Hassan Death: ಹಾಸನ ; ಉದ್ಯೋಗ ಅರಸಿ ಬಂದಿದ್ದ ಉತ್ತರ ಭಾರತದ ಇಬ್ಬರು ಯುವಕರು ಮಲಗಿದಲ್ಲಿಯೇ ಸಾವು ! 

15-07-23 04:29 pm       HK News Desk   ಕರ್ನಾಟಕ

ಉತ್ತರ ಭಾರತದ ಕಾರ್ಮಿಕರಿಬ್ಬರು ಮಲಗಿದಲ್ಲಿಯೇ ನಿಗೂಢ ರೀತಿಯಲ್ಲಿ ಪ್ರಾಣಬಿಟ್ಟ ಘಟನೆ ಹಾಸನ ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ನಡೆದಿದೆ. 

ಹಾಸನ, ಜುಲೈ 15: ಉತ್ತರ ಭಾರತದ ಕಾರ್ಮಿಕರಿಬ್ಬರು ಮಲಗಿದಲ್ಲಿಯೇ ನಿಗೂಢ ರೀತಿಯಲ್ಲಿ ಪ್ರಾಣಬಿಟ್ಟ ಘಟನೆ ಹಾಸನ ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ನಡೆದಿದೆ. 

ಕೊಠಡಿಯಲ್ಲಿ ಮಲಗಿದ್ದ ಸ್ಥಳದಲ್ಲೇ ಇಬ್ಬರು ಯುವಕರು ಸಾವು ಕಂಡಿದ್ದಾರೆ. ಉದ್ಯೋಗ ಅರಸಿ ಉತ್ತರ ಪ್ರದೇಶದಿಂದ ಬಂದಿದ್ದ ನಬಾಬ್ (24) ಮತ್ತು ರಾಮ್‌ಸಂಜೀವನ್ (30) ಎಂಬವರು ಮೃತರು. ಉತ್ತರ ಪ್ರದೇಶದ ನಯನಪುರ್ ಗ್ರಾಮದ ಯುವಕರು ಕೆಲಸ ಅರಸಿ ಹಾಸನಕ್ಕೆ ಬಂದಿದ್ದು ಎರಡು ದಿನ ಕೆಲಸ ಮಾಡಿ ಜ್ವರದಿಂದ ಬಳಲಿ ಕೆಲಸಕ್ಕೆ ರಜೆ ಮಾಡಿದ್ದರು. ಆಸ್ಪತ್ರೆಗೆ ಹೋಗಿ ಬಂದು ಔಷಧಿ ಸೇವಿಸಿ ಮಲಗಿದ್ದವರು ನಿಗೂಢ ಸಾವನ್ನಪ್ಪಿದ್ದಾರೆ. 

ಹನುಮಂತಪುರ ಗ್ರಾಮದ ಮಹೇಶ್ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ರೂಂ ಪಡೆದು ಯುವಕರು ವಾಸವಿದ್ದರು. ಬುಧವಾರ ರಾತ್ರಿ ಊಟ ಮುಗಿಸಿ ರೂಮಿನಲ್ಲಿ ಮಲಗಿದ್ದ‌ ಇಬ್ಬರು ಯುವಕರು, ಶುಕ್ರವಾರದ ವರೆಗೂ ಕೊಠಡಿ ಬಾಗಿಲು ತೆರೆದಿರಲಿಲ್ಲ. ಹಾಗಾಗಿ ಬಾಗಿಲು ಒಡೆದು ಮನೆಯ ಮಾಲೀಕ ಪರಿಶೀಲನೆ ನಡೆಸಿದ್ದು ಯುವಕರು ತಾವು ಮಲಗಿದ‌್ದ ಜಾಗದಲ್ಲಿಯೇ ಸಾವನ್ನಪ್ಪಿದ್ದು ಪತ್ತೆಯಾಗಿದೆ. ಇಬ್ಬರ ಮೂಗಿನಲ್ಲು ರಕ್ತ ಬಂದಿದ್ದು ಒಂದೇ ರೀತಿಯ ಸಾವಿಗೇನು ಕಾರಣ ಎಂದು ಪರಿಶೀಲನೆ ಆಗಬೇಕಷ್ಟೆ. 

ಕೊಳೆಯಲಾರಂಭಿಸಿದ್ದ ಮೃತದೇಹಗಳನ್ನು ಹಾಸನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಹಾಸನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Hassan two laboures from north found dead as sleeping.