ಚುನಾವಣೆ ಹೊತ್ತಲ್ಲೇ ಸೋಮಣ್ಣಗೆ ವಿಘ್ನ ; ಜೆಡಿಎಸ್ ಅಭ್ಯರ್ಥಿಗೆ ಆಮಿಷವೊಡ್ಡಿದ್ದಕ್ಕೆ ಎಫ್ಐಆರ್ ದಾಖಲು, ಅನರ್ಹತೆ ಭೀತಿಯಲ್ಲಿ ಸೋಮಣ್ಣ ! 

30-04-23 08:10 pm       HK News Desk   ಕರ್ನಾಟಕ

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣಗೆ ಚಾಮರಾಜನಗರದಲ್ಲಿ ಅನರ್ಹತೆ ಭೀತಿ ಎದುರಾಗಿದೆ. ಜೆಡಿಎಸ್ ಅಭ್ಯರ್ಥಿಯ ನಾಮಪತ್ರ ಹಿಂಪಡೆಯಲು ಗೂಟದ ಕಾರು ಕೊಡುವುದಾಗಿ ಸಚಿವ ವಿ.ಸೋಮಣ್ಣ ಆಮಿಷವೊಡ್ಡಿರುವ ಆಡಿಯೋ ವೈರಲ್ ಆಗಿತ್ತು.

ಮೈಸೂರು, ಎ.30 : ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣಗೆ ಚಾಮರಾಜನಗರದಲ್ಲಿ ಅನರ್ಹತೆ ಭೀತಿ ಎದುರಾಗಿದೆ. ಜೆಡಿಎಸ್ ಅಭ್ಯರ್ಥಿಯ ನಾಮಪತ್ರ ಹಿಂಪಡೆಯಲು ಗೂಟದ ಕಾರು ಕೊಡುವುದಾಗಿ ಸಚಿವ ವಿ.ಸೋಮಣ್ಣ ಆಮಿಷವೊಡ್ಡಿರುವ ಆಡಿಯೋ ವೈರಲ್ ಆಗಿತ್ತು. ಕಾಂಗ್ರೆಸ್, ಜೆಡಿಎಸ್ ದೂರಿನ ಬೆನ್ನಲ್ಲೇ ಚುನಾವಣಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಸಚಿವ ಸೋಮಣ್ಣ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

ಈ ಬಗ್ಗೆ ಸಚಿವ ಸೋಮಣ್ಣ, ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ, ಇದರ ಹಿಂದೆ ಯಾರಿದ್ದಾರೆ ಎಂದು ಕಾನೂನು ಪ್ರಕಾರ ತನಿಖೆಯಾಗಲಿ. ನನ್ನ ವಿರುದ್ಧ ಯಾರೋ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಿದ್ದಾರೆ. ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿಯೊಂದಿಗೆ ಬಿಜೆಪಿ ಅಭ್ಯರ್ಥಿ, ಸಚಿವ ವಿ.ಸೋಮಣ್ಣ ಮಾತನಾಡಿರುವ ಆಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ನಾಮಪತ್ರ ಹಿಂಪಡೆಯಲು ಒಂದು ಗಂಟೆ ಮೊದಲು ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿಗೆ ಕರೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರು, ಏಯ್ ಮೊದಲು ನಾಮಪತ್ರ ತಗೊಳ್ಳಯ್ಯ, ಬಾಕಿದು ಆಮೇಲೆ ಏನು ಬೇಕಾದ್ರೂ ಮಾಡುತ್ತೀನಿ. ಪೂರ್ತಿ ಮಾತನ್ನು ಕೇಳು. ನೀನು ನನಗೆ ಒಬ್ಬ ಹಳೆಯ ಸ್ನೇಹಿತ. ಅವನ್ಯಾವನೋ ತೊಟ್ಟಿ ನನ್ಮಗನ ಮಾತು ಕೇಳೋದಕ್ಕೆ ಹೋಗಬೇಡ ಅಂದಿದ್ದರು.

ನಿನಗೆ ಬದುಕೋದಕ್ಕೆ ಏನು ಬೇಕೋ ಎಲ್ಲವನ್ನು ಮಾಡುತ್ತೇನೆ. ಅಣ್ಣ ಇದ್ದಾರೆ. ಮೊದಲು ವಾಪಾಸ್ಸು ತೆಗೆದುಕೋ. ನಿನ್ನ ಹಿತ ಕಾಪಾಡೋದು ನನ್ನ ಜವಾಬ್ದಾರಿ. ಈಗ ಉಪ್ಪಾರ ದೇವಸ್ಥಾನದಲ್ಲಿ ಇದ್ದೀನಿ. ನಾಮಪತ್ರ ವಾಪಸ್ಸು ತಗೋ, ಇರೋದು ಒಂದು ಗಂಟೆ. ಅವರು ಯಾರದ್ದೋ ಮಾತು ಕೇಳಿ ಏನೇನೋ ಮಾಡಬೇಡ ಎಂದಿದ್ದರು. 

ಈ ಬಗ್ಗೆ ಕಾಂಗ್ರೆಸ್, ಜೆಡಿಎಸ್ ಕಡೆಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು.  ತನಿಖೆ ನಡೆಸಿದ್ದ ಚಾಮರಾಜನಗರ ಫ್ಲೆಯಿಂಗ್ ಸ್ಕ್ವಾಡ್ ಅಧಿಕಾರಿಗಳು, ಸಚಿವ ವಿ.ಸೋಮಣ್ಣ, ನಟರಾಜ್ ಹಾಗೂ ಸುದೀಪ್ ಎಂಬವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಆಮಿಷ ಒಡ್ಡಿರುವುದು ಸಾಬೀತಾದರೆ ಚುನಾವಣೆ ಗೆದ್ದರೂ ಅನರ್ಹಗೊಳ್ಳುವ ಸಾಧ್ಯತೆ ಇರುತ್ತದೆ. ಆಡಿಯೋ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿ ನೀಡುವ ವರದಿ ಆಧರಿಸಿ ಭವಿಷ್ಯ ನಿರ್ಣಯ ಆಗಲಿದೆ.

A First Information Report has been filed against BJP leader V Somanna for allegedly influencing a JDS candidate to withdraw his nomination at Chamarajanagar constituency.