ಕಾರ್ ನಲ್ಲಿ ಎಂಜಾಯ್ ಮಾಡುವಾಗ್ಲೇ  ಆಕ್ಸಿಡೆಂಟ್ ; ಸ್ನೇಹಿತರಿಬ್ಬರ ದಾರುಣ ಸಾವು, ಬಟ್ಟೆ ತರಲು ಹೋಗಿ ವಾಪಸ್ ಬರುವಾಗ ದುರಂತ, ಮತ್ತಿಬ್ಬರು ಗಂಭೀರ

12-06-23 11:45 am       HK News Desk   ಕರ್ನಾಟಕ

ಬೆಂಗಳೂರು-ಮೈಸೂರು ದಶಪಥದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಸ್ನೇಹಿತರಿಬ್ಬರು ಸಾವಿಗೀಡಾಗಿದ್ದು, ಮತ್ತಿಬ್ಬರು ಸ್ನೇಹಿತರ ಪರಿಸ್ಥಿತಿ ಗಂಭೀರವಾಗಿದೆ.

ರಾಮನಗರ, ಜೂನ್ 12: ಬೆಂಗಳೂರು-ಮೈಸೂರು ದಶಪಥದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಸ್ನೇಹಿತರಿಬ್ಬರು ಸಾವಿಗೀಡಾಗಿದ್ದು, ಮತ್ತಿಬ್ಬರು ಸ್ನೇಹಿತರ ಪರಿಸ್ಥಿತಿ ಗಂಭೀರವಾಗಿದೆ. ಹೆದ್ದಾರಿಯಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ಭಾನುವಾರ ಈ ಭೀಕರ ಅಪಘಾತ ಸಂಭವಿಸಿದೆ.

ಚನ್ನಪಟ್ಟಣ ತಾಲೂಕಿನ ಕೋಲೂರು ಗೇಟ್ ಬಳಿಯ ಚಾಮುಂಡೇಶ್ವರಿ ಆಸ್ಪತ್ರೆ ಮುಂಭಾಗ ಈ ಅಪಘಾತ ಸಂಭವಿಸಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಮದ್ದೂರು ಮೂಲದ ಚಾಲಕ ಮಂಜೇಶ್ (28) ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನುಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದರು.

ಗಂಭೀರ ಗಾಯಗೊಂಡಿದ್ದ ವಿಜಯ್, ವಿನಯ್ ಹಾಗೂ ನಿಖಿಲ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ನಿವಾಸಿ ವಿನಯ್ (23) ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ರಾಮನಗರದ ಮಂಜುನಾಥ್ ನಗರ ನಿವಾಸಿ ವಿಜಯ್ (23), ಮತ್ತೊಬ್ಬ ಗಾಯಾಳು ನಿಖಿಲ್​ಗೆ ಚಿಕಿತ್ಸೆ ಮುಂದುವರಿದಿದೆ. ವಿಜಯ್ ಪರಿಸ್ಥಿತಿ ಚಿಂತಾಜನಕವಾಗಿದೆ.

ನಾಲ್ವರು ಸ್ನೇಹಿತರು ಮದ್ದೂರಿನ ಬೆಸಗರಹಳ್ಳಿಗೆ ಬಟ್ಟೆ ತರಲು ಹೋಗಿದ್ದರು. ಅಲ್ಲಿಂದ ವಾಪಸ್ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಕಾರು ಡಿಕ್ಕಿ ಹೊಡೆದಿದೆ. ವಾಹನ ಚಲಾಯಿಸುತ್ತಿದ್ದ ಮಂಜೇಶ್​ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಸಾವಿಗೀಡಾಗಿದ್ದ. ಅಪಘಾತಕ್ಕೂ ಮುನ್ನ ಈ ನಾಲ್ವರು ಕಾರಿನಲ್ಲಿ ಜಾಲಿಯಾಗಿ ಹಾಡು ಹೇಳಿಕೊಂಡು ಬಂದಿದ್ದು, ವಿಡಿಯೋ ಕೂಡ ಮಾಡಿಕೊಂಡಿದ್ದರು. ಆದರೆ ಅದಾದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದ್ದರು.

ಕಾರು ರಾಮನಗರದ ಕಡೆಗೆ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿತ್ತು. ಗಾಯಾಳುಗಳನ್ನು ಚಾಮುಂಡೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Bengaluru Mysuru express way road accident, two friends killed on spot at Ramnagara.