ಬೆಳಗಾವಿಯಲ್ಲಿ ಗೆದ್ದ ಸಾಹುಕಾರ್ ಹಠ ; ರಾಜ್ಯ ನಾಯಕರಿಗೆ ಸಡ್ಡು ಹೊಡೆದು ಆಪ್ತರಿಗೆ ಸೀಟು ಕೊಡಿಸಿದ ಜಾರಕಿಹೊಳಿ, ಪ್ರಬಲ ನಾಯಕರ ನಿರ್ಲಕ್ಷ್ಯ! 

13-04-23 08:07 pm       HK News Desk   ಕರ್ನಾಟಕ

ಬೆಳಗಾವಿ ಜಿಲ್ಲೆಯಲ್ಲಿ ಸಾಹುಕಾರ್ ರಮೇಶ್ ಜಾರಕಿಹೊಳಿ ಹಠ ಗೆದ್ದಿದೆ.‌ ಸಿಡಿ ಪ್ರಕರಣದ ಬಳಿಕ ತನ್ನನ್ನು ದೂರವಿಟ್ಟಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಬಿಜೆಪಿ ರಾಜ್ಯ ನಾಯಕರಿಗೆ ಸಡ್ಡು ಹೊಡೆದು ತನ್ನ ಆಪ್ತರಿಗೆ ಚುನಾವಣೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬೆಳಗಾವಿ, ಎ.13 : ಬೆಳಗಾವಿ ಜಿಲ್ಲೆಯಲ್ಲಿ ಸಾಹುಕಾರ್ ರಮೇಶ್ ಜಾರಕಿಹೊಳಿ ಹಠ ಗೆದ್ದಿದೆ.‌ ಸಿಡಿ ಪ್ರಕರಣದ ಬಳಿಕ ತನ್ನನ್ನು ದೂರವಿಟ್ಟಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಬಿಜೆಪಿ ರಾಜ್ಯ ನಾಯಕರಿಗೆ ಸಡ್ಡು ಹೊಡೆದು ತನ್ನ ಆಪ್ತರಿಗೆ ಚುನಾವಣೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬೆಳಗಾವಿ ಭಾಗದಲ್ಲಿ ಜಾರಕಿಹೊಳಿ ಆಪ್ತರಾದ ಮಹೇಶ್ ಕುಮಟಳ್ಳಿ, ಶ್ರೀಮಂತ್ ಪಾಟೀಲ್, ನಾಗೇಶ್ ಮನ್ನೋಳ್ಕರ್, ವಿಠಲ್ ಹಾಲ್ಗೇಕರ್, ಚಿಕ್ಕ ರೇವಣ್ಣ ಸೇರಿದಂತೆ ಎಲ್ಲ ಆಪ್ತರಿಗೂ ಟಿಕೆಟ್ ನೀಡಿದೆ. ಚುನಾವಣೆ ಗೆಲ್ಲಲು ಸಮರ್ಥರಾಗಿದ್ದ ಬೆಳಗಾವಿ ಗ್ರಾಮಾಂತರದ ಮಾಜಿ ಶಾಸಕ ಸಂಜಯ ಪಾಟೀಲ್, ರಾಮದುರ್ಗದ ಹಾಲಿ ಶಾಸಕ ಮಹದೇವಪ್ಪ ಯಾದವಾಡ, ಅಥಣಿಯ ಎಂಎಲ್ಸಿ ಲಕ್ಷ್ಮಣ ಸವದಿ, ಖಾನಾಪುರದ ಮಾಜಿ ಶಾಸಕ ಅರವಿಂದ ಪಾಟೀಲ್, ಸೋನಾಲಿ ಸರ್ನೋಬತ್ ಅವರನ್ನು ಬದಿಗಿಟ್ಟು ಪಕ್ಷವು ಜಾರಕಿಹೊಳಿ ಆಪ್ತರಿಗೆ ಟಿಕೆಟ್ ನೀಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. 

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರ ರಚನೆ ಮಾಡುವಲ್ಲಿ ರಮೇಶ್ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಅವರೊಂದಿಗೆ ಪಕ್ಷಕ್ಕೆ ಬಂದಿದ್ದ ಬಹುತೇಕ ಶಾಸಕರ ಮೇಲೆ ಬಿಜೆಪಿ ನಂಬಿಕೆ ಇರಿಸಿ ಟಿಕೆಟ್ ನೀಡಿದೆ. ಇತ್ತೀಚೆಗೆ ಜಾರಕಿಹೊಳಿ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಬಂದ ಎಲ್ಲ ಶಾಸಕರಿಗೂ ಟಿಕೆಟ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಆದರೆ, ಈ ಹೇಳಿಕೆಯನ್ನು ಲಕ್ಷ್ಮಣ್ ಸವದಿ ನಿರಾಕರಿಸುತ್ತಲೇ ಬಂದಿದ್ದರು. ಆದರೆ, ಕೊನೆಗೂ ತಮಗೆ ಹಾಗೂ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಜಾರಕಿಹೊಳಿ ಸಫಲರಾಗಿದ್ದಾರೆ. ಈ ಹಿಂದೆ ಜಾರಕಿಹೊಳಿ ಆಪ್ತರಾಗಿದ್ದ ಅಥಣಿಯ ಹಾಲಿ ಶಾಸಕ ಮಹೇಶ ಕುಮಟಳ್ಳಿ ಅವರನ್ನು ರಾಜ್ಯ ಸಚಿವ ಸಂಪುಟದಿಂದ ಹೊರಗಿಡಲಾಗಿತ್ತು. ಆದರೆ, ಅಥಣಿಯಿಂದ ಸ್ಪರ್ಧಿಸಿ ಮಹೇಶ ಕುಮಟಳ್ಳಿ ವಿರುದ್ಧ ಸೋಲು ಕಂಡಿದ್ದ ಸವದಿ ಅವರಿಗೆ ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಡಿಸಿಎಂ ಪೋಸ್ಟ್ ನೀಡಲಾಗಿತ್ತು. ಹೈಕಮಾಂಡ್ ಮಟ್ಟದ ನಾಯಕ ಬಿಎಲ್ ಸಂತೋಷ್ ಆಪ್ತರಾಗಿದ್ದ ಸವದಿ ಅವರಿಗೇ ಅಥಣಿ ಕ್ಷೇತ್ರದಿಂದ ಟಿಕೆಟ್ ಸಿಗುತ್ತದೆ ಎಂದು ಪಕ್ಷದ ಹಲವು ಮುಖಂಡರು ನಂಬಿದ್ದರು. ಆದರೆ, ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ್ದ ಜಾರಕಿಹೊಳಿ, ತನ್ನ ಆಪ್ತರಿಗೆ ಟಿಕೆಟ್ ಸಿಗಲೇಬೇಕೆಂದು ಹಠ ಹಿಡಿದಿದ್ದರು. 

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಪ್ರಮುಖ ನಾಯಕರಾದ ಸಂಜಯ್ ಪಾಟೀಲ್ ಮತ್ತು ಧನಂಜಯ್ ಜಾಧವ್ ಬದಲಿಗೆ ಜಾರಕಿಹೊಳಿ ಅವರ ಆಪ್ತ ಮನ್ನೋಳ್ಕರ್ ಅವರಿಗೆ ಟಿಕೆಟ್ ನೀಡಲಾಗಿದೆ. ಕ್ಷೇತ್ರದಲ್ಲಿ ಹೆಚ್ಚಿನ ಮರಾಠಿಗರನ್ನು ಸೆಳೆಯಲು ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಮನ್ನೋಳ್ಕರ್ ಅವರನ್ನು ಕಣಕ್ಕಿಳಿಸುವಂತೆ ಪಕ್ಷದ ನಾಯಕತ್ವದ ಮೇಲೆ ಜಾರಕಿಹೊಳಿ ಒತ್ತಡ ಹೇರಿದ್ದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಬಲ ಅಭ್ಯರ್ಥಿಯಾಗಿದ್ದರೂ ಜಾರಕಿಹೊಳಿ ಶಿಫಾರಸ್ಸಿನ ಮೇರೆಗೆ ಮನ್ನೋಳ್ಕರ್ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. ಇತ್ತೀಚೆಗೆ ನವದೆಹಲಿಯಲ್ಲಿ ಅಮಿತ್ ಶಾ ಮತ್ತು ಬಿಜೆಪಿಯ ಇತರ ಹಲವು ಪ್ರಮುಖ ನಾಯಕರಿಗೆ ಜಾರಕಿಹೊಳಿ ಅವರು ಮನ್ನೋಳ್ಕರ್ ಅವರನ್ನು ಪರಿಚಯಿಸಿದ್ದರು. ಖಾನಾಪುರ ಹಾಲಿ ಶಾಸಕಿ ಕಾಂಗ್ರೆಸ್ನ ಅಂಜಲಿ ನಿಂಬಾಳ್ಕರ್ ವಿರುದ್ಧ ಬಿಜೆಪಿ ವಿಠಲ್ ಹಾಲ್ಗೇಕರ್ ಅವರನ್ನು ಕಣಕ್ಕಿಳಿಸಿದೆ, ಮಾಜಿ ಶಾಸಕ ಅರವಿಂದ ಪಾಟೀಲ ಮತ್ತು ಸೋನಾಲಿ ಸರ್ನೋಬತ್ ರೇಸ್ನಲ್ಲಿದ್ದರೂ ಅವರನ್ನು ಕಡೆಗಣಿಸಲಾಗಿದೆ.

Ramesh Jarkiholi, the BJP candidate from the Gokak Assembly constituency in Karnataka, filed his nominations papers on Thursday with the polls less than a month away.