ಈಶ್ವರಪ್ಪ ಹತ್ಯೆಗೆ ಪಿಎಫ್ಐ ಸಂಚು ; ಶಾಹೀರ್ ಆಗಿ ಬದಲಾಗಿದ್ದ ಜಯೇಶ್ ಪೂಜಾರಿಗೆ ಸುಪಾರಿ, ಬೆಳಗಾವಿ ಜೈಲಿನಲ್ಲಿದ್ದೇ ಲಷ್ಕರ್ ನಂಟು, ನಾಗಪುರ ಪೊಲೀಸರಿಂದ ಎನ್ಐಎಗೆ ವರದಿ

14-04-23 08:51 pm       Bangalore Correspondent   ಕರ್ನಾಟಕ

ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗಪುರದ ಕಚೇರಿಗೆ ಫೋನ್ ಕರೆ ಮಾಡಿ ಹತ್ತು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಬೆಳಗಾವಿ ಜೈಲಿನಲ್ಲಿದ್ದ ಜಯೇಶ್ ಪೂಜಾರಿಯನ್ನು ನಾಗಪುರ ಪೊಲೀಸರು ಬಂಧಿಸಿದ್ದರು.

ಬೆಂಗಳೂರು, ಎ.14: ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗಪುರದ ಕಚೇರಿಗೆ ಫೋನ್ ಕರೆ ಮಾಡಿ ಹತ್ತು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಬೆಳಗಾವಿ ಜೈಲಿನಲ್ಲಿದ್ದ ಜಯೇಶ್ ಪೂಜಾರಿಯನ್ನು ನಾಗಪುರ ಪೊಲೀಸರು ಬಂಧಿಸಿದ್ದರು. ಪೊಲೀಸರು ಜಯೇಶ್ ಪೂಜಾರಿಯನ್ನು ವಿಚಾರಣೆ ನಡೆಸಿ ಭಯಾನಕ ವಿಚಾರಗಳನ್ನು ಹೊರಗೆಡವಿದ್ದಾರೆ.

ಜಯೇಶ್ ಪೂಜಾರಿ ಮುಸ್ಲಿಂ ಆಗಿ ಮತಾಂತರಗೊಂಡಿದ್ದಲ್ಲದೆ, ಪಾಕಿಸ್ಥಾನದ ಲಷ್ಕರ್ ಉಗ್ರರು ಮತ್ತು ಪಿಎಫ್ಐ ಲಿಂಕ್ ಪಡೆದು ಅವರ ಪರವಾಗಿ ಕೆಲಸ ಮಾಡಲಾರಂಭಿಸಿದ್ದ. ಅಷ್ಟೇ ಅಲ್ಲ, ಇತ್ತೀಚೆಗೆ ಮಂಗಳೂರಿನಲ್ಲಿ ಮುಸ್ಲಿಮರು ಮತ್ತು ಅಲ್ಲಾಹ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರನ್ನು ಕೊಲ್ಲುವುದಕ್ಕೆ ಸುಪಾರಿ ಪಡೆದಿದ್ದ. ತನ್ನ ಸಹಚರರ ಜೊತೆ ಸೇರಿ ಈಶ್ವರಪ್ಪ ಹತ್ಯೆಗೆ ಸಂಚು ರೂಪಿಸಿದ್ದ ಅನ್ನುವ ವಿಚಾರವನ್ನೂ ಪತ್ತೆ ಮಾಡಿದ್ದಾಗಿ ನಾಗಪುರ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ನಾಗಪುರ ಪೊಲೀಸರು ರಾಷ್ಟ್ರೀಯ ತನಿಖಾ ದಳಕ್ಕೆ ಪತ್ರ ಬರೆದು ಆಘಾತಕಾರಿ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ನಾಗಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ 70 ಪುಟಗಳ ವರದಿಯನ್ನು ಎನ್ಐಎ ತಂಡಕ್ಕೆ ಸಲ್ಲಿಸಿದ್ದಾರೆ.

Before ban, PFI had big reach in Karnataka- The New Indian Express

ಜಯೇಶ್ ಪೂಜಾರಿ ಬೆಳಗಾವಿ ಜೈಲಿನಲ್ಲಿದ್ದುಕೊಂಡೇ ಪಿಎಫ್ಐ ಮತ್ತು ಲಷ್ಕರ್ ಇ-ತೈಬಾ ಗ್ಯಾಂಗ್ ಸದಸ್ಯರ ಜೊತೆಗೆ ಸಂಪರ್ಕ ಮಾಡಿಕೊಂಡಿದ್ದ. ಜಯೇಶ್ ಪೂಜಾರಿ ಮತ್ತು ತಂಡಕ್ಕೆ ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿ ಮೊತ್ತವನ್ನು ಲಷ್ಕರ್ ಕಡೆಯಿಂದ ನೀಡಲಾಗುತ್ತಿತ್ತು. ಜಯೇಶ್ ಮತ್ತು ಅಪ್ಸರ್ ಪಾಶಾ ಸೇರಿಕೊಂಡು ಜೈಲಿನಲ್ಲಿದ್ದೇ ಮೊಬೈಲ್ ಇನ್ನಿತರ ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಮಾಡುತ್ತಿದ್ದರು. ಜಯೇಶ ಪೂಜಾರಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೇರಳ ಗಡಿಭಾಗದ ನಿವಾಸಿಯಾಗಿದ್ದು, ಕಲಿತಿದ್ದು ಕೇವಲ ಏಳನೇ ಕ್ಲಾಸ್ ಆಗಿದ್ದರೂ ಹಿಂದಿ, ಇಂಗ್ಲಿಷ್ ಸೇರಿದಂತೆ ಎಂಟು ಭಾಷೆಗಳನ್ನು ಮಾತನಾಡುತ್ತಿದ್ದ. ಅಲ್ಲದೆ, ತಾಂತ್ರಿಕವಾಗಿಯೂ ನೈಪುಣ್ಯತೆ ಪಡೆದಿದ್ದ.  

ಸಣ್ಣಂದಿನಲ್ಲೇ ಶಾಲೆ ಬಿಟ್ಟು ಮುಂಬೈಗೆ ಕೆಲಕ್ಕಾಗಿ ತೆರಳಿದ್ದ ಜಯೇಶ್ ಪೂಜಾರಿ ಅಲ್ಲಿನ ದಾವೂದ್, ಚೋಟಾ ಶಕೀಲ್ ಗ್ಯಾಂಗ್ ಸದಸ್ಯರ ಸಂಪರ್ಕ ಪಡೆದಿದ್ದ. ಮಾಹಿತಿ ಪ್ರಕಾರ, 2004ರಲ್ಲಿಯೇ ಮುಸ್ಲಿಂ ಆಗಿ ಮತಾಂತರಗೊಂಡಿದ್ದ. 2007ರಲ್ಲಿ ಮುಂಬೈನಲ್ಲಿ ವಾಹನ ಕಳವು ಜಾಲದಲ್ಲಿ ಸಿಕ್ಕಿಬಿದ್ದು ಬಂಧಿಸಲ್ಪಟ್ಟ ಬಳಿಕ ಆತನ ಕುಟುಂಬಸ್ಥರು ಜಾಮೀನು ನೀಡಿ ಪೊಲೀಸರ ಬಲೆಯಿಂದ ಬಿಡಿಸಿದ್ದರು. 2008ರಲ್ಲಿ ಪುತ್ತೂರಿನಲ್ಲಿ ತನ್ನ ಊರಿನಲ್ಲಿದ್ದಾಗ ಜಯೇಶ್ ಪೂಜಾರಿ ತನ್ನ ಮನೆಯಲ್ಲಿಯೇ ನಮಾಜ್ ಮಾಡುವುದು ಮತ್ತು ಮುಸ್ಲಿಂ ಆಚರಣೆಗಳನ್ನು ಮಾಡುತ್ತಿದ್ದ. ಇದನ್ನು ಆತನ ಮಾವನ ಮನೆಯವರು ವಿರೋಧಿಸಿದ್ದರು. ಇದೇ ಕಾರಣಕ್ಕೆ ಹತ್ತಿರದ ಸಂಬಂಧಿಕ ಮಹಿಳೆ ಮತ್ತು ಆಕೆಯ ಮಗುವನ್ನು ಜಯೇಶ್ ಪೂಜಾರಿ ಹತ್ಯೆ ಮಾಡಿದ್ದು, ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಹೊರಗೆ ಬಂದ ನಂತರ ಮತ್ತೆ ಮುಂಬೈಗೆ ಪರಾರಿಯಾಗಿದ್ದ. ಈ ನಡುವೆ, ಮುಂಬೈನಲ್ಲಿ ಒಬ್ಬಾಕೆಯನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನೂ ಹೊಂದಿದ್ದ. ಆನಂತರ ಆಕೆಯಿಂದ ವಿಚ್ಛೇದನ ಪಡೆದುಕೊಂಡಿದ್ದ. ಇದೇ ಸಂದರ್ಭದಲ್ಲಿ ಶೆಲ್ಫಿ ಮುಸ್ತಫಾ ಎಂಬಾತ ಜಯೇಶ್ ಪೂಜಾರಿಯನ್ನು ಉಗ್ರವಾದಿ ಸಂಘಟನೆಗೆ ಸಂಪರ್ಕ ಮಾಡಿದ್ದ.

ಆಗ ಕರ್ನಾಟಕದಲ್ಲಿ ಕರ್ನಾಟಕ ಡಿಗ್ನಿಟಿ ಫಾರಂ (ಕೆಡಿಎಫ್) ಎಂಬ ಸಂಘಟನೆ ಇತ್ತು. ಉಗ್ರವಾದಿಗಳ ಪರ ಮೃದು ಧೋರಣೆ ಹೊಂದಿದ್ದ ಕೆಡಿಎಫ್ ಮತ್ತು ಪಿಎಫ್ಐ ಪರವಾಗಿ ಜಯೇಶ್ ಪೂಜಾರಿ ಕೆಲಸ ಮಾಡುತ್ತಿದ್ದ. ಇದೇ ವೇಳೆ, ಪೊಲೀಸರಿಗೆ ಸಿಕ್ಕಿಬಿದ್ದು ಮಂಗಳೂರಿನ ಜೈಲಿಗೆ ರವಾನೆಯಾಗಿದ್ದ. ಮಂಗಳೂರು ಜೈಲಿನಲ್ಲಿ ನಟೋರಿಯಸ್ ಉಗ್ರ ರಶೀದ್ ಮಲಬಾರಿ ಸಂಪರ್ಕಕ್ಕೆ ಬಂದಿದ್ದ. ಆನಂತರ, ಪ್ರಕರಣ ಒಂದರಲ್ಲಿ ಬೆಂಗಳೂರು ಪೊಲೀಸರು ಬಾಡಿ ವಾರೆಂಟ್ ಪಡೆದು ಜಯೇಶ್ ಪೂಜಾರಿಯನ್ನು ಬೆಂಗಳೂರಿಗೆ ಒಯ್ದಿದ್ದರು. 2013-14ರ ವೇಳೆಗೆ ಅನಾರೋಗ್ಯಕ್ಕೀಡಾಗಿ ಬೆಂಗಳೂರಿನ ಆಸ್ಪತ್ರೆ ಸೇರಿದ್ದ ಜಯೇಶ್ ಪೂಜಾರಿಯನ್ನು ಲಷ್ಕರ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಕ್ಯಾಪ್ಟನ್ ನಜೀರ್ ಎಂಬಾತ ಭೇಟಿಯಾಗಿದ್ದ. ಬೆಂಗಳೂರು ಸೀರಿಯಲ್ ಬ್ಲಾಸ್ಟ್ ಸೇರಿ 16 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ನಜೀರ್ ಆಬಳಿಕ ಬಂಧಿಸಲ್ಪಟ್ಟು ಶಿಕ್ಷೆಗೂ ಒಳಗಾಗಿದ್ದಾನೆ.

ಆದರೆ ಅದಕ್ಕೂ ಮೊದಲೇ ಜಯೇಶ್ ಪೂಜಾರಿ ಮತ್ತು ಅಫ್ಸರ್ ಪಾಶಾ (ಸದ್ಯಕ್ಕೆ ಬೆಳಗಾವಿ ಜೈಲಿನಲ್ಲಿದ್ದಾನೆ) ಗೆ ಲಷ್ಕರ್ ನಜೀರ್, ಬಾಂಬ್ ತಯಾರಿ ಬಗ್ಗೆ ಹೇಳಿಕೊಟ್ಟಿದ್ದ. ಪಿಎಫ್ಐ ರಾಷ್ಟ್ರೀಯ ಪದಾಧಿಕಾರಿಗಳಲ್ಲಿ ಒಬ್ಬನಾಗಿರುವ ಅಪ್ಸರ್ ಪಾಶಾ ಬಾಂಬ್ ತಯಾರಿ ಮತ್ತು ಬ್ಲಾಸ್ಟ್ ಮಾಡುವುದರಲ್ಲಿ ತರಬೇತಿ ಪಡೆದಿದ್ದ. ಇದಲ್ಲದೆ, ಉಗ್ರವಾದಿ ಪ್ರಕರಣಗಳಲ್ಲಿ ಪೊಲೀಸ್ ಕೇಸು ಎದುರಿಸುತ್ತಿದ್ದಾನೆ. ಜಯೇಶ್ ಪೂಜಾರಿ ಮಂಗಳೂರು ಜೈಲಿನಲ್ಲಿದ್ದಾಗಲೇ ಗಣೇಶ್ ಶೆಟ್ಟಿ ಎಂಬ ಇನ್ನೊಬ್ಬ ಮುಂಬೈ ಮೂಲದ ರೌಡಿಯ ಕೊಲೆಯಾಗಿತ್ತು. ಯೂಸುಫ್ ಖಾನ್ ಕೊಲೆಗೆ ಪ್ರತೀಕಾರವಾಗಿ ಗಣೇಶ್ ಶೆಟ್ಟಿ ಕೊಲೆ ನಡೆದಿತ್ತು ಎನ್ನಲಾಗಿದೆ. ಗಣೇಶ್ ಕೊಲೆ ಪ್ರಕರಣದಲ್ಲಿ ಜಯೇಶ್ ಪೂಜಾರಿ ಸ್ಕೆಚ್ ಇತ್ತಾದರೂ, ಪೊಲೀಸರ ಬಲೆಯಿಂದ ತಪ್ಪಿಸಿಕೊಂಡಿದ್ದ. ಹೀಗೆ ಹಲವು ಸಂದರ್ಭಗಳಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದಲ್ಲದೆ, ಒಮ್ಮೆ ಕೋರ್ಟಿನಿಂದ ಗಲ್ಲು ಶಿಕ್ಷೆಗೆ ಒಳಗಾಗಿದ್ದರೂ ಆನಂತರ ಸನ್ನಡತೆ ಆಧಾರದಲ್ಲಿ ಶಿಕ್ಷೆಯನ್ನು ಜೀವಾವಧಿಗೆ ಮಾರ್ಪಾಡು ಮಾಡಿಕೊಂಡಿದ್ದ.

ಆನಂತರ, ಬೆಳಗಾವಿಯ ಹಿಂಡಲಾ ಜೈಲಿನಲ್ಲಿದ್ದ ಜಯೇಶ್ ಪೂಜಾರಿ ತನ್ನ ಹೆಸರನ್ನು ಶಾಹೀರ್ ಶಕೀರ್ ಎಂದೂ ಬದಲಿಸಿಕೊಂಡಿದ್ದ ಎನ್ನಲಾಗಿದೆ. ಇತ್ತೀಚೆಗೆ ಜನವರಿ 14ರಂದು ನಾಗಪುರದ ಸಚಿವ ಗಡ್ಕರಿ ಅವರ ಕಚೇರಿಗೆ ಫೋನ್ ಕರೆ ಮಾಡಿ, 100 ಕೋಟಿ ರೂಪಾಯಿಗೆ ಬೇಡಿಕೆ ಒಡ್ಡಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಮೂರು ಕರೆಗಳು ಬೆಳಗಾವಿ ಜೈಲಿನಿಂದ ಹೋಗಿತ್ತು. ಆನಂತರ, ಮಾರ್ಚ್ 21ರಂದು ನಾಗಪುರದ ಸಚಿವ ಗಡ್ಕರಿ ಕಚೇರಿಗೆ ಫೋನ್ ಕರೆ ಮಾಡಿ, 10 ಕೋಟಿ ಹಣಕ್ಕೆ ಬೇಡಿಕೆ ಇರಿಸಲಾಗಿತ್ತು. ಇವೆರಡು ಪ್ರಕರಣದಲ್ಲಿಯೂ ಜಯೇಶ್ ಪೂಜಾರಿ ಬಗ್ಗೆ ನಾಗಪುರ ಪೊಲೀಸರು ಸಂಶಯ ಹೊಂದಿದ್ದರು. ಜನವರಿ ಮತ್ತು ಮಾರ್ಚ್ ನಲ್ಲಿ ಎರಡು ಬಾರಿ ಬೆದರಿಕೆ ಕರೆ ಬಂದಿದ್ದರಿಂದ ನಾಗಪುರ ಪೊಲೀಸರು ಮಾರ್ಚ್ 31ರಂದು ಬೆಳಗಾವಿ ಜೈಲಿನಿಂದ ಜಯೇಶ್ ಪೂಜಾರಿಯನ್ನು ಕರೆದೊಯ್ದಿದ್ದರು. ವಿಚಾರಣೆ ವೇಳೆ ಆಘಾತಕಾರಿ ಮಾಹಿತಿ ಪತ್ತೆಯಾಗಿದ್ದರಿಂದ ಜಯೇಶ್ ಪೂಜಾರಿ ಅಲಿಯಾಸ್ ಶಾಹೀರ್ ವಿರುದ್ಧ ದೇಶದ್ರೋಹ ಪ್ರಕರಣದಡಿ ಪೊಲೀಸರು ಕೇಸು ದಾಖಲಿಸಿದ್ದಾರೆ. ನಾಗಪುರ ಪೊಲೀಸರ ಮಾಹಿತಿ ಆಧರಿಸಿ ಟೈಮ್ಸ್ ಆಫ್ ಇಂಡಿಯಾ ಈ ಬಗ್ಗೆ ವರದಿ ಮಾಡಿದ್ದು ಅದರ ಕನ್ನಡ ಅನುವಾದವನ್ನು ಇಲ್ಲಿ ಕೊಡಲಾಗಿದೆ.

Karnataka Bhartiya Janata Party (BJP) leader KS Eshwarappa was on Pakistan-based terrorist group Lashkar-e-Taiba (LeT) and Popular Front of India (PFI)’s target, as the groups were allegedly planning to kill him, revealed gangster Jayesh Pujari.