ಅಕ್ಕಿ ಬದಲು ಕುಟುಂಬದ ಪ್ರತಿ ಸದಸ್ಯನಿಗೆ ಹಣ ; ಸಚಿವ ಸಂಪುಟದಲ್ಲಿ ನಿರ್ಧಾರ, ಜು.1ರಿಂದಲೇ ಮನೆ ಯಜಮಾನಿ ಖಾತೆಗೆ ಬರಲಿದೆ ಹಣ ! 

28-06-23 04:57 pm       Bangalore Correspondent   ಕರ್ನಾಟಕ

ಅನ್ನಭಾಗ್ಯ ಯೋಜನೆಯಡಿ ಹತ್ತು ಕೇಜಿ ಅಕ್ಕಿ ನೀಡುವ ಬದಲಿಗೆ ಹಣ ನೀಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ಬೆಂಗಳೂರು, ಜೂನ್ 28: ಅನ್ನಭಾಗ್ಯ ಯೋಜನೆಯಡಿ ಹತ್ತು ಕೇಜಿ ಅಕ್ಕಿ ನೀಡುವ ಬದಲಿಗೆ ಹಣ ನೀಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಜು.1ರಿಂದಲೇ ಬಿಪಿಎಲ್ ಕಾರ್ಡ್ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮಾವಣೆ ಮಾಡಲು ನಿರ್ಧರಿಸಲಾಗಿದೆ. ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಅಕ್ಕಿ ಕೊರತೆ ಇರುವ ಹಿನ್ನೆಲೆಯಲ್ಲಿ ಹಣ ನೀಡಲು ತೀರ್ಮಾನಿಸಲಾಗಿದೆ. ಒಂದು ಕೆಜಿ ಅಕ್ಕಿ ಬೆಲೆಯನ್ನು 34 ರೂ.ಗೆ ನಿಗದಿಪಡಿಸಿ, ಪ್ರತಿ ಕುಟುಂಬಕ್ಕೆ ಅಗತ್ಯವಿರುವಷ್ಟು ಅಕ್ಕಿಯ ಬದಲಿಗೆ ಹಣ ನೀಡಲಾಗುತ್ತದೆ ಎಂದು ತಿಳಿಸಿದರು.

ಯೋಜನೆ ಲಾಭ ಬಿಪಿಎಲ್ ಕಾರ್ಡುದಾರರಿಗೆ ಮಾತ್ರವೇ ಅನ್ವಯವಾಗುತ್ತದೆ. ಪ್ರತಿ ಕುಟುಂಬಕ್ಕೆ 5 ಕೆಜಿ ಅಕ್ಕಿ ನಿಗದಿಪಡಿಸಿದ್ದು, ಉಳಿದ ಐದು ಕೆಜಿ ಅಕ್ಕಿ ಬದಲಿಗೆ ಪ್ರತಿ ಕೆಜಿ ಅಕ್ಕಿಗೆ 34 ರೂ.ಗಳಂತೆ ಪ್ರತಿ ಕುಟುಂಬಕ್ಕೆ 170 ರೂ. ನೀಡಲು ತೀರ್ಮಾನಿಸಲಾಗಿದೆ. ಜು. 1ರಿಂದಲೇ ಫಲಾನುಭವಿಗಳಿಗೆ ಈ ಹಣ ಜಮೆ ಮಾಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

ಎಷ್ಟು ಸದಸ್ಯರ ಕುಟುಂಬಕ್ಕೆ ಎಷ್ಟು ಹಣ ? 

ಕುಟುಂಬದ ಒಬ್ಬ ಸದಸ್ಯನಿಗೆ 5 ಕೆಜಿ ಲೆಕ್ಕದಲ್ಲಿ ಇಬ್ಬರು ಸದಸ್ಯರ ಕುಟುಂಬಕ್ಕೆ 10 ಕೆಜಿ, ಐದು ಜನರ ಕುಟುಂಬಕ್ಕೆ 25 ಕೆಜಿ ಅಕ್ಕಿ ನಿಗದಿಪಡಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ. ಅದೇ ಲೆಕ್ಕದಲ್ಲಿ ಕೆಜಿ ಅಕ್ಕಿಗೆ 34 ರೂ.ಗಳಂತೆ, 5 ಕೆಜಿ ಅಕ್ಕಿ ಪಡೆಯುವ ಕುಟುಂಬಕ್ಕೆ 170 ರೂ., 10 ಕೆಜಿ ಅಕ್ಕಿಯನ್ನು ಪಡೆಯುವ ಕುಟುಂಬಕ್ಕೆ 340 ರೂ. ಹಾಗೂ 25 ಕೆಜಿ ಅಕ್ಕಿಯನ್ನು ಪಡೆಯುವ ಕುಟುಂಬಕ್ಕೆ 850 ರೂ. ನೀಡಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಬಿಪಿಎಲ್ ಕುಟುಂಬದ ಯಜಮಾನಿ ಖಾತೆಗೆ ಹಣ 

ಪ್ರತಿ ಬಿಪಿಎಲ್ ಕುಟುಂಬದ ಕಾರ್ಡ್ ಗಳಲ್ಲಿ ಮನೆಯ ಯಜಮಾನಿ ಯಾರು ಎಂದು ನಮೂದಾಗಿರುತ್ತದೋ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ಪ್ರತಿ ಬಿಪಿಎಲ್ ಕಾರ್ಡುದಾರರ ಮಾಹಿತಿ ನಮ್ಮ (ಸರ್ಕಾರ) ಬಳಿಯಿದೆ. ಆ ಕಾರ್ಡ್ ಗಳಲ್ಲಿ ಪ್ರಮುಖವಾಗಿ ಉಲ್ಲೇಖವಾಗಿರುವವರ ಹೆಸರು, ಅವರ ಬ್ಯಾಂಕ್ ಖಾತೆಗಳ ವಿವರಗಳು ಸರ್ಕಾರದ ಬಳಿಯಿವೆ. ಅದರ ಆಧಾರದಲ್ಲಿ ಹಣ ಜಮೆ ಮಾಡುತ್ತದೆ ಎಂದು ಮುನಿಯಪ್ಪ ತಿಳಿಸಿದ್ದಾರೆ.

The Karnataka government has decided to give cash instead of rice till rice is procured. For each Kg Rs. 34 will be given until rice is procured and supplied, says Minister HK Patil