ಕೋವಿಡ್ ಸಂದರ್ಭ ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ; ಪ್ರಕರಣಕ್ಕೆ ಮತ್ತೆ ಮರುಜೀವ, ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್

30-05-23 03:41 pm       Bangalore Correspondent   ಕರ್ನಾಟಕ

ಕರೊನಾ ಸಮಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ವರದಿ ಕೇಳಿದ್ದಾರೆ. ವರದಿಯಲ್ಲಿ ಏನಿರುತ್ತದೆ ಎಂಬುದನ್ನು ತಿಳಿದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿದರು.

ಬೆಂಗಳೂರು, ಮೇ 30: ಕರೊನಾ ಸಮಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ವರದಿ ಕೇಳಿದ್ದಾರೆ. ವರದಿಯಲ್ಲಿ ಏನಿರುತ್ತದೆ ಎಂಬುದನ್ನು ತಿಳಿದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿದರು.

ಕರೊನಾ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಆಕ್ಸಿಜನ್ ದುರಂತ ಪ್ರಕರಣಕ್ಕೆ ಮತ್ತೆ ಮರುಜೀವ ಬಂದಿದ್ದು, ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಪ್ರತಿಕ್ರಿಯಿಸಿದ್ದು, ದುರದೃಷ್ಟವಶಾತ್ ಆಕ್ಸಿಜನ್ ದುರಂತಕ್ಕೆ ಯಾರು ಕಾರಣ ಎಂಬುದರ ಬಗ್ಗೆ ಇನ್ನೂ ತನಿಖೆ ಪೂರ್ಣ ತನಿಖೆ ಮಾಡಿಲ್ಲ. ಇದೀಗ ಮರು ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಆಕ್ಸಿಜನ್ ದುರಂತ ಪ್ರಕರಣದಲ್ಲಿ ಯಾರಿಂದ ಲೋಪದೋಷ ಉಂಟಾಗಿದೆಯೋ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನ್ಯಾಯಾಲಯದಿಂದ ಪ್ರಕರಣದ ‌ಕುರಿತು ತೀರ್ಪು ಬಂದಿದೆ. ಆದರೆ ಇಲಾಖೆಯಿಂದ ಸರಿಯಾದ ತನಿಖೆ ನಡೆದಿಲ್ಲ. ಮತ್ತೊಮ್ಮೆ ಸರಿಯಾದ ತನಿಖೆ ನಡೆಸುಂತೆ ಸೂಚಿಸಿದ್ದೇನೆ ಎಂದರು.

ಏನಿದು ಆಕ್ಸಿಜನ್ ದುರಂತ?

ಕರೊನಾ 2ನೇ ಅಲೆ ತೀವ್ರವಾಗಿದ್ದ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಂಗ್ರಹದ ಅಸಮರ್ಪಕ ನಿರ್ವಹಣೆಯಿಂದ 36 ಕರೊನಾ ಸೋಂಕಿತರು ಮೃತಪಟ್ಟಿದ್ದರು. ಆಕ್ಸಿಜನ್ ದುರಂತಕ್ಕೆ ಅಂದಿನ ಜಿಲ್ಲಾಧಿಕಾರಿಯ ನಿರ್ಲಕ್ಷ್ಯವೇ ಕಾರಣ ಎಂದು ನ್ಯಾಯಮೂರ್ತಿ ವೇಣುಗೋಪಾಲ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ಹೇಳಿತ್ತು. ಆದರೆ ಈ ಹಿಂದಿನ ಸರ್ಕಾರ ಮಾತ್ರ ದುರಂತಕ್ಕೆ ಯಾರನ್ನೂ ಹೊಣೆ ಮಾಡಿರಲಿಲ್ಲ. ಘಟನೆ ನಡೆದು ಒಂದು ವರ್ಷ ಕಳೆದಿದ್ದರೂ, ನ್ಯಾಯಾಂಗ ತನಿಖಾ ವರದಿ ಇನ್ನೂ ಬಹಿರಂಗವಾಗಿಲ್ಲ.

Oxygen tragedy in Chamarajanagar, health minister Dinesh Gundu Rao orders for reinvestigation of case.