Nalin Kateel, Anantkumar Hegde, BJP list mp: ನಳಿನ್, ಅನಂತ್ ಹೆಗಡೆ ಸೇರಿ 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಕೊಕ್, ಕರ್ನಾಟಕದ 15 ಕ್ಷೇತ್ರಗಳ ಅಭ್ಯರ್ಥಿ ಲಿಸ್ಟ್ ಫೈನಲ್, ಒಂದೆರಡು ದಿನದಲ್ಲಿ ಬಿಜೆಪಿ 2ನೇ ಪಟ್ಟಿ ಬಿಡುಗಡೆ

07-03-24 12:17 pm       Bangalore Correspondent   ಕರ್ನಾಟಕ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕರ್ನಾಟಕದ 28 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ದೆಹಲಿಯಲ್ಲಿ ಕೇಂದ್ರ ವರಿಷ್ಠರು ರಾಜ್ಯ ಬಿಜೆಪಿ ಪ್ರಮುಖರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

ಬೆಂಗಳೂರು, ಮಾ.7: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕರ್ನಾಟಕದ 28 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ದೆಹಲಿಯಲ್ಲಿ ಕೇಂದ್ರ ವರಿಷ್ಠರು ರಾಜ್ಯ ಬಿಜೆಪಿ ಪ್ರಮುಖರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ. 15ರಿಂದ 18 ಕ್ಷೇತ್ರಗಳ ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಮಾ.8 ಅಥವಾ 9ರಂದು ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಬಿಜೆಪಿ ಉಮೇದುವಾರರ ಹೆಸರು ಪ್ರಕಟವಾಗಲಿದೆ.

ಬುಧವಾರ ಸಂಜೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಷಾ, ಸಂಘಟನಾ ಕಾರ್ಯದರ್ಶಿ ಸಂತೋಷ್ ಬಿ.ಎಲ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ್, ಕೋಟ ಶ್ರೀನಿವಾಸ ಪೂಜಾರಿ ಪಾಲ್ಗೊಂಡಿದ್ದರು. ಹಾಲಿ ಸಂಸದರಿಗೆ ಎಲ್ಲೆಲ್ಲಿ ಆಡಳಿತ ವಿರೋಧಿ ಅಲೆ ಇದೆ, ಅಲ್ಲಿಂದ ರಾಜ್ಯದಿಂದ ಸೂಚಿಸಲ್ಪಟ್ಟ ಅಭ್ಯರ್ಥಿಗಳು ಯಾರು, ಜೆಡಿಎಸ್- ಬಿಜೆಪಿ ಮೈತ್ರಿ ಇರುವುದರಿಂದ ಬಿಟ್ಟು ಕೊಡಬಹುದಾದ 3-4 ಕ್ಷೇತ್ರಗಳು ಯಾವುವು ಎಂಬ ಬಗ್ಗೆ ಚರ್ಚೆ ನಡೆದಿದೆ.

ಹುಬ್ಬಳ್ಳಿ –ಧಾರವಾಡ ಕ್ಷೇತ್ರದಿಂದ ಪ್ರಹ್ಲಾದ ಜೋಷಿ ಜೊತೆಗೆ ಜಗದೀಶ ಶೆಟ್ಟರ್ ಹೆಸರು ರಾಜ್ಯದಿಂದ ಶಿಫಾರಸು ಆಗಿದೆ. ಹಾವೇರಿ ಕ್ಷೇತ್ರದಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಜೊತೆಗೂ ಶೆಟ್ಟರ್ ಹೆಸರನ್ನು ಶಿಫಾರಸು ಮಾಡಲಾಗಿದೆ. ಬೆಳಗಾವಿ ಕ್ಷೇತ್ರದಿಂದ ಶೆಟ್ಟರ್ ಸೊಸೆ ಶ್ರದ್ಧಾ ಶೆಟ್ಟರ್ ಹೆಸರು ಶಿಫಾರಸುಗೊಂಡಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಸುಧಾಕರ್ ಜೊತೆಗೆ ಶಾಸಕ ಎಸ್.ಆರ್ ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಹೆಸರು ಪ್ರಸ್ತಾಪ ಆಗಿದೆ. ಯಡಿಯೂರಪ್ಪ ಒಲವು ಅಲೋಕ್ ಪರವಾಗಿದ್ದು ಅವರು ಟಿಕೆಟ್ ಪಡೆದರೂ ಅಚ್ಚರಿಯಿಲ್ಲ. ವಿಜಯಪುರ ಕ್ಷೇತ್ರದಿಂದ ಹಾಲಿ ಸಂಸದ ಜಿಗಜಿಣಗಿ ಜೊತೆಗೆ ಗೋವಿಂದ ಕಾರಜೋಳ ಹೆಸರು ಪ್ರಸ್ತಾಪಗೊಂಡಿದೆ.

ಬೆಂಗಳೂರು ಉತ್ತರದಿಂದ ಡಿವಿ ಸದಾನಂದ ಗೌಡ ಜೊತೆಗೆ ಸಿಟಿ ರವಿ ಹೆಸರು ಇದೆ. ಸದಾನಂದ ಗೌಡ ತಾನು ಚುನಾವಣೆ ನಿವೃತ್ತಿ ಪಡೆಯುತ್ತೇನೆ ಎಂದಿರುವುದರಿಂದ ಸಿಟಿ ರವಿಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ. ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾರ್ಯಕರ್ತರ ವಿರೋಧ ಇದ್ದರೂ, ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಹೆಸರನ್ನೇ ರಾಜ್ಯದಿಂದ ಶಿಫಾರಸು ಮಾಡಲಾಗಿದೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಜೊತೆಗೆ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಹೆಸರು ಇದೆ. ಅನಂತ ಕುಮಾರ್ ಬಗ್ಗೆ ರಾಜ್ಯ ಮತ್ತು ಕೇಂದ್ರ ನಾಯಕರು ಒಲವು ಹೊಂದಿಲ್ಲ. ಹೀಗಾಗಿ ಅಲ್ಲಿಯೂ ಬದಲಾವಣೆ ಖಚಿತ ಎನ್ನಲಾಗುತ್ತಿದೆ. ಕಾಗೇರಿ ಹಾಲಿ ಶಾಸಕರಾಗಿರುವುದರಿಂದ ಕೋಣೆಮನೆ ಹೆಸರೇ ಅಂತಿಮಗೊಳ್ಳುವ ಸಾಧ್ಯತೆಯಿದೆ.

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಿಂದಲೇ ಭಾರೀ ವಿರೋಧ ಎದುರಿಸುತ್ತಿರುವ ನಳಿನ್ ಕುಮಾರ್ ಕಟೀಲ್ ಹೆಸರಿನ ಜೊತೆಗೆ ಕ್ಯಾ.ಬೃಜೇಶ್ ಚೌಟ ಹೆಸರು ರಾಜ್ಯದಿಂದ ಶಿಫಾರಸುಗೊಂಡಿದೆ. ನಳಿನ್ ಕುಮಾರ್ ಅಭ್ಯರ್ಥಿಯಾದರೆ, ಅರುಣ್ ಪುತ್ತಿಲ ಬಂಡಾಯ ಸ್ಪರ್ಧೆಯ ಭೀತಿ ಇರುವುದು ಮತ್ತು ಕಾರ್ಯಕರ್ತರು ನೋಟಾ ಅಭಿಯಾನ ನಡೆಸುತ್ತಿರುವುದರಿಂದ ಈ ಬಾರಿ ಬದಲಾವಣೆ ಖಚಿತ ಎನ್ನಲಾಗುತ್ತಿದೆ. ಮೈಸೂರು ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರತಾಪಸಿಂಹ ಜೊತೆಗೆ ಮಡಿಕೇರಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಹೆಸರು ರಾಜ್ಯ ಬಿಜೆಪಿಯಿಂದ ಶಿಫಾರಸುಗೊಂಡಿದೆ. ತನ್ನ ಕೆಲಸದಿಂದಲೇ ಟಿಕೆಟ್ ಕೇಳುತ್ತಿರುವ ಪ್ರತಾಪಸಿಂಹ ಅಲ್ಲಿ ಮತ್ತೆ ಅಭ್ಯರ್ಥಿಯಾದರೆ ಅಚ್ಚರಿಯಿಲ್ಲ. ಆದರೆ ಜೆಡಿಎಸ್ ಕೂಡ ಮೈಸೂರು ಕ್ಷೇತ್ರದ ಟಿಕೆಟ್ ಕೇಳಿದ್ದು, ಪಕ್ಷದ ಚಿಹ್ನೆಯಿಂದಲೇ ಸ್ಪರ್ಧಿಸುವುದಾದರೆ ಓಕೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿರುವುದು ಕುತೂಹಲ ಮೂಡಿಸಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಹಾಲಿ ಸಂಸದ ತೇಜಸ್ವಿ ಸೂರ್ಯ ಹೆಸರು ಮಾತ್ರ ಶಿಫಾರಸು ಆಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಚರ್ಚೆಯಾಗಿದೆ.

ಉಳಿದಂತೆ, ಜೆಡಿಎಸ್ ಗೆ ಬಿಟ್ಟುಕೊಡುವ ಹಾಸನ, ತುಮಕೂರು, ಕೋಲಾರ, ಮಂಡ್ಯ ಕ್ಷೇತ್ರದ ಬಗ್ಗೆಯೂ ಚರ್ಚೆಯಾಗಿದೆ. ಮಂಡ್ಯದಲ್ಲಿ ಸುಮಲತಾಗೆ ಟಿಕೆಟ್ ಸಿಗದಿದ್ದರೆ, ಯಾವ ರೀತಿಯ ಪರಿಣಾಮ ಆದೀತು ಎನ್ನುವ ಬಗ್ಗೆಯೂ ಚರ್ಚೆಯಾಗಿದೆ. ತುಮಕೂರಿನಲ್ಲಿ ಸ್ಪರ್ಧೆಗೆ ಸೋಮಣ್ಣ ಲಾಬಿ ನಡೆಸಿರುವುದರಿಂದ ಅದು ಬಿಜೆಪಿಗೆ ಲಭಿಸಿದರೆ, ಮೈಸೂರಿನಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಸಾರಾ ಮಹೇಶ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ. ಎರಡನೇ ಪಟ್ಟಿಯಲ್ಲಿ ಕರ್ನಾಟಕದ 15ರಿಂದ 18 ಕ್ಷೇತ್ರಗಳ ಅಭ್ಯರ್ಥಿ ಹೆಸರು ಫೈನಲ್ ಆದಲ್ಲಿ ಗೊಂದಲ ಇರುವ ಮತ್ತು ಜೆಡಿಎಸ್ ಸ್ಪರ್ಧಿಸುವ ಕ್ಷೇತ್ರಗಳ ಹತ್ತು ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ತಡವಾಗಬಹುದು. ಒಟ್ಟಾರೆ ಹತ್ತರಿಂದ 12 ಕ್ಷೇತ್ರಗಳಲ್ಲಿ ಬಹುತೇಕ ಹೊಸ ಮುಖಗಳನ್ನು ಕಣಕ್ಕಿಳಿಸುವುದು ಖಚಿತವಾಗಿದೆ. ಬಿಜೆಪಿ ಹೈಕಮಾಂಡ್ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಎರಡು ಪ್ರತ್ಯೇಕ ಸರ್ವೆ ನಡೆಸಿದ್ದು, ಆಡಳಿತ ವಿರೋಧಿ ಅಲೆ ಇರುವ ಬಗ್ಗೆ ಮಾಹಿತಿ ಪಡೆದಿದ್ದಾರೆ.

Nalin Kateel and Anantkumar Hegde in the urge of losing Mp tickets, second list to be announced soon by BJP.