ಜೆಡಿಎಸ್- ಬಿಜೆಪಿ ಮೈತ್ರಿ ಖತಂ ; ಅಂತಹ 'ದಾರಿದ್ರ್ಯ' ನಮಗೆ ಬಂದಿಲ್ಲ ಎಂದ ಎಚ್ಡಿ ಕುಮಾರಸ್ವಾಮಿ, ದೊಡ್ಡ ಗೌಡ್ರ ನಿಲುವಿಗೆ ಬಂದ ಕುಮಾರಣ್ಣ..! 

05-08-23 09:06 pm       Bangalore Correspondent   ಕರ್ನಾಟಕ

ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಆಗಲಿದೆ ಎನ್ನುವ ಭಾರೀ ವದಂತಿ ಹಬ್ಬಿತ್ತು. ಆದರೆ ಈಗ ಅಂತಹ ವದಂತಿಗೆ ತೆರೆ ಎಳೆಯುವ ಪ್ರಯತ್ನಗಳನ್ನು ಎರಡೂ ಪಕ್ಷಗಳ ನಾಯಕರು ಮಾಡುತ್ತಿದ್ದಾರೆ.

ಬೆಂಗಳೂರು, ಆಗಸ್ಟ್ 5: ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಆಗಲಿದೆ ಎನ್ನುವ ಭಾರೀ ವದಂತಿ ಹಬ್ಬಿತ್ತು. ಆದರೆ ಈಗ ಅಂತಹ ವದಂತಿಗೆ ತೆರೆ ಎಳೆಯುವ ಪ್ರಯತ್ನಗಳನ್ನು ಎರಡೂ ಪಕ್ಷಗಳ ನಾಯಕರು ಮಾಡುತ್ತಿದ್ದಾರೆ. ಈ ಕುರಿತು ಮಾಜಿ ಸಚಿವ ಸುನಿಲ್ ಕುಮಾರ್ ಮಾಡಿದ್ದ ಟೀಕೆಗೆ, ಬಿಜೆಪಿ ಜೊತೆ ಹೋಗುವ ದಾರಿದ್ರ್ಯ ನಮಗೂ ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಡ್ಡಿ ಮುರಿದಂತೆ ಹೇಳಿದ್ದಾರೆ. 

ಬಿಜೆಪಿ ಜೊತೆಗಿನ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ `ದಾರಿದ್ರ್ಯ’ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಸುನೀಲ್ ಕುಮಾರ್ ಹೇಳೀಕೆಗೆ ಪ್ರತಿಕ್ರಿಯಿಸಿದ ಅವರು, ಸದನದಲ್ಲಿ ಅವರು ಅಧಿಕೃತ ವಿರೋಧ ಪಕ್ಷ. ಅಲ್ಲಿ ಮಾತ್ರ ಕೈ ಜೋಡಿಸಿದ್ದೇವೆ. ಕಾರ್ಯಕರ್ತರಿಗೆ ನಾಡಿನ ಜನರಿಗೆ ಹೇಳೋಕೆ ಬಯಸುತ್ತೇನೆ. ನಮ್ಮ ಪಕ್ಷ ಅವರ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ಭಿಕ್ಷೆ ಬೇಡಿಕೊಂಡು ನಮ್ಮ ಪಕ್ಷ ಯಾರ ಹಿಂದೆನೂ ಹೋಗಲ್ಲ. ರಾಜ್ಯಕ್ಕೆ ಕಾಂಗ್ರೆಸ್ ನಿಂದ ಎಷ್ಟು ಹಾನಿ ಆಗಿದೆಯೋ ಬಿಜೆಪಿಯಿಂದಲೂ ಅಷ್ಟೇ ಆಗಿದೆ ಎಂದರು. 

BJP is 'people-centric' unlike Congress being 'person-centric': Minister Sunil  Kumar | udayavani

ನಿಮ್ಮ ಮೈತ್ರಿ ಕತೆ ಏನಾಯ್ತು ಎಂಬ ಪ್ರಶ್ನೆಗೆ ಉತ್ತರಿಸಿದ್ದ ಸುನಿಲ್ ಕುಮಾರ್, ಜೆಡಿಎಸ್ ಜೊತೆಗೆ ಮೈತ್ರಿ ಕೇವಲ ಊಹಾಪೋಹ. ಬಿಜೆಪಿ ನೇತೃತ್ವದ ಎನ್‍ಡಿಎ ಸಭೆಗೆ ಜೆಡಿಎಸ್ ಪಕ್ಷವನ್ನು ಆಹ್ವಾನಿಸಿರಲಿಲ್ಲ. ಅಂತಹ ಚರ್ಚೆ ನಮ್ಮ ಪಕ್ಷದಲ್ಲಿ ಆಗಿಯೂ ಇಲ್ಲ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಅನಿವಾರ್ಯತೆ ಬಿಜೆಪಿಗೇನೂ ಕಾಣುತ್ತಿಲ್ಲ ಎಂದು ಹೇಳಿದ್ದರು. 

ಎಚ್.ಡಿ ಕುಮಾರಸ್ವಾಮಿ ಬಿಜೆಪಿ ಜೊತೆಗೆ ಸೇರುವುದಕ್ಕೆ ಮಾತುಕತೆ ಆಗಿತ್ತು ಎನ್ನಲಾಗಿತ್ತು. ಒಂದು ತಿಂಗಳ ಹಿಂದೆ ಕುಮಾರಸ್ವಾಮಿ ಅವರೇ ಅಧಿಕೃತ ಪ್ರತಿಪಕ್ಷ ನಾಯಕ ಎನ್ನುವಷ್ಟರ ಮಟ್ಟಿಗೆ ಸುದ್ದಿ ಹರಿದಾಡಿತ್ತು. ಆದರೆ ಬಿಜೆಪಿ ಜೊತೆ ಸೇರಲು ಪಕ್ಷದ ಕೆಲವು ಶಾಸಕರೇ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ದೇವೇಗೌಡರಿಗೆ ದೂರನ್ನೂ ಹೇಳಿಕೊಂಡಿದ್ದರು. ಗೌಡರು ಮೊದಲಿನಿಂದಲೂ ರಾಷ್ಟ್ರೀಯ ಪಕ್ಷದ ಜೊತೆಗೆ ವಿಲೀನ ಅಥವಾ ಮೈತ್ರಿಯಿಂದ ಪ್ರಾದೇಶಿಕ ಪಕ್ಷಕ್ಕೇ ತೊಂದರೆ ಎನ್ನುವ ನಿಲುವು ಹೊಂದಿದ್ದರು. ಇತ್ತೀಚೆಗೆ ದೊಡ್ಡ ಗೌಡರು ಸುದ್ದಿಗೋಷ್ಟಿ ಕರೆದು ಯಾವುದೇ ಮೈತ್ರಿಕೂಟದ ಜೊತೆಗೂ ನಾವು ಸೇರೋದಿಲ್ಲ ಎಂದು ಹೇಳಿದ್ದರು. ಜೆಡಿಎಸ್ ನಾಯಕರು ಬಿಜೆಪಿ ಜೊತೆ ಸೇರಿದ್ದರಿಂದ ಕಾಂಗ್ರೆಸ್ ನೇತೃತ್ವದಲ್ಲಿ ಬೆಂಗಳೂರಿನಲ್ಲೇ ಮಹಾಮೈತ್ರಿ ಕೂಟದ ಸಭೆ ನಡೆದಿದ್ದರೂ, ಜೆಡಿಎಸ್ ಗೆ ಆಹ್ವಾನ ನೀಡಿರಲಿಲ್ಲ. ಇದಕ್ಕೆ ಸಿಎಂ ಸಿದ್ದರಾಮಯ್ಯ ಬಿಗಿ ನಿಲುವು ಕೂಡ ಕಾರಣವಾಗಿತ್ತು. ಆನಂತರ ವಿದೇಶ ಯಾತ್ರೆ ಹೋಗಿ ಮರಳಿ ಬಂದ ಕುಮಾರಸ್ವಾಮಿ ಮೈತ್ರಿ ಬಗ್ಗೆ ನಕಾರಾತ್ಮಕ ಹೇಳಿಕೆ ನೀಡಿದ್ದಾರೆ. ‌ಅಲ್ಲದೆ, ಎರಡೂ ಮೈತ್ರಿಕೂಟದಿಂದ ದೂರ ನಿಲ್ಲುವ ಮಾತನ್ನಾಡಿದ್ದಾರೆ.

There were rumours that the BJP-JD(S) alliance will be formed in the state. But now leaders of both the parties are making efforts to put an end to such rumours. Reacting to former minister Sunil Kumar's remarks, former chief minister HD Kumaraswamy said, "We don't have the poverty to go with the BJP.