ಮಹಾರಾಷ್ಟ್ರದಿಂದ ಕೋಲಾರಕ್ಕೆ ತೆರಳುತ್ತಿದ್ದ ಲಾರಿ ಅಪಘಾತ ; ಲಾರಿಯಲ್ಲಿದ್ದ 9 ದನಗಳು ಸ್ಥಳದಲ್ಲಿಯೇ ಸಾವು 

23-06-23 04:13 pm       HK News Desk   ಕರ್ನಾಟಕ

ಹಿರಿಯೂರು ತಾಲೂಕಿನ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಹಿರಿಯೂರು,  ಜೂನ್ 23: ಹಿರಿಯೂರು ತಾಲೂಕಿನ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿ ಮುಂದೆ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಲಾರಿಯಲ್ಲಿದ್ದ 9 ದನಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಎನ್‌ಎಚ್-4 ರಸ್ತೆಯ ಕೆಆರ್ ಹಳ್ಳಿ ಗೇಟ್ ಬಳಿ ಇರುವ ಬೈನರಿ ಗಾರ್ಮೆಂಟ್ಸ್ ಸಮೀಪ ಶುಕ್ರವಾರ ಬೆಳಗ್ಗೆ ಘಟನೆ ನಡೆದಿದೆ. ಮಹಾರಾಷ್ಟ್ರದಿಂದ ಕೋಲಾರ ಕಡೆಗೆ ದನಗಳನ್ನು ತುಂಬಿಕೊಂಡು ಹೋಗುತ್ತಿದ್ದ ಈಚರ್ ಲಾರಿ ಮುಂದೆ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಲಾರಿಯಲ್ಲಿದ್ದ 10 ದನಗಳ ಪೈಕಿ 7 ದನಗಳು ಸ್ಥಳದಲ್ಲೇ ಸಾವನ್ನಪ್ಪಿದ್ದವು. 2 ದನಗಳು ಗಂಭೀರವಾಗಿ ಗಾಯಗೊಂಡಿದ್ದವು. ಆದರೆ, ಅವು ಕೂಡ ಈಗ ಸಾವನ್ನಪ್ಪಿದ್ದು, ಒಂದು ಗೋವು ಮಾತ್ರ ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೇ ಹಿರಿಯೂರು ನಗರದಲ್ಲಿ ಹರಿಯಾಣ ಮೂಲದ 7 ಜನರ ತಂಡವೊಂದು ಗೋವುಗಳನ್ನು ಹಿಡಿದು ಟೆಂಪೋಗೆ ತುಂಬಿಕೊಂಡು ಹೋಗುತ್ತಿದ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಪದೇ ಪದೇ ಗೋವುಗಳ ಅಕ್ರಮ ಸಾಗಾಟ ನಡೆಯುತ್ತಿದ್ದು, ಈ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

Chitradurga 9 cattle killed in spot after truck accident near hiriyur.