ಕಪಾಲಬೆಟ್ಟದಲ್ಲಿ ಯೇಸು ಪ್ರತಿಮೆ, ಹಿಜಾಬ್ ನಿಷೇಧ, ಮತಾಂತರ ನಿಷೇಧ ಕಾಯ್ದೆ ತೆರವಿಗೆ ಕಾಂಗ್ರೆಸ್ ಚಿಂತನೆ ; ಮತ್ತೆ ವಿವಾದಕ್ಕೆ ತುಪ್ಪ ಸುರೀತಾರಾ ಸಿದ್ದರಾಮಯ್ಯ ?

24-05-23 09:16 pm       Bangalore Correspondent   ಕರ್ನಾಟಕ

ಸರಕಾರಿ ಪ್ರಥಮ ದರ್ಜೆ ಕಾಲೇಜು ತರಗತಿಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಬಿಜೆಪಿ ಸರಕಾರ ಕೈಗೊಂಡಿದ್ದ ನಿರ್ಣಯವನ್ನು ಹಿಂಪಡೆಯಲು ಕಾಂಗ್ರೆಸ್ ಸರಕಾರ ಚಿಂತನೆ ನಡೆಸಿದೆ.

ಬೆಂಗಳೂರು, ಮೇ 24: ಸರಕಾರಿ ಪ್ರಥಮ ದರ್ಜೆ ಕಾಲೇಜು ತರಗತಿಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಬಿಜೆಪಿ ಸರಕಾರ ಕೈಗೊಂಡಿದ್ದ ನಿರ್ಣಯವನ್ನು ಹಿಂಪಡೆಯಲು ಕಾಂಗ್ರೆಸ್ ಸರಕಾರ ಚಿಂತನೆ ನಡೆಸಿದೆ. ಪೂರ್ತಿಯಾಗಿ ಮಂತ್ರಿಮಂಡಲ ರಚನೆಗೊಂಡು ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಬಗ್ಗೆ ಸಂಪುಟದಲ್ಲಿ ನಿರ್ಧಾರ ಕೈಗೊಂಡು ತೀವ್ರ ವಿವಾದಕ್ಕೀಡಾಗಿದ್ದ ಹಿಜಾಬ್ ನಿಷೇಧವನ್ನು ಹಿಂಪಡೆಯಲು ಚಿಂತನೆ ನಡೆದಿದೆ.

ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾವು ಅಧಿಕಾರಕ್ಕೆ ಬಂದಲ್ಲಿ ಹಿಜಾಬ್ ನಿಷೇಧ ಸೇರಿದಂತೆ ಬಿಜೆಪಿ ಸರಕಾರ ಮಾಡಿರುವ ಎಲ್ಲ ರೀತಿಯ ಕೋಮು ಉದ್ದೇಶಿತ ಮಸೂದೆಗಳನ್ನು ಹಿಂಪಡೆಯುವುದಾಗಿ ಹೇಳಿಕೆ ನೀಡಿದ್ದರು. ಈಗ ಡಿಸಿಎಂ ಆದಬಳಿಕ ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಹಿಜಾಬ್ ನಿಷೇಧ ಕುರಿತು ಈಗ ನಾನು ಪ್ರತಿಕ್ರಿಯಿಸುವುದಿಲ್ಲ. ಅದೊಂದು ಕಾನೂನು ವಿಚಾರ ಆಗಿರುವುದರಿಂದ ಕಮೆಂಟ್ ಮಾಡಲ್ಲ ಎಂದಿದ್ದಾರೆ. ಆದರೆ ಇದೇ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ ಖರ್ಗೆ, ಕಡ್ಡಿ ಮುರಿದಂತೆ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಸರಕಾರ ಹಿಜಾಬ್ ನಿಷೇಧ, ಹಲಾಲ್ ಕಟ್ ನಿಷೇಧ, ಗೋಹತ್ಯೆ ನಿಷೇಧ ಕಾಯ್ದೆ ಸೇರಿ ಎಲ್ಲ ವಿವಾದಾತ್ಮಕ ಮಸೂದೆಗಳನ್ನೂ ಹಿಂಪಡೆಯಲಿದೆ ಎಂದು ಪ್ರಿಯಾಂಕ್ ಹೇಳಿದ್ದಾರೆ.

ಕಪಾಲಬೆಟ್ಟದಲ್ಲಿ ಯೇಸು ಪ್ರತಿಮೆ

ಸರಕಾರದ ಮೂಲಗಳ ಪ್ರಕಾರ, ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ಸೇರಿ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಕಾನೂನುಗಳನ್ನು ಹಿಂಪಡೆಯಲು ಚಿಂತನೆ ನಡೆದಿದೆ. ಇದಲ್ಲದೆ, ಕನಕಪುರ ತಾಲೂಕಿನ ಕಪಾಲಬೆಟ್ಟದಲ್ಲಿ ಜಗತ್ತಿನಲ್ಲೇ ದೊಡ್ಡದಾಗಿರುವ 114 ಅಡಿ ಎತ್ತರದ ಏಸು ಪ್ರತಿಮೆ ಸ್ಥಾಪಿಸಲು ಕಾಂಗ್ರೆಸ್ ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಟೈಮ್ಸ್ ನೌ ವಾಹಿನಿ ಸುದ್ದಿ ಬಿತ್ತರಿಸಿದೆ. ಡಿಕೆಶಿ ಪ್ರತಿನಿಧಿಸುವ ಕನಕಪುರ ಕ್ಷೇತ್ರದ ಕಪಾಲಬೆಟ್ಟದಲ್ಲಿ ಈ ಹಿಂದೆ ಬಿಜೆಪಿ ಸರಕಾರ ಇದ್ದಾಗಲೂ ಏಸು ಪ್ರತಿಮೆ ಸ್ಥಾಪನೆಗೆ ಪ್ರಯತ್ನ ನಡೆದಿತ್ತು. ಅದಕ್ಕೆ ತೀವ್ರ ವಿರೋಧ ಎದುರಾಗಿದ್ದರಿಂದ ಪ್ರಸ್ತಾಪ ಕೈಬಿಡಲಾಗಿತ್ತು.

ಕಳೆದ ಬಾರಿ ಉಡುಪಿಯ ಸರಕಾರಿ ಪಿಯು ಕಾಲೇಜಿನಲ್ಲಿ ಮೊದಲ ಬಾರಿಗೆ ಹಿಜಾಬ್ ವಿವಾದ ಕೇಳಿಬಂದಿತ್ತು. ಅಲ್ಲಿನ ಕಾಲೇಜು ಆಡಳಿತ ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವಂತಿಲ್ಲ ಎಂದು ಮಾಡಿದ್ದ ನಿಯಮದ ವಿರುದ್ಧ ಆರು ಮಂದಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಆನಂತರ, ಹೈಕೋರ್ಟಿನಲ್ಲಿ ದಾವೆ ಹೂಡಿ ಭಾರೀ ಜಟಾಪಟಿ ನಡೆದಿತ್ತು. ಸದ್ಯಕ್ಕೆ ವಿವಾದ ಸುಪ್ರೀಂ ಕೋರ್ಟಿನಲ್ಲಿದ್ದು, ರಾಜ್ಯ ಸರಕಾರವೇ ನಿರ್ಧಾರ ಕೈಗೊಂಡಿರುವುದರಿಂದ ಆ ಬಗ್ಗೆ ಕೋರ್ಟಿನಿಂದ ನಿರ್ದೇಶನ ನೀಡುವಂತಿಲ್ಲ ಎಂದು ಹೈಕೋರ್ಟ್ ಹೇಳಿದ್ದು ಹಿಜಾಬ್ ಹೋರಾಟಗಾರರಿಗೆ ಹಿನ್ನಡೆಯಾಗಿತ್ತು. ಅಲ್ಲದೆ, ಉಡುಪಿ ಕಾಲೇಜಿನಲ್ಲಿದ್ದ ನಿಯಮವನ್ನು ಬಿಜೆಪಿ ಸರಕಾರ ಇಡೀ ರಾಜ್ಯಕ್ಕೆ ಅನ್ವಯಿಸಿ ಶಿಕ್ಷಣ ಇಲಾಖೆಯ ಮೂಲಕ ಜಾರಿಗೊಳಿಸಿತ್ತು. ಸರಕಾರದ ನಿರ್ಧಾರ ಪ್ರಶ್ನಿಸಿ ಉಡುಪಿ, ಮಂಗಳೂರು, ಶಿವಮೊಗ್ಗ, ಬಾಗಲಗೋಟ ಸೇರಿ ಕೆಲವು ಕಡೆ ಪ್ರತಿಭಟನೆಗಳು ನಡೆದಿದ್ದವು. ಆನಂತರ, ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಸರಕಾರಿ ಕಾಲೇಜು ತ್ಯಜಿಸಿ ಖಾಸಗಿ ಕಾಲೇಜು ಸೇರಿದ್ದರೆ, ಹೆಚ್ಚಿನ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ಕಾಲೇಜಿಗೆ ಬರತೊಡಗಿದ್ದರು. ಮುಸ್ಲಿಮ್ ಸಂಘಟನೆಗಳು ಇದನ್ನೇ ಪ್ರತಿಷ್ಠೆಯನ್ನಾಗಿಸಿ ದಾವೆಯನ್ನು ಸುಪ್ರೀಂ ಕೋರ್ಟಿಗೆ ಒಯ್ದಿದ್ದವು.

Supreme Court: Latest news, Updates, Photos, Videos and more.

ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಿದ್ದು ಚುನಾವಣೆ ಕಾಲದಲ್ಲಿ ನೀಡಿದ್ದ ಭರವಸೆಯಂತೆ ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆಯುತ್ತಾರಾ ಎನ್ನುವ ಕುತೂಹಲ ಉಂಟಾಗಿದೆ. ಸರಕಾರದ ನೇತೃತ್ವ ವಹಿಸಿರುವ ಕೆಲವು ಸಚಿವರು ಹಿಜಾಬ್ ನಿಷೇಧ ಆದೇಶ ಹಿಂಪಡೆಯಬೇಕು ಎಂಬ ನಿಲುವಿನಲ್ಲಿದ್ದರೆ, ಲೋಕಸಭೆ ಚುನಾವಣೆ ಹೊತ್ತಿಗೆ ಬಿಜೆಪಿಗೆ ಅಸ್ತ್ರ ನೀಡುವುದು ಬೇಡ ಎಂದು ಕೆಲವು ನಾಯಕರು ನಿಲುವು ತಾಳಿದ್ದಾರೆ. ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದಕ್ಕಾಗಿ ಕೋಮು ಧ್ರುವೀಕರಣದ ಅಸ್ತ್ರಗಳನ್ನು ಬಿಜೆಪಿ ಕೈಗೆ ನೀಡದೆ ಉತ್ತಮ ಆಡಳಿತ ನೀಡಬೇಕು ಎನ್ನುವ ನಿಲುವಿನಲ್ಲಿ ಕೆಲವು ನಾಯಕರಿದ್ದಾರೆ. 

The new Congress government in Karnataka is all set to remove the ban on hijab in the state, sources said on Wednesday. While campaigning for the May 10 Assembly polls, the Congress Congress, especially Deputy Chief Minister D.K. Shivakumar, had vehemently stated that ban on hijab and all laws made on communal basis by the previous BJP government would be withdrawn once the party assumes power in the state.