಮಡಿಕೇರಿ, ಮಾ.15 : ಕರೆ ಮಾಡು, ವಾಟ್ಸಪ್ ಚಾಟ್ ಮಾಡು ಎಂದು ಸಹೋದ್ಯೋಗಿ ಮಹಿಳೆಗೆ ಮೇಲಧಿಕಾರಿ ಕಿರುಕುಳ ನೀಡಿದ್ದು ಇದರಿಂದ ಬೇಸತ್ತ ಚೆಸ್ಕಾಂ ಕಂಪ್ಯೂಟರ್ ಆಪರೇಟರ್ ಆಗಿದ್ದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿಯಲ್ಲಿ ನಡೆದಿದೆ. 

ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದ ಸೌಮ್ಯ ಮೃತ ಮಹಿಳೆ.‌ ಈ ಬಗ್ಗೆ ಚೆಸ್ಕಾಂ ಮಡಿಕೇರಿ ವಿಭಾಗದ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ವಿನಯ್ ವಿರುದ್ಧ ಪೊಲೀಸರು ಆತ್ಮಹತ್ಯೆಗೆ ಪ್ರೇರಣೆಯೆಂದು ಪ್ರಕರಣ ದಾಖಲಿಸಿದ್ದಾರೆ. 2022ರ ಮೇ‌ ತಿಂಗಳಲ್ಲಿ ಮಡಿಕೇರಿ ಚೆಸ್ಕಾಂ ಕಚೇರಿಗೆ ಕಂಪ್ಯೂಟರ್ ಆಪರೇಟರ್ ಆಗಿ ಸೌಮ್ಯಾ ಕೆಲಸಕ್ಕೆ ಸೇರಿದ್ದರು. ಸೌಮ್ಯಾಗೆ ಕೆಲಸ ಮಾಡುತ್ತಿದ್ದ ವೇಳೆ ಮೇಲಧಿಕಾರಿ ವಿನಯ್ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು ಫೋನ್ ಮಾಡು, ವಾಟ್ಸಪ್ ಚಾಟ್ ಮಾಡುವಂತೆ ಒತ್ತಾಯ ಮಾಡಿದ್ದ. 

ಈ ಬಗ್ಗೆ ಮಡಿಕೇರಿ ಮಹಿಳಾ ಠಾಣೆಗೆ ಸೌಮ್ಯಾ ಪತಿ ದೂರು ನೀಡಿದ್ದರು. ಸೌಮ್ಯ ಪತಿ ನಿವೃತ್ತ ಸೈನಿಕನಾಗಿದ್ದು ಪೊಲೀಸರಿಗೆ ಕ್ರಮ ಕೈಗೊಳ್ಳಲು ಒತ್ತಡ ಹೇರಿದ್ದರು. ಇದರಿಂದ ಎದ್ದಿರುವ ಗೊಂದಲದಿಂದ ಮನನೊಂದು ಸೌಮ್ಯಾ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.‌ ಚಿಕಿತ್ಸೆ ಫಲಕಾರಿಯಾಗದೆ ಸೌಮ್ಯ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಚೆಸ್ಕಾಂ ಎಇಇ ವಿನಯ್ ವಿರುದ್ಧ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Madikeri Chescom AEE alleged of harassment, woman commits suicide.