ಬ್ರೇಕಿಂಗ್ ನ್ಯೂಸ್
29-04-23 07:38 pm Bangalore Correspondent ಕರ್ನಾಟಕ
ಬೆಂಗಳೂರು, ಎ.29: ಯಾರು ಏನಂದರೂ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರನ್ನು ಹಳೆ ಮೈಸೂರು ಭಾಗದ ಒಕ್ಕಲಿಗರು ತಮ್ಮ ನಾಯಕರೆಂದೇ ಉಳಿಸಿಕೊಂಡಿದ್ದಾರೆ. ಹಿಂದೆ ಕಾಂಗ್ರೆಸ್ ಪ್ರಭಾವ ಇದ್ದ ಈ ಭಾಗದಲ್ಲಿ ಕಳೆದ 25 ವರ್ಷಗಳಿಂದ ಜೆಡಿಎಸ್ ಭದ್ರ ತಳಪಾಯ ಮಾಡಿಕೊಂಡಿದೆ. ಇದಕ್ಕೆ ಕಾರಣ, ಈ ಭಾಗದ 57 ಶಾಸಕ ಸ್ಥಾನಗಳಲ್ಲಿ 17 ಪರ್ಸೆಂಟ್ ಇರುವ ಒಕ್ಕಲಿಗರೇ ನಿರ್ಣಾಯಕರು ಆಗಿರುವುದು.
2018ರ ಚುನಾವಣೆಯಲ್ಲಿ ಜೆಡಿಎಸ್ ಈ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ಜೆಡಿಎಸ್ ಕೋಟೆಯನ್ನು ಒಡೆಯಲೇಬೇಕೆಂದು ಬಿಜೆಪಿ ಮತ್ತು ಕಾಂಗ್ರೆಸ್ ಪ್ಲಾನ್ ಹಾಕಿದೆ. ಆದರೆ ಜೆಡಿಎಸ್ ಪಾಲಿನ ಮಾಸ್ ಲೀಡರ್ ದೇವೇಗೌಡರಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಈ ಬಾರಿ ಹೆಚ್ಚಿನ ಪ್ರಚಾರ ಕಷ್ಟವಾಗಿದ್ದು ಜೆಡಿಎಸ್ ಪಾಲಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ರೀತಿ ಎರಡನೇ ಹಂತದ ನಾಯಕರ ಕೊರತೆಯೂ ಗೌಡರ ಪಕ್ಷದಲ್ಲಿದೆ. ಹಳೇ ಮೈಸೂರು ಭಾಗ ಬಿಟ್ಟರೆ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ದೊಡ್ಡ ಶಕ್ತಿ ಇಲ್ಲ. ಹೀಗಾಗಿ ಏನಾದ್ರೂ ಕಡಿದು ಕಟ್ಟೆ ಹಾಕಬೇಕಿದ್ದರೆ, ದಳಪತಿಗಳು ಇಲ್ಲೇ ಮಾಡಬೇಕಷ್ಟೆ. ಆದರೆ ಈ ಬಾರಿ ಒಕ್ಕಲಿಗರ ಕೋಟೆಯನ್ನು ಒಡೆಯಲು ರಾಷ್ಟ್ರೀಯ ಪಕ್ಷಗಳ ನಾಯಕರು ಮುಂದಾಗಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ 57 ಕ್ಷೇತ್ರಗಳಿವೆ. ರಾಜ್ಯದಲ್ಲಿ ಯಾವುದೇ ಪಕ್ಷ ಬಹುಮತ ಪಡೆಯಲು ಈ ಕ್ಷೇತ್ರಗಳ ಗೆಲುವು ಪ್ರಮುಖ. ಯಾಕಂದ್ರೆ, ಒಕ್ಕಲಿಗರ ಒಲವು ಯಾರ ಮೇಲಿರುತ್ತದೆಯೋ ಅವರು ಅಧಿಕಾರದ ಗದ್ದುಗೆ ಹಿಡಿಯುತ್ತಾರೆ ಎಂಬ ಅಭಿಪ್ರಾಯ ಇದೆ. ಸದ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಈ ಭಾಗದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ಕಂಡುಬರುತ್ತಿದ್ದು, ಈ ಬಾರಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ.
ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮೂವರು ಅಭ್ಯರ್ಥಿಗಳು ಹಳೇ ಮೈಸೂರು ಭಾಗದಲ್ಲಿರುವುದು ಮತ್ತೊಂದು ವಿಶೇಷ. ಹಳೇ ಮೈಸೂರು ಭಾಗದ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಒಟ್ಟು 52 ಸ್ಥಾನಗಳು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ಗೆ ನಿರ್ಣಾಯಕ.

ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಭಾಗದಲ್ಲಿ ದಳಪತಿಗಳ ಅಧಿಕಾರ ಸ್ಥಾಪನೆಯ ಬಳಿಕ ಜೆಡಿಎಸ್ ಹಿಡಿತ ಹೆಚ್ಚಿಸಿಕೊಂಡಿದೆ. ಒಕ್ಕಲಿಗ ಸಮುದಾಯದ ಮತಗಳು ಹಳೇ ಮೈಸೂರು ಭಾಗದಲ್ಲಿ ಶೇ.17 ರಷ್ಟಿದ್ದರೂ, ಈ ಕ್ಷೇತ್ರಗಳಲ್ಲಿ ಎಸ್ಸಿ-ಎಸ್ಟಿ ಪ್ರಾಬಲ್ಯವೂ ಇದೆ ಎಂಬುದನ್ನು ತಳ್ಳಿಹಾಕುವಂತೆ ಇಲ್ಲ. ಒಂದು ಕಾಲದಲ್ಲಿ ಕಾಂಗ್ರೆಸ್ ಇಡೀ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸುತ್ತಿತ್ತು. ಆದರೆ ಕಳೆದ ಕೆಲವು ಚುನಾವಣೆಗಳಲ್ಲಿ ನಿರೀಕ್ಷಿತ ಸ್ಥಾನಗಳು ಸಿಗಲಿಲ್ಲ. 2018 ರ ಚುನಾವಣೆಯಲ್ಲಿ ಹಳೇ ಮೈಸೂರು ಪ್ರದೇಶದಲ್ಲಿ ಕಾಂಗ್ರೆಸ್ 20 ಸ್ಥಾನಗಳನ್ನು ಪಡೆದಿತ್ತು. 2013ರ ಫಲಿತಾಂಶಕ್ಕೆ ಹೋಲಿಸಿದರೆ 6 ಸ್ಥಾನ ಕಡಿಮೆಯಾಗಿತ್ತು. ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಕ್ಕಲಿಗರಾಗಿರುವುದು, ಇಲ್ಲಿ ಕಾಂಗ್ರೆಸ್ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.
ಈ ಬಾರಿಯ ಚುನಾವಣೆಯಲ್ಲಿ ಮೂರೂ ಪಕ್ಷಗಳು ಈ ಭಾಗದಲ್ಲಿ ಪ್ರಬಲ ಆಗಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಕಂಡುಬಂದಿದೆ. ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದ ಯಾವುದೇ ದೊಡ್ಡ ಮುಖ ಇಲ್ಲ. ಹೀಗಾಗಿ ಈ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪಕ್ಷಕ್ಕೆ ಸಾಧ್ಯವಾಗಿಲ್ಲ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಇಲ್ಲಿಂದ ಒಂದಷ್ಟು ಸ್ಥಾನಗಳನ್ನು ಹೆಚ್ಚಿಸಿಕೊಂಡಿದ್ದರೂ ಜೆಡಿಎಸ್ ಮತ್ತು ಕಾಂಗ್ರೆಸ್ಗೆ ಹೋಲಿಸಿದರೆ ಬಿಜೆಪಿಯದ್ದು ಖಾಲಿ ಖಾಲಿ. ಆದರೆ ಈ ಬಾರಿ ಬಿಜೆಪಿ ಹೊಸ ಲೆಕ್ಕಾಚಾರ ಹಾಕಿಕೊಂಡು ಅಖಾಡಕ್ಕೆ ಇಳಿದಿದೆ. ಹೆಚ್ಚಿನ ಕಡೆ ಹೊಸಬರನ್ನು ಕಣಕ್ಕೆ ಹಾಕಿದೆ. ಘಟಾನುಘಟಿಗಳಿಗೆ ಗಟ್ಟಿಗರನ್ನೇ ಪಕ್ಷ ಕಣಕ್ಕೆ ನೂಕಿದೆ. ವರುಣಾ ಕ್ಷೇತ್ರದಲ್ಲಿ ಲಿಂಗಾಯತ ಮತಗಳು ಹೆಚ್ಚಿರುವ ಕಾರಣ ಸಚಿವ ವಿ.ಸೋಮಣ್ಣ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಿದೆ. ಅದೇ ರೀತಿ ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿ ಸಚಿವ ಆರ್. ಅಶೋಕ್ ಸ್ಪರ್ಧಿಸಿದ್ದಾರೆ.


ಮೈಸೂರು, ಮಂಡ್ಯ ಮತ್ತಿತರ ಕಡೆ ಬಿಜೆಪಿ ಹೊಸ ಮುಖಗಳಿಗೆ ಅವಕಾಶ ಕೊಟ್ಟು ಹೊಸ ತಂತ್ರಗಾರಿಕೆಯನ್ನು ಮಾಡಿರುವುದು ಈ ಬಾರಿ ಮತ ಗಳಿಸಿಕೊಡುತ್ತಾ ನೋಡಬೇಕು. ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಪಡೆಯಲೇಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ನಾಯಕರು ಈ ಭಾಗದಲ್ಲಿ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಪ್ರಧಾನಿ ನರೇಂದ್ರ ಮೋದಿ ಮಂಡ್ಯದಲ್ಲಿ ರೋಡ್ ಶೋ ನಡೆಸಿದ್ದರು. ಮೊನ್ನೆಯಷ್ಟೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಬ್ಬರದ ಚುನಾವಣಾ ಪ್ರಚಾರ ನಡೆಸಿದ್ದರು. ಇದಕ್ಕೆ ಸಂಸದೆ ಸುಮಲತಾ ಅಂಬರೀಶ್ ಸಾಥ್ ನೀಡಿದ್ದು ಪ್ಲಸ್ ಆಗಿತ್ತು. ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಜೆಡಿಎಸ್ ಕೋಟೆಯನ್ನು ಒಡೆಯುವುದೇ ಬಿಜೆಪಿ ಪ್ರಮುಖ ಅಜೆಂಡಾ ಆಗಿದೆ.

ಕಿಂಗ್ ಮೇಕರ್ ಆಗುವುದೇ ಜೆಡಿಎಸ್?
ಜೆಡಿಎಸ್ ಭದ್ರ ಕೋಟೆಯಾಗಿರುವ ಹಳೇ ಮೈಸೂರು ಭಾಗವನ್ನು ಒಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಹವಣಿಸುತ್ತಿದೆ. 1983 ರಿಂದಲೂ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರ ಪ್ರಭಾವ ಬಹುಸಂಖ್ಯಾತ ಸಮುದಾಯದ ಮೇಲಿದೆ. 2004ರಲ್ಲಿ ಇಲ್ಲಿಂದ ಒಟ್ಟು 46 ಸ್ಥಾನಗಳನ್ನು ಗೆಲ್ಲುವ ಮೂಲಕ ಜೆಡಿಎಸ್ ಈ ಭಾಗದಲ್ಲಿ ತನ್ನ ಛಾಪು ಮೂಡಿಸಿತ್ತು. ಈ ಬಾರಿಯ ಚುನಾವಣೆಯಲ್ಲೂ ಜೆಡಿಎಸ್ ಪ್ರಮುಖ ಪಾತ್ರ ವಹಿಸಲಿದ್ದು, ಮತ್ತೊಮ್ಮೆ ಕಿಂಗ್ ಮೇಕರ್ ಆಗಿ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂದು ಕಾರ್ಯತಂತ್ರ ರೂಪಿಸುತ್ತಿದೆ. ಆದರೆ ಜೆಡಿಎಸ್ ಪಾಲಿಗೆ ಸೀಟು ದಕ್ಕಿಸಿಕೊಳ್ಳಬೇಕಿದ್ದರೆ ಇದೇ ಜಾಗದಲ್ಲಿ ಕಸರತ್ತು ಮಾಡಬೇಕಾಗಿದೆ. ಇದಕ್ಕಾಗಿ ದಳಪತಿಗಳು ತಮ್ಮ ಸಾಮ್ರಾಜ್ಯ ಇರುವ ಹಾಸನದಿಂದ ತೊಡಗಿ ಮೈಸೂರು, ಮಂಡ್ಯ, ರಾಮನಗರದಲ್ಲಿ ತಮ್ಮ ಸೀಟು ಕೈ ತಪ್ಪದಂತೆ ಕಸರತ್ತು ಮಾಡಲೇಬೇಕಾಗಿದೆ.
Who will win Old Mysuru is it Congress or BJP, is JDS making master plan to rule karnataka, political report by Headline Karnataka.
15-02-26 10:38 pm
HK News Desk
Nelamangala Accident, 5 Killed: ಹೊಸಕೋಟೆ ದುರಂತ...
15-02-26 10:22 am
ಲೋಕಾಯುಕ್ತ ಬಲೆಗೆ ಬಿದ್ದ 'ಜನರ ಧನ ನುಂಗಿದ ಜನಾರ್ಧನ'...
13-02-26 10:45 pm
Hoskote Accident, Latest Update: ಹೊಸಕೋಟೆ ಅಪಘಾ...
13-02-26 09:18 pm
ಹೊಸಕೋಟೆ ಬಳಿ ಸರಣಿ ಅಪಘಾತ ; ಕ್ಯಾಂಟರ್ ಡ್ರೈವರ್ ಎಡವ...
13-02-26 10:41 am
16-02-26 12:53 pm
HK Staffer
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
ಜಗತ್ತು ನೋಡುವ ಮುನ್ನವೇ ಕಣ್ಮುಚ್ಚಿ 5 ಮಕ್ಕಳಿಗೆ ಜೀವ...
14-02-26 01:51 pm
16-02-26 01:48 pm
Mangaluru Staffer
Thokottu Accident, Mangalore: ಖಾಸಗಿ ಶಾಲಾ ಬಸ್ಸ...
16-02-26 09:33 am
Mangalore Accident, Kalladka: ಶಿವರಾತ್ರಿ ಉತ್ಸವ...
15-02-26 08:52 pm
Pumpwell Road Close, Mangalore: ಪಂಪ್ವೆಲ್ ಸರ್...
14-02-26 07:16 pm
CT Ravi, Mangalore: ಕಾಂಗ್ರೆಸ್ ಸಂಭ್ರಮ ಭ್ರಷ್ಟಾ...
14-02-26 05:16 pm
16-02-26 04:01 pm
HK News Desk
Manish kottary, Marriage Fraud, Mangalore: ಮ್...
15-02-26 05:08 pm
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm
Indian Bank Gold Robbery, Bangalore: ಬೆಂಗಳೂರು...
14-02-26 07:37 pm
Mangalore Drugs, CCB Police: ಬೆಂಗಳೂರಿನಿಂದ ಎಂಡ...
13-02-26 03:35 pm