Hassan Suicide: ಹಾಸನ ; ಬಾಡಿಗೆದಾರರ ಕಿರುಕುಳ, ಜಗಳಕ್ಕೆ ಮನೆ ಒಡತಿ ಆತ್ಮಹತ್ಯೆ , ಮಗಳ ಸಾವಿನ ಸುದ್ದಿ ಕೇಳಿ ಸಾವನ್ನಪ್ಪಿದ ತಾಯಿ!

22-06-23 01:54 pm       HK News Desk   ಕರ್ನಾಟಕ

ಬಾಡಿಗೆದಾರರ ಕಿರುಕುಳದಿಂದ ಮನೆ ಒಡತಿ ಕೀಟನಾಶಕ  ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾಸರಕೊಪ್ಪಲಿನಲ್ಲಿ ನಡೆದಿದೆ. ಮಗಳ ಸಾವಿನ ಸುದ್ದಿಯನ್ನು ಕೇಳಿ ತಾಯಿಯೂ ಸಾವಿಗೀಡಾಗಿದ್ದಾರೆ.

ಹಾಸನ, ಜೂ 22: ಬಾಡಿಗೆದಾರರ ಕಾಟಕ್ಕೆ ಪ್ರಾಣ ಬಿಟ್ಟ ಮಗಳ ಸಾವಿನ ಸುದ್ದಿ ಕೇಳಿ ತಾಯಿಯೂ ಸಾವನ್ನಪ್ಪಿರುವ ಘಟನೆ ಹಾಸನದ ದಾಸರಕೊಪ್ಪಲಿನಲ್ಲಿ ನಡೆದಿದೆ.

ಲಲಿತಾ (55) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು, ಈ ಸುದ್ದಿ ಕೇಳಿ ಲಕ್ಷಮ್ಮ (75) ಆಘಾತಕ್ಕೊಳಗಾಗಿ ಸಾವಿಗೀಡಾಗಿದ್ದಾರೆ. 

ಲಲಿತಾ ಹಾಗೂ ಪತಿ ನಾಗರಾಜ ದಾಸರಕೊಪ್ಪಲು ಬಡಾವಣೆಯಲ್ಲಿ  ಮನೆಗಳನ್ನು ನಿರ್ಮಿಸಿಕೊಂಡಿದ್ದರು.  ಮನೆಯ ಮೇಲ್ಭಾಗದ ಮನೆಗಳನ್ನು ಬಾಡಿಗೆ ಮತ್ತು ಲೀಸ್ ಗೆ ನೀಡಿದ್ದರು. ಎರಡು ವರ್ಷದ ಹಿಂದೆ ಮೊದಲ ಮಹಡಿಯ ಮನೆಯನ್ನು ಉದ್ದೂರು ಕೊಪ್ಪಲು ಗ್ರಾಮದ ಸುಧಾರಾಣಿ ಹಾಗೂ ನಟರಾಜ ದಂಪತಿಗೆ ಮನೆ ಲೀಸ್ ಗೆ ಕೊಟ್ಟಿದ್ರು. ಹೊಸ ಮನೆಗೆ ಬಂದ ಒಂದು ವರ್ಷದ ನಂತರ ನಟರಾಜ ದಂಪತಿ ವಿನಾಃ ಕಾರಣ ಲಲಿತಾ ಅವರೊಂದಿಗೆ ಜಗಳ ಮಾಡುತ್ತಿದ್ದರು. ಒಮ್ಮೆ ನಾಗರಾಜ ಮತ್ತು ಲಲಿತಾ ಅವರ ಮೇಲೆ ಸುಧಾರಾಣಿ ಮತ್ತು ನಟರಾಜ ಹಲ್ಲೆಗೆ ಮುಂದಾಗಿದ್ದರು. ಜೂ.16 ರಂದು ಸರ ಕದ್ದಿದ್ದೀಯಾ, ನೀನು ಕಳ್ಳಿ ಎಂದು ಜಗಳ ತೆಗೆದು ಲಲಿತಾಗೆ ಬಾಯಿಗೆ ಬಂದಂತೆ ಬೈದಿದ್ದಾಳೆ . ಇದರಿಂದ ಬೇಸರಗೊಂಡು ಲಲಿತಾ ಮನೆ ಬಿಟ್ಟು ಹೋಗಿದ್ದರು. ನಂತರ ಜೂ.17 ರಂದು ಬೆಳಿಗ್ಗೆ ನಂಜದೇವರಕಾವಲು ಗ್ರಾಮದ ಅವರ ಜಮೀನಿನಲ್ಲಿ ವಿಷ ಕುಡಿದು ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ನಾಗರಾಜ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜೂ.20 ರಂದು ರಾತ್ರಿ ಲಲಿತಾ ಸಾವನಪ್ಪಿದ್ದಾರೆ. ಮಗಳ ಸಾವನ್ನಪ್ಪಿದ ಸುದ್ದಿ ಕೇಳಿ ಅಘಾತದಿಂದ ತಾಯಿ ಕೂಡ ಸಾವನ್ನಪ್ಪಿದ್ದಾರೆ.

ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಡಿಗೆದಾರ ನಟರಾಜ್ ಮತ್ತು ಸುಧಾರಣೆಯನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

Hassan House owner commits suicide due to harassment by tenant, mother too dies after hearing shocking news of daughter.