K S Eshwarappa: ಪ್ರಣಾಳಿಕೆ ಮಾಡಬೇಕಾದರೆ ನಿಮಗೆ ಮೈಮೇಲೆ ಜ್ಞಾನ ಇರಲಿಲ್ವಾ ? ಅಕ್ಕಿ‌ ಕೊಡಿ ಅಂತಾ ಮೋದಿ ಅವರನ್ನು ಕೇಳಿದ್ರಾ? ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದೀರಿ, ಜನ ಪಾಠ ಕಲಿಸುತ್ತಾರೆ ಬಿಡಿ ! 

13-07-23 08:35 pm       HK News Desk   ಕರ್ನಾಟಕ

ಆದಷ್ಟು ಬೇಗ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕಿತ್ತು. ಆದರೆ, ಏಕೆ ವಿಳಂಬವಾಗುತ್ತಿದೆ ಎಂದು ಕೇಳುವ ಅಧಿಕಾರ ನನಗೆ ಇಲ್ಲ. ಕಾಂಗ್ರೆಸ್‌ನ ಸ್ಥಿತಿ ನಮಗೆ ಬಂದಿದೆ ಎಂದು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗ, ಜುಲೈ 13: ಆದಷ್ಟು ಬೇಗ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕಿತ್ತು. ಆದರೆ, ಏಕೆ ವಿಳಂಬವಾಗುತ್ತಿದೆ ಎಂದು ಕೇಳುವ ಅಧಿಕಾರ ನನಗೆ ಇಲ್ಲ. ಕಾಂಗ್ರೆಸ್‌ನ ಸ್ಥಿತಿ ನಮಗೆ ಬಂದಿದೆ ಎಂದು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ. ಈ ಮೂಲಕ ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷ. ವರಿಷ್ಠರು ಏನೇನು ಯೋಚನೆ ಮಾಡ್ತಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ಏಕೆ ವಿಳಂಬ ಮಾಡ್ತಿದ್ದಾರೆ ಎಂದು ಕೇಳುವ ಅಧಿಕಾರ ನನಗೂ ಇಲ್ಲ. ಆದಷ್ಟು ಬೇಗ ವಿಪಕ್ಷ ನಾಯಕನ ಆಯ್ಕೆ ಮಾಡಿ ಎಂದು ಪ್ರಾರ್ಥನೆ ಮಾಡ್ತೀನಿ.‌ ಇವತ್ತು ಕಾಂಗ್ರೆಸ್ ಸ್ಥಿತಿ ನಮಗೆ ಬಂದಿದೆ. ನಮ್ಮ ಸ್ಥಿತಿ ಅವರಿಗೆ ಬಂದಿದೆ.‌ ಆಗ ನಾವು ದುರ್ಬಲರಾಗಿದ್ದೇವು. ಈಗ ಬಿಜೆಪಿ ಶಕ್ತಿಶಾಲಿಯಾಗಿದೆ ಎಂದರು.

ಕಾಂಗ್ರೆಸ್ ದುರ್ಬಲವಾಗಿದೆ, ಗ್ಯಾರಂಟಿ ಯೋಜನೆಯಲ್ಲೇ ತೊಡಗಿಬಿಟ್ಟಿದ್ದಾರೆ. ಚುನಾವಣಾ ಪ್ರಣಾಳಿಕೆ ಮಾಡಬೇಕಾದರೆ ನಿಮಗೆ ಮೈಮೇಲೆ ಜ್ಞಾನ ಇರಲಿಲ್ವಾ? ಗ್ಯಾರಂಟಿ ಯೋಜನೆಗೆ ಎಷ್ಟು ದುಡ್ಡು ಬೇಕಾಗುತ್ತದೆ ಎಂಬುದು ಗೊತ್ತಿರಲಿಲ್ವಾ? ಅಕ್ಕಿ‌ ಕೊಡಿ ಅಂತಾ ಮೋದಿ ಅವರನ್ನು ಕೇಳಿದ್ರಾ? ಕೇಂದ್ರ ಸರಕಾರ ಈಗಾಗಲೇ 5 ಕೆಜಿ ಅಕ್ಕಿ ಕೊಡ್ತಿದೆ. ನೀವು 10 ಕೆಜಿ ಕೊಡ್ತಿವಿ ಅಂದಿದ್ರಿ. ಈಗ ಅಕ್ಕಿ ಕೊಡಲು ಆಗದಿದ್ದರೆ 10 ಕೆಜಿ ಅಕ್ಕಿ ದುಡ್ಡು ಕೊಡಿ.‌ ಉಚಿತ ಕೊಡುತ್ತೇವೆ ಎಂದಾಕ್ಷಣ ಜನ ನಂಬಿದ್ದರು ಎಂದು ಕಿಡಿಕಾರಿದರು.

ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದೀರಿ, ಲೋಕಸಭೆ ಚುನಾವಣೆಯಲ್ಲಿ ನಿಮಗೆ ಜನ ಪಾಠ ಕಲಿಸುತ್ತಾರೆ. ಯಾವ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಅನೇಕರು ಐದು ವರ್ಷ ಇರುತ್ತದೋ ಇಲ್ವಾ ಎನ್ನುವ ಅನುಮಾನ ವ್ಯಕ್ತಪಡಿಸುತ್ತಾರೆ. ಶಕ್ತಿ ಯೋಜನೆ ಜಾರಿಯಿಂದ ಆಟೋ ಚಾಲಕರ ಹೊಟ್ಟೆಗೆ ತಣ್ಣೀರು ಬಟ್ಟೆ ಬಿದ್ದಿದೆ. ಖಾಸಗಿ ಬಸ್‌ನಲ್ಲೂ ಫ್ರೀ ಮಾಡಿ, ಅವರಿಗು ಹಣ ಕೊಡಿ ಎಂದು ಹೇಳಿದರು.

K S Eshwarappa slams Congress over gaurantees, says did modi promise you of giving rice, people are suffering, they will teach you lessons he added.