Eshwarappa son Kanthesh, Shivmogga: ಹಾವೇರಿಯಲ್ಲಿ ಈಶ್ವರಪ್ಪ ಪುತ್ರನಿಗೆ ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ ; ಸಚಿವ ಪ್ರಹ್ಲಾದ ಜೋಷಿಗೆ ಅಡ್ಡಹಾಕಿದ ಕಾರ್ಯಕರ್ತರು, ಈಶ್ವರಪ್ಪರನ್ನು ದೆಹಲಿಗೆ ಕರೆದೊಯ್ತೇನೆ ಎಂದ ಯಡಿಯೂರಪ್ಪ

10-03-24 05:32 pm       HK News Desk   ಕರ್ನಾಟಕ

ಹಾವೇರಿಯಲ್ಲಿ ಮಾಜಿ ಸಚಿವ ಈಶ್ವರಪ್ಪ ಪುತ್ರ ಕಾಂತೇಶ್ ಗೆ ಟಿಕೆಟ್ ನೀಡಲೇಬೇಕು ಎಂದು ಈಶ್ವರಪ್ಪ ಅಭಿಮಾನಿಗಳು ಮತ್ತು ಕುರುಬ ಸಮಾಜದ ಪ್ರಮುಖರು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮತ್ತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಒತ್ತಾಯ ಮಾಡಿದ್ದಾರೆ.

ಶಿವಮೊಗ್ಗ, ಮಾ.10: ಹಾವೇರಿಯಲ್ಲಿ ಮಾಜಿ ಸಚಿವ ಈಶ್ವರಪ್ಪ ಪುತ್ರ ಕಾಂತೇಶ್ ಗೆ ಟಿಕೆಟ್ ನೀಡಲೇಬೇಕು ಎಂದು ಈಶ್ವರಪ್ಪ ಅಭಿಮಾನಿಗಳು ಮತ್ತು ಕುರುಬ ಸಮಾಜದ ಪ್ರಮುಖರು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮತ್ತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಒತ್ತಾಯ ಮಾಡಿದ್ದಾರೆ.

ಹಾವೇರಿಯಲ್ಲಿ ಕೆ.ಇ. ಕಾಂತೇಶ್ ಟಿಕೆಟ್ ಸಿಗದೇ ಇದ್ದರೆ ಪಕ್ಷೇತರ ಸ್ಪರ್ಧಿಸಬೇಕು, ಶಿವಮೊಗ್ಗದಿಂದ ಈಶ್ವರಪ್ಪ ಪಕ್ಷೇತರ ಸ್ಪರ್ಧಿಸಿ ಬಿಸಿ ಮುಟ್ಟಿಸಬೇಕು ಎಂದು ಒತ್ತಾಯಿಸಿದ್ದಾರೆ. ಶಿವಮೊಗ್ಗದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಹ್ಲಾದ ಜೋಷಿ ಅವರನ್ನು ಅಡ್ಡಹಾಕಿದ ಕಾರ್ಯಕರ್ತರು ಟಿಕೆಟ್ ಕೊಡಿಸುವಂತೆ ಒತ್ತಾಯ ಮಾಡಿದ್ದಾರೆ. ಟಿಕೆಟ್ ಸಿಗದೇ ಇದ್ದರೆ ಎರಡೂ ಕಡೆ ಪಕ್ಷೇತರ ಸ್ಪರ್ಧೆ ಖಚಿತ ಎಂದು ಹೇಳಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿ ಶನಿವಾರ ರಾತ್ರಿ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಕಾಂತೇಶ್ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ಮತ್ತೊಮ್ಮೆ ದೆಹಲಿಗೆ ಹೋಗಿ ಪ್ರಯತ್ನ ಮಾಡುತ್ತೇನೆ. ಆದರೆ ಟಿಕೆಟ್ ಯಾರಿಗೆ ಕೊಡಬೇಕೆಂದು ಚುನಾವಣಾ ಸಮಿತಿ ನಿರ್ಧಾರ ಮಾಡುತ್ತದೆ ಎಂದಿದ್ದಾರೆ. ಭಾನುವಾರ ಬೆಳಗ್ಗೆ ಯಡಿಯೂರಪ್ಪ ನಿವಾಸಕ್ಕೆ ಈಶ್ವರಪ್ಪ ಅಭಿಮಾನಿಗಳು ತೆರಳಿದ್ದು ಟಿಕೆಟ್ ಕೊಡುವಂತೆ ಆಗ್ರಹ ಮಾಡಿದ್ದಾರೆ. ಈ ವೇಳೆ, ಅವರನ್ನು ಮನವೊಲಿಸಿದ ಯಡಿಯೂರಪ್ಪ, ದಯವಿಟ್ಟು ಈಶ್ವರಪ್ಪ ಅವರನ್ನು ನನ್ನ ಜೊತೆಗೆ ದೆಹಲಿಗೆ ಬರಲು ಹೇಳಿ. ಅಮಿತ್ ಷಾ ಜೊತೆಗೆ ಮಾತನಾಡಲು ಕರೆದುಕೊಂಡು ಹೋಗುತ್ತೇನೆ. ಟಿಕೆಟ್ ಕೊಡುವಂತೆ ಒತ್ತಾಯ ಮಾಡುತ್ತೇನೆ ಎಂದಿದ್ದಾರೆ.

ಶಿವಮೊಗ್ಗದಲ್ಲಿ ಈ ಬಗ್ಗೆ ಈಶ್ವರಪ್ಪ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ್ದು, ಯಡಿಯೂರಪ್ಪ ಅವರ ಸೂಚನೆಯಂತೆ ಹಾವೇರಿಯಲ್ಲಿ ಸಂಘಟನೆ ಮಾಡಿದ್ದೆವು. ಅವರು ಮಾತು ತಪ್ಪುವುದಿಲ್ಲ ಎಂಬ ವಿಶ್ವಾಸ ಇದೆ. ಅವರೊಬ್ಬರೇ ಬಿ ಫಾರಂಗೆ ಸಹಿ ಹಾಕೋಕೆ ಬರಲ್ಲ. ಅವರ ಮಾತಿಗೆ ಕೇಂದ್ರ ಚುನಾವಣಾ ಸಮಿತಿಯಲ್ಲಿ ಬೆಲೆ ಇದೆ ಎಂದಿದ್ದಾರೆ. ಪಕ್ಷೇತರ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ಕಾರ್ಯಕರ್ತರು ಆ ರೀತಿ ಹೇಳುತ್ತಿದ್ದಾರೆ. ಟಿಕೆಟ್ ತಪ್ಪಿದರೆ ನಾವು ಕುಳಿತು ಚರ್ಚೆ ಮಾಡುತ್ತೇವೆ. ಪಕ್ಷೇತರ ಸ್ಪರ್ಧಿಸೋದು ನಮ್ಮ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ. ಕೆ.ಇ.ಕಾಂತೇಶ್ ಪ್ರತಿಕ್ರಿಯಿಸಿ, ನಮಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸ ಇದೆ. ಈಗ ಸುಮ್ಮನೆ ಯಾರೋ ಸುದ್ದಿ ಹಬ್ಬಿಸುತ್ತಿದ್ದಾರೆ. ಪಕ್ಷೇತರ ಸ್ಪರ್ಧೆ ಅನ್ನುವುದು ಸುಳ್ಳು. ಆ ನಿಟ್ಟಿನಲ್ಲಿ ನಾವು ಆಲೋಚನೆ ಮಾಡಲ್ಲ ಎಂದರು.

Eshwarappa son Kanthesh should get a BJP ticket to contest from Haveri; members warn Pralhad Joshi and Yediyurappa, or else we will make him stand as an independent candidate.