ಮೋರಲ್ ಪೊಲೀಸಿಂಗ್ ಸಹಿಸಲ್ಲ, ಎಲ್ಲದಕ್ಕೂ ಎಂಡ್ ಹಾಕಿಸ್ತೀವಿ, ಅಪರಾಧ ನಡೆದಲ್ಲಿ ಡಿಸಿಪಿಗಳೇ ಹೊಣೆ ; ಸಿದ್ದರಾಮಯ್ಯ ಗುಡುಗು 

23-05-23 07:41 pm       Bangalore Correspondent   ಕರ್ನಾಟಕ

ಇನ್ನು ಯಾವುದೇ ರೀತಿಯ ಮೋರಲ್ ಪೊಲೀಸಿಂಗ್ ನಡೀಬಾರದು.‌ ನಮ್ಮ ಸರ್ಕಾರದಲ್ಲಿ ಅದಕ್ಕೆಲ್ಲ ಅವಕಾಶ ಇರಲ್ಲ. ಮೋರಲ್ ಪೋಲೀಸಿಂಗ್ ಎಲ್ಲದಕ್ಕೂ ಎಂಡ್ ಹಾಕಿಸ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

ಬೆಂಗಳೂರು, ಮೇ 23 : ಇನ್ನು ಯಾವುದೇ ರೀತಿಯ ಮೋರಲ್ ಪೊಲೀಸಿಂಗ್ ನಡೀಬಾರದು.‌ ನಮ್ಮ ಸರ್ಕಾರದಲ್ಲಿ ಅದಕ್ಕೆಲ್ಲ ಅವಕಾಶ ಇರಲ್ಲ. ಮೋರಲ್ ಪೋಲೀಸಿಂಗ್ ಎಲ್ಲದಕ್ಕೂ ಎಂಡ್ ಹಾಕಿಸ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ಕರಾವಳಿಯಲ್ಲಿ ಆಗಾಗ್ಗೆ ನಡೆಯುವ ನೈತಿಕ ಪೊಲೀಸ್ ಗಿರಿ ಕುರಿತ ಪತ್ರಕರ್ತರ ಪ್ರಶ್ನೆಗೆ ಸಿದ್ದರಾಮಯ್ಯ ಮೇಲಿನಂತೆ ಉತ್ತರಿಸಿದ್ದಾರೆ. 

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಸಿದ್ದರಾಮಯ್ಯ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ. ಸಭೆಯ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಆಗಬೇಕು ಎನ್ನುವ ಬಗ್ಗೆ ಸೂಚನೆಗಳನ್ನು ನೀಡಿದ್ದೇವೆ. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏನೇ ಅಪರಾಧ ಚಟುವಟಿಕೆ ನಡೆದರೂ ಅದಕ್ಕೆ ಅಲ್ಲಿನ ಇನ್ಸ್ ಪೆಕ್ಟರ್ ಮಾತ್ರ ಹೊಣೆಯಲ್ಲ. ಆ ಭಾಗದ ಡಿಸಿಪಿಗಳನ್ನು ಹೊಣೆ ಮಾಡಲಾಗುವುದು. ಡ್ರಗ್ಸ್, ಗ್ಯಾಂಬ್ಲಿಂಗ್ ಇನ್ನಿತರ ಅಕ್ರಮ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು. ಪೊಲೀಸ್ ಠಾಣೆಗೆ ಬರುವ ಯಾವುದೇ ವ್ಯಕ್ತಿಯನ್ನು ಆತನ ಧರ್ಮ ನೋಡಿ ಕೇಸು ತಗೊಳ್ಳೋದು ಅಲ್ಲ. ಪೊಲೀಸರು ಜನರ ಕಷ್ಟ, ನೋವುಗಳಿಗೆ ಕಿವಿಯಾಗಬೇಕು ಎಂದು ಹೇಳಿದರು. ಜನ ಬದಲಾವಣೆಯ ನಿರೀಕ್ಷೆಯೊಂದಿಗೆ ಹೊಸ ಸರ್ಕಾರವನ್ನು ಚುನಾಯಿಸಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಸಾಮರಸ್ಯ ಕದಡುವ, ತೇಜೋವಧೆ ಮಾಡುವ, ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದ ಅವರು, ಪೊಲೀಸ್‌ ಠಾಣೆಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಪೊಲೀಸ್‌ ಠಾಣೆಗೆ ಸಮಸ್ಯೆ ಪರಿಹಾರಕ್ಕಾಗಿ ಬರುವ ಸಾರ್ವಜನಿಕರನ್ನು ಅಪರಾಧಿಗಳಂತೆ ಕಾಣದೆ ಸೌಜನ್ಯದಿಂದ ವರ್ತಿಸಬೇಕು. ಅವರ ಸಮಸ್ಯೆಗಳನ್ನು ಬಗೆಹರಿಸಿ ನ್ಯಾಯ ಒದಗಿಸಬೇಕು. ಗೂಂಡಾಗಿರಿ, ಅನಧಿಕೃತ ಕ್ಲಬ್‌ಗಳ ಚಟುವಟಿಕೆಗಳು, ಡ್ರಗ್‌ ಮಾಫಿಯಾವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಇವುಗಳಿಗೆ ಅವಕಾಶ ನೀಡಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಉತ್ತಮವಾಗಿ ಕೆಲಸ ಮಾಡುವವರಿಗೆ ಶಹಬ್ಬಾಶ್‌ಗಿರಿ ನೀಡುತ್ತೇವೆ. ಕರ್ತವ್ಯಲೋಪ ಎಸಗಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಕೆ.ಜೆ. ಜಾರ್ಜ್‌, ಕೆ.ಹೆಚ್. ಮುನಿಯಪ್ಪ, ಬಿ.ಝಡ್. ಜಮೀರ್‌ ಅಹ್ಮದ್‌ ಖಾನ್‌, ಎಂ.ಬಿ. ಪಾಟೀಲ್‌, ಸತೀಶ್‌ ಜಾರಕಿಹೊಳಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌ ಉಪಸ್ಥಿತರಿದ್ದರು.

Karnataka chief minister Siddaramaiah and deputy CM DK Shivakumar held a key meeting with senior police officials at Bengaluru’s Vidhana Soudha on Tuesday evening. They directed the officials to take strict action against hooligans who disturb the harmony in society and declared that no moral policing will be encouraged. CM Siddaramaiah also asked them to monitor social media posts which spread misinformation and might lead to law and order issues.