Mangalore Gerosa school controversy, MLA Bharath Shetty: ಅಧಿವೇಶನದಲ್ಲಿ ಜೆರೊಸಾ ಶಾಲೆಯ ವಿವಾದ ಕುರಿತು ಗದ್ದಲ ; ಭರತ್ ಶೆಟ್ಟಿ ಸ್ಥಳದಲ್ಲಿ ಇರಲಿಲ್ಲ ಎಂದು ಒಪ್ಪಿಕೊಂಡ ಗೃಹ ಸಚಿವ, ಶಿಕ್ಷಕಿ ಮೇಲೆ ಯಾಕಿಲ್ಲ ಎಫ್ಐಆರ್ ಎಂದು ಬಿಜೆಪಿ ನಾಯಕರ ಪ್ರಶ್ನೆ, ತನಿಖೆ ಬಳಿಕ ಕ್ರಮ ಎಂದು‌ ಸಚಿವ ಗುಂಡೂರಾವ್ 

15-02-24 09:45 pm       Bangalore Correspondent   ಕರ್ನಾಟಕ

ಮಂಗಳೂರಿನ ಜೆರೋಸಾ ಶಾಲೆಯ ವಿವಾದ ಅಧಿವೇಶನದಲ್ಲಿ ಪ್ರಸ್ತಾಪವಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲೇ ಇಲ್ಲದ ಶಾಸಕ ಭರತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಕ್ಕಾಗಿ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಫೆ.15: ಮಂಗಳೂರಿನ ಜೆರೋಸಾ ಶಾಲೆಯ ವಿವಾದ ಅಧಿವೇಶನದಲ್ಲಿ ಪ್ರಸ್ತಾಪವಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲೇ ಇಲ್ಲದ ಶಾಸಕ ಭರತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಕ್ಕಾಗಿ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಬಿಜೆಪಿ ನಾಯಕರ ಪ್ರಶ್ನೆಗೆ ಉತ್ತರ ನೀಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಘಟನಾ ಸಂದರ್ಭದಲ್ಲಿ ಶಾಸಕ ಭರತ್ ಶೆಟ್ಟಿ ಸ್ಥಳದಲ್ಲಿ ಇರಲಿಲ್ಲ ಎಂಬುದನ್ನು ಒಪ್ಪಿಕೊಂಡರು. ಪೊಲೀಸ್ ಮೂಲಗಳಿಂದ ಭರತ್ ಶೆಟ್ಟಿ ಇರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ.  ತನಿಖೆ ಮಾಡುತ್ತೇವೆ. ಆದರೆ ಡಿಡಿಪಿಐ ಕಚೇರಿಗೆ ಹೋಗಿ ಹಿಂದೂ ಮಕ್ಕಳನ್ನು ಕ್ರೈಸ್ತ ಶಾಲೆಗೆ ಸೇರಿಸಬೇಡಿ ಎಂದು ಹೇಳಿದ್ದಾರೆ. ಇದು ಕೋಮು ದ್ವೇಷದ ಹೇಳಿಕೆ ಅಲ್ಲವೇ ಎಂದು ಪ್ರಶ್ನಿಸಿದರು.‌

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ನಾಯಕರು ಭರತ್ ಶೆಟ್ಟಿ ಸ್ಥಳದಲ್ಲಿ ಇಲ್ಲದೇ ಇದ್ದರೂ ಅವರ ವಿರುದ್ಧ ಎಫ್ಐಆರ್ ಮಾಡಿದ್ದು ಏಕೆ? ಹಾಗೆ ಎಫ್ ಐ ಆರ್ ದಾಖಲು ಮಾಡಿರುವ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿ ಎಂದು ಆಗ್ರಹಿಸಿದರು. ಶಾಲೆಯ ಮಕ್ಕಳ ಮುಂದೆ ಪ್ರಧಾನಿ ಬಗ್ಗೆ ಅವಹೇಳನ ಮಾತನಾಡಲು‌ ಅವರು ಯಾರು? ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದರೂ ಏಕೆ ಎಫ್ ಐ ಆರ್ ಮಾಡಿಲ್ಲ? ಎಂದು‌ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. 

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಪೋಲಿಸರು ತಮ್ಮ ಕರ್ತವ್ಯದಲ್ಲಿ ತಾರತಮ್ಯ ಮಾಡಿದ್ದಾರೆ. ಶಿಕ್ಷಕರ ಮೇಲೆ ದೂರು ಬಂದಾಗ ಯಾಕೆ ಎಫ್ಐಆರ್ ಮಾಡಿಲ್ಲ. ತಪ್ಪನ್ನು ಪ್ರಶ್ನೆ ಮಾಡಿದರೆ ಅವರ ಮೇಲೆ ಕೇಸು ದಾಖಲು ಮಾಡಿದ್ದೀರಿ. ಪೋಷಕರು ಕೊಟ್ಟ ದೂರು ಎಫ್ಐಆರ್ ಆಗಬೇಕು. ಹಿಂದು ದೇವರ ಅವಹೇಳನ ಮಾಡಿದ ಶಿಕ್ಷಕಿಯನ್ನು ರಕ್ಷಣೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ತನಿಖೆ ಮಾಡುತ್ತಿರುವಾಗಲೇ ಡಿಡಿಪಿಐ ಅವರನ್ನು ವರ್ಗಾವಣೆ ಮಾಡಿದ್ದೇಕೆ. ಇದು ಪ್ರಕರಣ ಮುಚ್ಚಿ ಹಾಕುವ ಯತ್ನ ಎಂದು ಭರತ್ ಶೆಟ್ಟಿ ಹೇಳಿದರು. 

ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿ, ಡಿಡಿಪಿಐ ಈ ವಿಚಾರವಾಗಿ ವರ್ಗಾವಣೆ ಆಗಿಲ್ಲ. ಅವರನ್ನು ವರ್ಗಾವಣೆ ಬೇರೆ ಕಾರಣಕ್ಕಾಗಿ ಮಾಡಲಾಗಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಘಟನೆಯ ಸತ್ಯಾಸತ್ಯತೆ ತನಿಖೆ ನಡೆಯುತ್ತಿದೆ. ಶಿಕ್ಷಕಿ ಹಾಗೆ ಹೇಳಿದ್ದಾರೋ ಇಲ್ಲವೋ ಎಂದು ಸಾಬೀತು ಆಗಿಲ್ಲ. ಒತ್ತಡದಿಂದ ಶಾಲೆ ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಂಡಿದ್ದಾರೆ. ತನಿಖೆಯ ಬಳಿಕ ಕ್ರಮ ಆಗುತ್ತದೆ ಎಂದರು. ಇದಲ್ಲದೆ, ಶಾಸಕ ಭರತ್ ಶೆಟ್ಟಿ ಕ್ರಿಸ್ತಿಯನ್ ಶಾಲೆ ಬಹಿಷ್ಕರಿಸಬೇಕು ಎಂದು ನೀಡಿದ್ದ ಹೇಳಿಕೆಯನ್ನು ಗೃಹ ಸಚಿವ ಓದಿ ಹೇಳಿದಾಗ, ಮತ್ತೆ ಗದ್ದಲ ನಡೆಯಿತು. ಬಿಜೆಪಿ ಸದಸ್ಯರು ವಿರೋಧಿಸಿದರೆ, ಭರತ್ ಶೆಟ್ಟಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡರು.

Mangalore Gerosa school controversy highlighted in Assembly, BJP questions why no FIR on Sister Prabha. Home Minister clarifies that MLA Bharath Shetty was not present at the school but won't agree the statement made by MLA saying that Hindu should not go to Christian School.