ಅಪಹರಣದ ನಾಟಕವಾಡಿ ಹೆತ್ತವರನ್ನೇ ಬೇಸ್ತು ಬೀಳಿಸಿದ ಬಾಲಕ

08-11-20 01:22 pm       Headline Karnataka News Network   ಕರ್ನಾಟಕ

ಹಣಕ್ಕಾಗಿ ಅಪಹರಣದ ನಾಟಕ ಮಾಡಿ ತನ್ನ ಹೆತ್ತವರನ್ನೇ ಬಾಲಕ ಬೇಸ್ತು ಬೀಳಿಸಿರುವ ಘಟನೆ ರಾಮನಗರ ಜಿಲ್ಲೆ ಕನಕಪುರದಲ್ಲಿ ನಡೆದಿದೆ.

ರಾಮನಗರ, ನವೆಂಬರ್ 8: ಸದಾ ಓದು ಎನ್ನುವ ಪೋಷಕರ ಕಾಟ ತಪ್ಪಿಸಿಕೊಳ್ಳಲು ಹಾಗೂ ಹಣಕ್ಕಾಗಿ ಅಪಹರಣದ ನಾಟಕ ಮಾಡಿ ತನ್ನ ಹೆತ್ತವರನ್ನೇ ಬಾಲಕ ಬೇಸ್ತು ಬೀಳಿಸಿರುವ ಘಟನೆ ರಾಮನಗರ ಜಿಲ್ಲೆ ಕನಕಪುರದಲ್ಲಿ ನಡೆದಿದೆ.

ತಮಿಳುನಾಡು ಮೂಲದ ಬಟ್ಟೆ ಅಂಗಡಿ ಮಾಲೀಕ ಮನೋಹರ್ ಎಂಬುವವರ ಪುತ್ರ ಸರ್ವೇಶ್ (16) ಕಳೆದ ಶುಕ್ರವಾರ ಸೈಬರ್ ಸೆಂಟರ್ಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ. ರಾತ್ರಿಯಾದರೂ ಮನೆಗೆ ವಾಪಸ್ಸು ಬಾರದ ಕಾರಣ ಆತಂಕಗೊಂಡ ಪೋಷಕರು, ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ನಡುವೆ ಬಾಲಕನ ಪಕ್ಕದ ಮನೆಯವರ ಮೊಬೈಲಿಗೆ ಹುಡುಗನನ್ನು ಶೌಚಾಲಯದಲ್ಲಿ ಕೈ-ಕಾಲು ಕಟ್ಟಿ ಹಾಕಿರೋ ಸ್ಥಿತಿಯಲ್ಲಿರುವ ಫೋಟೋವನ್ನು ರವಾನಿಸಿ, 5 ಲಕ್ಷ ರುಪಾಯಿಗೆ ಅಪಹರಣಕಾರರು ಬೇಡಿಕೆಯಿಟ್ಟಿದ್ದರು. ನಂತರ ಬಾಲಕನ ಫೋಟೋ ವೈರಲ್ ಆಗಿದ್ದರಿಂದ ಜನರು ಆತಂಕಕ್ಕೆ ಒಳಗಾಗಿದ್ದರು.

ಪ್ರಕರಣ ಬೆನ್ನತ್ತಿದ ಪೊಲೀಸರು, ಬಾಲಕನ್ನು ತಿರುಪತಿ ಬಳಿ ಲಾಡ್ಜ್ ನಲ್ಲಿ ಪತ್ತೆ ಹಚ್ಚಿದ್ದಾರೆ. ಪೋಷಕರನ್ನು ಬೆದರಿಸಲು ಬಾಲಕನೇ ಅಪಹರಣದ ನಾಟಕವಾಡಿದ್ದಾನೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್, ಬಾಲಕ ಪೋಷಕರಿಂದ ಹಣ ಕೀಳಲು ಹಾಗೂ ಓದು ಎಂದು ಒತ್ತಾಯ ಮಾಡುವುದರಿಂದ ತಪ್ಪಿಸಿಕೊಳ್ಳಲು ಸ್ವಯಂ ಅಪಹರಣದ ನಾಟಕ ಸೃಷ್ಟಿಸಿದ್ದಾನೆ ಎಂದು ತಿಳಿಸಿದ್ದಾರೆ. ಬಾಲಕನನ್ನು ತಿರುಪತಿಯಿಂದ ಕರೆತಂದು ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರೆದಿದೆ. ಇನ್ನು ಬಾಲಕನಿಗೆ ಅಪಹರಣ ಎಂದು ಬಿಂಬಿಸಲು ಯಾರೆಲ್ಲ ಸಹಾಯ ಮಾಡಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ.

A boy was allegedly involved in a drama of kidnapping for the sake of getting money from his parents. The incident took place in Kanakapura, Ramanagara district.