ನಂದಿನಿ ಕಿಚ್ಚಿಗೆ ಕೊಚ್ಚಿ ಹೋದ ಬಿಜೆಪಿ, ಲಿಂಗಾಯತ ಅಸ್ತ್ರಕ್ಕೆ ಕನಲಿದ ಕಮಲ, ಸದ್ದಿಲ್ಲದೆ ಬಿಜೆಪಿ ವಿರುದ್ಧ ಸುನಾಮಿ ಎಬ್ಬಿಸಿದ ಕಾಂಗ್ರೆಸ್ ಹಿಂದಿನ ರಹಸ್ಯ ತಂಡಗಳು...!

13-05-23 10:52 pm       Bangalore Correspondent   ಕರ್ನಾಟಕ

ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಸತತ ಪ್ರಚಾರದ ಹೊರತಾಗಿಯೂ ಆಡಳಿತಾರೂಢ ಬಿಜೆಪಿ ಚುನಾವಣೆ ಫಲಿತಾಂಶದಲ್ಲಿ ಹೇಳ ಹೆಸರಿಲ್ಲದ ರೀತಿ ಹೀನಾಯ ಸೋಲು ಕಂಡಿದೆ.

ಬೆಂಗಳೂರು, ಮೇ 13: ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಸತತ ಪ್ರಚಾರದ ಹೊರತಾಗಿಯೂ ಆಡಳಿತಾರೂಢ ಬಿಜೆಪಿ ಚುನಾವಣೆ ಫಲಿತಾಂಶದಲ್ಲಿ ಹೇಳ ಹೆಸರಿಲ್ಲದ ರೀತಿ ಹೀನಾಯ ಸೋಲು ಕಂಡಿದೆ. ಪಕ್ಷದ ಘಟಾನುಘಟಿ ನಾಯಕರೆಲ್ಲ ಕಾಂಗ್ರೆಸ್ ಸುನಾಮಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಈ ರೀತಿಯ ಫಲಿತಾಂಶ ಪ್ರಧಾನಿ ಮೋದಿ ಪಾಲಿಗೆ ದೊಡ್ಡ ಹಿನ್ನಡೆಯಾಗಿದ್ದರೆ, ರಾಜ್ಯ ಬಿಜೆಪಿ ಪಾಲಿಗೆ ಕಪಾಳಮೋಕ್ಷ.

ಇಷ್ಟಕ್ಕೂ ಯಾರೂ ಊಹಿಸದ ರೀತಿಯ ಸೋಲಿಗೆ ಕಾರಣಗಳೇನು ಅಂತ ನೋಡಲು ಹೋದರೆ ಹತ್ತು ಹಲವು ವಿಚಾರಗಳು ಹೊರ ಬರುತ್ತವೆ. ಬೆಲೆಯೇರಿಕೆ, ನಿರುದ್ಯೋಗ, ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದ ಆರೋಪಗಳು ರಾಜ್ಯ ಬಿಜೆಪಿ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದವು. ಆದರೆ ಇದನ್ನು ಜಾಣತನದಲ್ಲಿ ಎದುರಿಸುವ ಬದಲು ಬಿಜೆಪಿ ನಾಯಕರು ನಿರ್ಲಕ್ಷ್ಯ ಮಾಡಿದ್ದಕ್ಕೆ ಬಿಜೆಪಿ ಬೆಲೆತೆತ್ತಿದೆ. ಬೆಲೆಯೇರಿಕೆ ಆಗಿಯೇ ಇಲ್ಲ ಎಂದು ಕೇಂದ್ರ ನಾಯಕರು ವಾದಿಸಿದ್ದು ಮತದಾರರನ್ನು ಕೆರಳಿಸಿದೆ.

A Look at the BJP's Tainted History: Several Members Face Allegations of  Sexual Offences | NewsClick

ನಂದಿನಿ ಕಿಚ್ಚಿಗೆ ಕೊಚ್ಚಿ ಹೋದ ಬಿಜೆಪಿ

ಚುನಾವಣೆಗೆ ಎರಡು ತಿಂಗಳು ಇರುವಾಗ ನಂದಿನಿಯನ್ನು ಗುಜರಾತಿನ ಅಮುಲ್ ಜೊತೆ ವಿಲೀನ ಮಾಡುವ ಪ್ರಸ್ತಾಪ ಬಂದಿತ್ತು. ಮಂಡ್ಯಕ್ಕೆ ಬಂದಿದ್ದ ಕೇಂದ್ರ ಸಚಿವ ಅಮಿತ್ ಷಾ, ಈ ರೀತಿಯ ಪ್ರಸ್ತಾಪ ಮಾಡಿ ಕಾಂಗ್ರೆಸಿಗೆ ಅಸ್ತ್ರ ನೀಡಿದ್ದರು. ನಂದಿನಿಯನ್ನು ಗುಜರಾತಿ ಮಾರ್ವಾಡಿಗಳಿಗೆ ಮಾರುತ್ತಾರೆ ಎಂದು ಕಾಂಗ್ರೆಸ್ ನಾಯಕರು ಎಬ್ಬಿಸಿದ್ದ ಗುಲ್ಲನ್ನು ಎದುರಿಸಲು ಬಿಜೆಪಿ ನಾಯಕರು ಸೋತಿದ್ದರು. ಏನೇ ಸಮರ್ಥನೆ ಮಾಡಿದರೂ, ರಾಜ್ಯ ಸರ್ಕಾರ ಜನರ ಮುಂದೆ ಗೊಂದಲ ಮನವರಿಕೆ ಮಾಡುವುದಕ್ಕೂ ವಿಫಲವಾಗಿತ್ತು.

ಚುನಾವಣೆ ತಂತ್ರಗಾರಿಕೆ, ಪೇಸಿಎಂ ಅಭಿಯಾನ  

ಆರು ತಿಂಗಳ ಹಿಂದೆಯೇ ಕಾಂಗ್ರೆಸ್ ಚುನಾವಣೆಗೆ ಭಾರೀ ಎನ್ನುವಂತೆ ತಂತ್ರಗಾರಿಕೆ ಹೆಣೆದಿತ್ತು. ರಾಜ್ಯ ಸರಕಾರದ 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪವನ್ನೇ ಮುಂದಿಟ್ಟು ಪೇಸಿಎಂ ಅಭಿಯಾನ ನಡೆಸಿದ್ದು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಈ ಹಿಂದೆ ಮೋದಿ ಟೀಮಿನಲ್ಲಿದ್ದ ಕರ್ನಾಟಕದವರೇ ಆದ ಸುನಿಲ್ ಕನಗೋಲು ಮತ್ತು ತಂಡ ಕಾಂಗ್ರೆಸ್ ಪರ ನಿಂತು ಈ ತಂತ್ರಗಾರಿಕೆ ನಡೆಸಿತ್ತು ಎನ್ನಲಾಗುತ್ತಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರದ ಆರೋಪವನ್ನು ರಾಜ್ಯದೆಲ್ಲೆಡೆ ಕಾಂಗ್ರೆಸ್ ನಾಯಕರು ಪ್ರತಿಭಟನೆ, ಸುದ್ದಿಗೋಷ್ಟಿ ಮೂಲಕ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಪೇಸಿಎಂ ಅಭಿಯಾನಕ್ಕೆ ಪ್ರತಿಯಾಗಿ ಬಿಜೆಪಿ ಬಳಿ ಅಸ್ತ್ರ ಇರಲಿಲ್ಲ.

ಇದಲ್ಲದೆ, ಜಾಲತಾಣದಲ್ಲಿ ಸರ್ಕಾರದ ಭ್ರಷ್ಟಾಚಾರ ಆರೋಪವನ್ನೇ ಗುರಿಯಾಗಿಸಿ ಜನರನ್ನು ಆಕರ್ಷಿಸಬಲ್ಲಂತಹ ವಿಡಿಯೋಗಳನ್ನು ರಚಿಸಿದ್ದರು. ಗೂಗಲ್ ಏಡ್ಸ್ ಸೇರಿದಂತೆ ಟಿವಿ ಇನ್ನಿತರ ಮೊಬೈಲ್, ಡಿಜಿಟಲ್ ಪ್ಲಾಟ್ ಫಾರಂಗಳಲ್ಲಿ ರಾಜ್ಯ ಸರಕಾರವನ್ನು ಅಣಕಿಸಿ ವಿಡಿಯೋ ಅಪ್ಲೋಟ್ ಮಾಡಿದ್ದೂ ಪ್ಲಸ್ ಆಗಿತ್ತು.

Yediyurappa to campaign in Maharashtra | Deccan Herald

ಯಡಿಯೂರಪ್ಪ ಬೆಂಬಲಿಗರು ದೂರ

ಚುನಾವಣೆ ಎದುರಾಗುತ್ತಿದ್ದಂತೆ ಯಡಿಯೂರಪ್ಪ ಬೆಂಬಲಿಗರು ಮಧ್ಯ ಕರ್ನಾಟಕ, ಮಲೆನಾಡು ಭಾಗದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಯಡಿಯೂರಪ್ಪ ಅವರನ್ನು ಎರಡು ವರ್ಷದ ಹಿಂದೆ ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಇನ್ನು ತಮಗೆ ಪಕ್ಷದಲ್ಲಿ ಉಳಿಗಾಲ ಇಲ್ಲವೆಂದು ಯಡ್ಡಿ ಬೆಂಬಲಿಗರು ದೂರ ಸರಿಯಲು ತೊಡಗಿದ್ದರು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಿಂದೆ ಯಡಿಯೂರಪ್ಪ ಬೆಂಬಲಿಗರಾಗಿದ್ದ ಎಚ್.ಡಿ.ತಮ್ಮಯ್ಯ ಕಾಂಗ್ರೆಸ್ ಸೇರಿದ್ದಲ್ಲದೆ, ಬಿಜೆಪಿ ಸಿಎಂ ಆಕಾಂಕ್ಷಿಯಾಗಿದ್ದ ಸಿಟಿ ರವಿಯನ್ನು ಸೋಲಿಸಿದ್ದು ಇದರ ಪರಿಣಾಮದ ಝಲಕ್. ಈ ರೀತಿ ಪಕ್ಷದಿಂದ ದೂರ ಸರಿದಿರುವುದು, ಕಾಂಗ್ರೆಸ್ ಸೇರಿ ಬಂಡಾಯ ಎದ್ದಿರುವ ಹಲವರಿದ್ದಾರೆ. ಲಿಂಗಾಯತ ಪ್ರಮುಖರು ಕಾಂಗ್ರೆಸ್ ಸೇರ್ಪಡೆಯಾಗಿದ್ದು ಬಿಜೆಪಿಗೆ ದೊಡ್ಡ ಹಿನ್ನಡೆ. ಲಿಂಗಾಯತರು ಈ ಬಾರಿ ಕಾಂಗ್ರೆಸಿಗೆ ಎಷ್ಟು ಒಲವು ತೋರಿದ್ದಾರೆ ಅಂದ್ರೆ, ಲಿಂಗಾಯತ ಪ್ರಾಬಲ್ಯದ 46 ಸ್ಥಾನಗಳನ್ನು ಗೆಲ್ಲಿಸಿದ್ದಾರೆ.

Jagadish Shettar, Laxman Savadi exits could dent BJP's Lingayat support in  Karnataka polls | Bengaluru News - Times of India

ಶೆಟ್ಟರ್, ಸವದಿಯಿಂದ ಎಫೆಕ್ಟ್

ಒಂದೆಡೆ ಯಡಿಯೂರಪ್ಪ ಕಾರಣದಿಂದ ಒಂದಷ್ಟು ಎರಡನೇ ಹಂತದ ನಾಯಕರು ಬಿಜೆಪಿಯಿಂದ ದೂರ ಸರಿದಿದ್ದರೆ, ಚುನಾವಣೆ ಕಾಲದಲ್ಲಿ ಟಿಕೆಟ್ ಸಿಕ್ಕಿಲ್ಲವೆಂದು ಹಿರಿಯ ನಾಯಕರಾದ ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಪಕ್ಷ ಬಿಟ್ಟು ಹೋಗಿದ್ದು ಉತ್ತರ ಕರ್ನಾಟಕ ಭಾಗದ ಲಿಂಗಾಯತ ಮತ್ತು ಪಂಚಮಸಾಲಿ ಮತಗಳು ಚದುರಿ ಹೋಗಲು ಕಾರಣವಾಗಿತ್ತು. ಶೆಟ್ಟರ್ ಆಘಾತಕಾರಿ ಸೋಲು ಕಂಡಿದ್ದರೂ, ಶೆಟ್ಟರ್ ಪಕ್ಷ ಬಿಟ್ಟು ಹೋಗಿರುವುದು ಬಿಜೆಪಿಗೆ ದೊಡ್ಡ ಹೊಡೆತ ಕೊಟ್ಟಿರುವುದು ಸತ್ಯ.

Karnataka elections: Football for Gali Janardhan Reddy's KRPP party |  Bengaluru - Hindustan Times

ರೆಡ್ಡಿ ಪಾರ್ಟಿಯಿಂದ ಚದುರಿದ ಮತಗಳು

ಜನಾರ್ದನ ರೆಡ್ಡಿ ಏನಿಲ್ಲ ಅಂದ್ರೂ, ಬಳ್ಳಾರಿ, ಯಾದಗಿರಿ, ಗಂಗಾವತಿ ಭಾಗದಲ್ಲಿ 15-20 ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದ್ದಾರೆ. ಹೊಸ ಪಕ್ಷ ಕಟ್ಟಿ ಎಲ್ಲ ಕಡೆಯೂ 5-6 ಸಾವಿರ ಬಿಜೆಪಿ ಮತಗಳನ್ನು ಕಿತ್ತು ಹೊಡೆತ ಕೊಟ್ಟಿದ್ದಾರೆ. ಸ್ವತಃ ಬಳ್ಳಾರಿಯಲ್ಲಿ ಸ್ನೇಹಿತ ಶ್ರೀರಾಮುಲು, ಸೋದರ ಸೋಮಶೇಖರ ರೆಡ್ಡಿ ಸೋಲಿಸಿದ್ದು ಜನಾರ್ದನ ರೆಡ್ಡಿ ಪಕ್ಷ.

ಬಿಜೆಪಿಯಲ್ಲಿದ್ದ ಅತಿ ವಿಶ್ವಾಸ, ಅಹಮಿಕೆ  

ಬಿಜೆಪಿಯಲ್ಲಿ ಹೇಳಿಕೊಳ್ಳುವ ನಾಯಕನೇ ಇರದಿದ್ದರೂ ನಾವೇ ಗೆಲ್ತೀವಿ ಅನ್ನುವ ಅತಿ ವಿಶ್ವಾಸ ಇತ್ತು. ಸೀಟು ಕಡಿಮೆ ಬಂದರೂ, ಜೆಡಿಎಸ್ ಜೊತೆ ಸೇರಿ ಅಥವಾ ಅಮಿತ್ ಷಾ ಕುದುರೆ ವ್ಯಾಪಾರ ಮಾಡಿ ಸರಕಾರ ತಂದೇ ತರುತ್ತಾರೆ ಅನ್ನುವ ಅಹಂ ಬಿಜೆಪಿ ನಾಯಕರಿಗೆ ಇತ್ತು. ಯಡಿಯೂರಪ್ಪ ಸೈಡ್ ಲೈನ್ ಆದಬಳಿಕ ಬಿಜೆಪಿಯಲ್ಲಿ ಆ ಸ್ಥಾನ ತುಂಬುವ ನಾಯಕ ಇರಲಿಲ್ಲ. ಸ್ವಂತ ವರ್ಚಸ್ಸು ಇಲ್ಲದಿದ್ದರೂ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರನ್ನೇ ಚುನಾವಣೆ ಕಾಲದಲ್ಲಿ ಮುಂದುವರಿಸಿದ್ದು ದೊಡ್ಡ ನಷ್ಟಕ್ಕೆ ಕಾರಣವಾಗಿತ್ತು. ಹೀಗಾಗಿ ಬಿಜೆಪಿ ಸೋಲಿಗೆ ಒಂದೆರಡು ವಿಚಾರ ಅಲ್ಲ. ಉತ್ತರ, ದಕ್ಷಿಣ, ಬೆಂಗಳೂರು, ಕರಾವಳಿ ಹೀಗೆ ನೋಡಿದರೆ, ಒಂದೊಂದು ಕಡೆ ಒಂದೊಂದು ವಿಚಾರಗಳು ಬಿಜೆಪಿಯನ್ನು ಕಾಂಗ್ರೆಸ್ ಸುನಾಮಿ ಎದುರು ನೆಲಕಚ್ಚಿಸಿದೆ.

What is the major reason for BJP to loose Karnataka elections 2023, Master plan of Congress in winning in the state. It seems social engineering is the main reason for Congress’s victory in Karnataka. Especially Congress’s social engineering with Lingayat and Vokkaligas seems to have been the major factor in Congress’s lead in Karnataka elections this this time. Lingayats have around 17% votes in Karnataka.