ತಮ್ಮ ನಾಯಕರಿಗೆ ಟಿಕೆಟ್ ನೀಡಬೇಕೆಂದು ಆಗ್ರಹ  ; ತಳ್ಳಾಟದಿಂದ ರೊಚ್ಚಿಗೆದ್ದ ಸಿದ್ದರಾಮಯ್ಯ, ಕಾರ್ಯಕರ್ತನಿಗೆ ಕಪಾಳ ಮೋಕ್ಷ

24-03-23 04:38 pm       Bangalore Correspondent   ಕರ್ನಾಟಕ

ಟಿಕೆಟ್ ಬೇಡಿಕೆ ಮುಂದಿಟ್ಟು ಸಿದ್ದರಾಮಯ್ಯ ನಿವಾಸದಲ್ಲಿ ಹಾಲಿ ಶಾಸಕ ಹರಿಹರ ರಾಮಪ್ಪ ಹಾಗೂ ವಿಧಾನಪರಿಷತ್ ಬಿಜೆಪಿ ಸದಸ್ಯ ಆರ್.‌ಶಂಕರ್ ಪರವಾಗಿ ಕಾರ್ಯಕರ್ತರು ಜಮಾಯಿಸಿದ್ದರು.

ಬೆಂಗಳೂರು, ಮಾ.24: ಟಿಕೆಟ್ ಬೇಡಿಕೆ ಮುಂದಿಟ್ಟು ಸಿದ್ದರಾಮಯ್ಯ ನಿವಾಸದಲ್ಲಿ ಹಾಲಿ ಶಾಸಕ ಹರಿಹರ ರಾಮಪ್ಪ ಹಾಗೂ ವಿಧಾನಪರಿಷತ್ ಬಿಜೆಪಿ ಸದಸ್ಯ ಆರ್.‌ಶಂಕರ್ ಪರವಾಗಿ ಕಾರ್ಯಕರ್ತರು ಜಮಾಯಿಸಿದ್ದರು. ಕಾರ್ಯಕರ್ತರ ಜೊತೆಗೆ ಮಾತನಾಡಿಸಲು ಸಿದ್ದರಾಮಯ್ಯ ಆಗಮಿಸಿದ ಸಂದರ್ಭದಲ್ಲಿ ನಡೆದ ತಳ್ಳಾಟದಿಂದ ಗರಂ ಆದ ಸಿದ್ದು, ಕಾರ್ಯಕರ್ತರೊಬ್ಬರ ಕಪಾಳಕ್ಕೆ ಬಾರಿಸಿದ ಪ್ರಸಂಗ ನಡೆಯಿತು.

ಶುಕ್ರವಾರ ಬೆಳಗ್ಗೆ ಶಿವಾನಂದ ಸರ್ಕಲ್ ಬಳಿ ಇರುವ ಸಿದ್ದರಾಮಯ್ಯ ನಿವಾಸಕ್ಕೆ ಶಾಸಕ ರಾಮಪ್ಪ ಬೆಂಬಲಿಗರು ಆಗಮಿಸಿದ್ದರು. ರಾಮಪ್ಪ ‌ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಬಲಿಗರು ಜಮಾಯಿಸಿ ಟಿಕೆಟ್ ‌ನೀಡುವಂತೆ ಆಗ್ರಹಿಸಿದರು. ಮತ್ತೊಂದು ‌ಕಡೆಯಲ್ಲಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಆರ್. ಶಂಕರ್ ಬೆಂಬಲಿಗರು ಕೂಡಾ ಆಗಮಿಸಿದ್ದರು. ರಾಣೆಬೆನ್ನೂರು ಕ್ಷೇತ್ರದ ಟಿಕೆಟ್ ನೀಡುವಂತೆ ಕಾರ್ಯಕರ್ತರು ಸಿದ್ದರಾಮಯ್ಯ ಬಳಿ ಒತ್ತಾಯಿಸಿದರು.

ಈ ವೇಳೆ ಕಾರ್ಯಕರ್ತರ ಜೊತೆಗೆ ಮಾತನಾಡಲು ಸಿದ್ದರಾಮಯ್ಯ ಆಗಮಿಸಿದರು. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಜೊತೆ ಮಾತನಾಡಲು ಕಾರ್ಯಕರ್ತರು ಮುಗಿಬಿದ್ದರು. ಈ ವೇಳೆ ಉಂಟಾದ ತಳ್ಳಾಟದಿಂದ ಕೋಪಗೊಂಡ ಸಿದ್ದರಾಮಯ್ಯ ಕಾರ್ಯಕರ್ತನೊಬ್ಬನಿಗೆ ಕಪಾಲಮೋಕ್ಷ ಮಾಡಿದರು.

ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಅಂತಿಮ ಹಂತದ ಲಾಬಿ‌ ನಡೆಯುತ್ತಿದೆ. ಅದರಲ್ಲೂ ರಾಣೆಬೆನ್ನೂರು ಟಿಕೆಟ್ ಗಾಗಿ ಆರ್. ಶಂಕರ್ ಬೆಂಬಲಿಗರು ಸಿದ್ದರಾಮಯ್ಯ ಮನೆಗೆ ಬಂದಿರುವುದು ಕುತೂಹಲ ಕೆರಳಿಸಿದೆ. ಆರ್. ಶಂಕರ್ ಕಾಂಗ್ರೆಸ್ ಸೇರ್ಪಡೆಗೆ ಪ್ರಯತ್ನಿಸಿದ್ದರು. ಆದರೆ ಅದಕ್ಕೆ ಸಿದ್ದರಾಮಯ್ಯ ‌ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಇದೆ. ಈ‌ ನಡುವೆ ಅವರ ಬೆಂಬಲಿಗರು ಸಿದ್ದರಾಮಯ್ಯ ಮನೆಯಲ್ಲಿ ಜಮಾಯಿಸಿ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದಾರೆ.

Congress leader Siddaramaiah today slapped a man when he was reportedly surrounded by a group of supporters demanding election ticket for a party MLA.