Cm Siddaramaiah, Lokayukta: ಸಿಎಂ ಸಿದ್ದರಾಮಯ್ಯಗೆ ಮತ್ತೆ ಸಂಕಷ್ಟ ; ಕಿಕ್ ಬ್ಯಾಕ್ ಆರೋಪದಲ್ಲಿ ಲೋಕಾಯುಕ್ತ ಬಿ ರಿಪೋರ್ಟ್ ರದ್ದು, ಮರು ತನಿಖೆಗೆ ಕೋರ್ಟ್ ಆದೇಶ, ಚುನಾವಣೆ ಹೊತ್ತಲ್ಲಿ ವಿಪಕ್ಷಗಳಿಗೆ ಅಸ್ತ್ರ ! 

23-02-24 01:26 pm       Bangalore Correspondent   ಕರ್ನಾಟಕ

ಲೋಕಸಭೆ ಚುನಾವಣೆಗೆ ತಯಾರಾಗುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಲಂಚದ ಆರೋಪ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬಿ ರಿಪೋರ್ಟ್ ಹಾಕಿದ್ದನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದು ಆರು ತಿಂಗಳ ಒಳಗೆ ಮರು ತನಿಖೆ ನಡೆಸಿ ವರದಿ ನೀಡುವಂತೆ ಮಹತ್ವದ ಆದೇಶ ನೀಡಿದೆ.

ಬೆಂಗಳೂರು, ಫೆ.23: ಲೋಕಸಭೆ ಚುನಾವಣೆಗೆ ತಯಾರಾಗುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಲಂಚದ ಆರೋಪ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬಿ ರಿಪೋರ್ಟ್ ಹಾಕಿದ್ದನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದು ಆರು ತಿಂಗಳ ಒಳಗೆ ಮರು ತನಿಖೆ ನಡೆಸಿ ವರದಿ ನೀಡುವಂತೆ ಮಹತ್ವದ ಆದೇಶ ನೀಡಿದೆ.

ಬಿಜೆಪಿ ಮುಖಂಡ, ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಎನ್. ಆರ್. ರಮೇಶ್ ಅವರು ದಾಖಲು ಮಾಡಿದ್ದ ಹುದ್ದೆಗಾಗಿ ಲಂಚದ ಆರೋಪ ಪ್ರಕರಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದರು. ಸಾಕ್ಷ್ಯಗಳ ಕೊರತೆ ಇದೆಯೆಂದು ಲೋಕಾಯುಕ್ತ ಅಧಿಕಾರಿಗಳು ಹಾಕಿದ್ದ ಬಿ ರಿಪೋರ್ಟ್ ಕೋರ್ಟಿನಲ್ಲಿ ತಿರಸ್ಕಾರಗೊಂಡಿದ್ದು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಿರುವಾಗಲೇ ರೀ ಓಪನ್ ಆಗಿದೆ. 

2014ರಲ್ಲಿ ಬೆಂಗಳೂರಿನ ಟರ್ಫ್ ಕ್ಲಬ್ ಸ್ಟೀವಾರ್ಡ್ ಹುದ್ದೆ ನೀಡಲು ವಿವೇಕಾನಂದ ಎಂಬವರಿಂದ ಚೆಕ್ ಮೂಲಕ 1.30 ಕೋಟಿ ರೂಪಾಯಿ ಲಂಚ ಪಡೆದ ಆರೋಪ ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ವಿರುದ್ಧ ಕೇಳಿಬಂದಿತ್ತು. ಈ ಬಗ್ಗೆ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್. ಆರ್. ರಮೇಶ್ ದೂರು ನೀಡಿದ್ದರು. ಹಣ ನೀಡಿದ್ದ ಬೆನ್ನಲ್ಲೇ ವಿವೇಕಾನಂದ ಟರ್ಫ್ ಕ್ಲಬ್ ಸ್ಟಿವಾರ್ಡ್ ಹುದ್ದೆಗೆ ನೇಮಕಗೊಂಡಿದ್ದರು. ಹೀಗಾಗಿ ಈ ಹಣ ಕಿಕ್ ಬ್ಯಾಕ್ ರೂಪದಲ್ಲಿ ಸಿದ್ದರಾಮಯ್ಯ ಪಡೆದಿದ್ದರು ಎಂದು ಆರೋಪಿಸಲಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ತರಾತುರಿಯಲ್ಲಿ ಅಂತಿಮ ವರದಿ ಸಲ್ಲಿಸಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಕಾನೂನು ಪ್ರಕಾರ ಮರು ತನಿಖೆ ನಡೆಸಿ ಮುಂದಿನ ಆರು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ಕೋರ್ಟ್ ಆದೇಶ ಮಾಡಿದೆ‌. 

ದೂರಿಗೆ ಸಂಬಂಧಿಸಿ ಲೋಕಾಯುಕ್ತ ನೋಟೀಸಿಗೆ 2023ರ ಜೂನ್ 4ರಂದು ಲಿಖಿತ ಉತ್ತರ ನೀಡಿದ್ದ ಸಿದ್ದರಾಮಯ್ಯ, ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರು. ತನಿಖಾಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಿದ್ದ ವಿವೇಕಾನಂದ, ನಿವೇಶನ ಖರೀದಿ ಸಲುವಾಗಿ ಸಿಎಂ ಸಿದ್ದರಾಮಯ್ಯ 1.30 ಕೋಟಿ ರೂ. ಚೆಕ್ ಪಡೆದಿದ್ದರು ಎಂದು ಹೇಳಿದ್ದರು. ಸರಕಾರ 2022ರಲ್ಲಿಯೂ ಟರ್ಫ್ ಕ್ಲಬ್ ಸ್ಟಿವಾರ್ಡ್ ಹುದ್ದೆಗೆ ನಾಮನಿರ್ದೇಶನ ಮಾಡಿತ್ತು ಎಂದೂ ತಿಳಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ವಿವೇಕಾನಂದ ಬಳಿ ಪಡೆದಿದ್ದ ಸಾಲದ ಬಗ್ಗೆ ಚುನಾವಣೆ ಅಫಿಡವಿಟ್ ಮತ್ತು ಲೋಕಾಯುಕ್ತಕ್ಕೆ ಸಲ್ಲಿಸಿದ ಉತ್ತರದಲ್ಲಿಯೂ ಉಲ್ಲೇಖಿಸಿದ್ದರು. ಆದರೆ ಚುನಾವಣೆ ಹೊತ್ತಲ್ಲಿ ಲಂಚದ ಆರೋಪದ ಪ್ರಕರಣ ಮುನ್ನೆಲೆಗೆ ಬಂದಿರುವುದು ವಿಪಕ್ಷಗಳಿಗೆ ರಾಜಕೀಯ ಅಸ್ತ್ರವಾಗುವ ಸಾಧ್ಯತೆಯಿದೆ.

Chief Minister Siddaramaiah, who is gearing up for the Lok Sabha elections, is facing a legal crisis. A special court for people's representatives rejected the 'B' report submitted by the Lokayukta officials in the bribery case during the previous Siddaramaiah government and directed it to re-investigate and submit a report within six months.