Bangalore Nelamangala serial Accident, Sri Durgamba Travels: ನೆಲಮಂಗಲದಲ್ಲಿ ಸರಣಿ ಅಪಘಾತ, 30 ಜನರಿಗೆ ಗಾಯ ; ಶ್ರೀ ದುರ್ಗಾಂಬಾ, ಶಿವಗಂಗಾ, ದ್ಯಾನ್ ಖಾಸಗಿ ಬಸ್ಸುಗಳು ಪೀಸ್ ಪೀಸ್, ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್

27-12-23 03:50 pm       HK News Desk   ಕರ್ನಾಟಕ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ತೋಣಚಿನ ಕುಪ್ಪೆ ಬಳಿ ಸರಣಿ ಅಪಘಾತ ಸಂಭವಿಸಿದೆ. ನಿಂತಿದ್ದ ಲಾರಿಗೆ ಮೂರು ಖಾಸಗಿ ಬಸ್ ಡಿಕ್ಕಿ ಹೊಡೆದಿವೆ.

ನೆಲಮಂಗಲ, ಡಿ 27: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ತೋಣಚಿನ ಕುಪ್ಪೆ ಬಳಿ ಸರಣಿ ಅಪಘಾತ ಸಂಭವಿಸಿದೆ. ನಿಂತಿದ್ದ ಲಾರಿಗೆ ಮೂರು ಖಾಸಗಿ ಬಸ್ ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಬಸ್​ನಲ್ಲಿದ್ದ 30 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಖಾಸಗಿ ಅಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸರಣಿ ಅಪಘಾತದಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದುರ್ಗಾಂಬಾ, ಶಿವಗಂಗಾ, ದ್ಯಾನ್ ಹೆಸರಿನ ಖಾಸಗಿ ಬಸ್ಸುಗಳು ತುಮಕೂರು ಮಾರ್ಗವಾಗಿ ಬೆಂಗಳೂರು ಬರುತ್ತಿದ್ದ ವೇಳೆ  ಅಪಘಾತ ಸಂಭವಿಸಿದೆ. ಲಾರಿಗೆ ಮೊದಲು ದ್ಯಾನ್ ಬಸ್ ಡಿಕ್ಕಿ ಹೊಡೆದಿದೆ. ದ್ಯಾನ್​ ಬಸ್​ ಹಿಂದೆಯೇ ಶ್ರೀ ದುರ್ಗಾಂಬಾ ಬಸ್ ಬರುತ್ತಿತ್ತು. ಈ ಅಪಘಾತವನ್ನು ಕಂಡ ದುರ್ಗಾಂಬಾ ಬಸ್​ ಚಾಲಕ ಬಸ್​​ ಅನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದರು. ಆದರೆ ಹಿಂದೆ ಬರುತ್ತಿದ್ದ ಶಿವಗಂಗಾ ಬಸ್ ಡಿಕ್ಕಿ ಹೊಡೆದಿದೆ.

ಈ ಸರಣಿ ಅಪಘಾತದಲ್ಲಿ ಗಾಯಗೊಂಡ ಜನರನ್ನು ಏಳು ಆಂಬ್ಯುಲೆನ್ಸ್​​ಗಳ ಮುಖಾಂತರ ಅಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಬಳಿಕ ಬಸ್​ಗಳನ್ನು ಕ್ರೈನ್ ಬಳಸಿ ತೆರವು ಮಾಡಲಾಗಿದೆ.

Bangalore Nelamangala serial Accident, Sri Durgamba and two others private buses damaged, 30 passengers  injured.