Koppal Karadi Sanganna BJP: 'ಕರಡಿ'ಗೆ ಕೈತಪ್ಪಿದ ಟಿಕೆಟ್ ; ರುಚಿಗೆದ್ದ ಕಾರ್ಯಕರ್ತರು, ಬಿಜೆಪಿ ಕಚೇರಿ ನುಗ್ಗಿ ಗಾಜುಗಳು ಪುಡಿ ಪುಡಿ ಮಾಡಿದ ಬೆಂಬಲಿಗರು 

14-03-24 02:26 pm       HK News Desk   ಕರ್ನಾಟಕ

ಸಂಸದ ಸಂಗಣ್ಣ ಕರಡಿಗೆ ಬಿಜೆಪಿ ಟಿಕೆಟ್ ಕೈ ತಪ್ಪುತ್ತಿದ್ದಂತೆಯೇ ಅವರ ಬೆಂಬಲಿಗರ, ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಬೆಂಬಲಿಗರ ಸಿಟ್ಟಿಗೆ ಗುರುವಾರ ನಗರದ ಬಿಜೆಪಿ ಕಚೇರಿ ಗಾಜುಗಳು ಪುಡಿಯಾಗಿವೆ.

ಕೊಪ್ಪಳ, ಮಾ.14: ಸಂಸದ ಸಂಗಣ್ಣ ಕರಡಿಗೆ ಬಿಜೆಪಿ ಟಿಕೆಟ್ ಕೈ ತಪ್ಪುತ್ತಿದ್ದಂತೆಯೇ ಅವರ ಬೆಂಬಲಿಗರ, ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಬೆಂಬಲಿಗರ ಸಿಟ್ಟಿಗೆ ಗುರುವಾರ ನಗರದ ಬಿಜೆಪಿ ಕಚೇರಿ ಗಾಜುಗಳು ಪುಡಿಯಾಗಿವೆ.

ಅಲ್ಲದೆ, ಸಂಗಣ್ಣ ಕರಡಿ ಬೆಂಬಲಿಗರು ಬಿಜೆಪಿ ಕಚೇರಿಯಲ್ಲಿ ದಾಂಧಲೆ ನಡೆಸಿದ್ದು, ನೂತನ ಅಭ್ಯರ್ಥಿ ವೈದ್ಯ ಡಾ. ಬಸವರಾಜ ಕ್ಯಾವಟರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ವಿರುದ್ಧ ಘೋಷಣೆ ಕೂಗಿದರು.

ಇನ್ನು ಸುದ್ದಿಗೋಷ್ಠಿ ಮುಗಿಸಿ ಹೊರ ಬಂದ ಬಸವರಾಜ ಕ್ಯಾವಟರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್‌ರನ್ನು ತರಾಟೆಗೆ ತೆಗೆದುಕೊಂಡರು. ಒಂದು ಹಂತದಲ್ಲಿ ಪರಿಸ್ಥಿತಿ ಕೈ ಮಿರುವ ಹಂತಕ್ಕೆ ತಲುಪಿತ್ತು. ಕೊನೆಗೆ ಪೊಲೀಸರು ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಿದರು.

ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಕೆಲ ನಾಯಕರು ಕರಡಿ ಕುಟುಂಬವನ್ನು ತಮ್ಮ ಪಕ್ಷಕ್ಕೆ ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ. ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಡರಾತ್ರಿ ಸಂಗಣ್ಣ ಕರಡಿ ಅವರಿಗೆ ಫೋನ್ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಲೋಕಸಭೆ ಟಿಕೆಟ್ ನೀಡುವ ಭರವಸೆಯನ್ನು ಡಿಕೆ ಶಿವಕುಮಾರ್‌ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಸೇರುವ ಬಗ್ಗೆ ಚರ್ಚಿಸಿ ನಿರ್ಧಾರ ತಿಳಿಸುವೆ ಎಂದು ಸಂಗಣ್ಣ ಕರಡಿ ಹೇಳಿದ್ದಾರೆ.

ಇದರಿಂದ ಕರಡಿ ಸಂಗಣ್ಣ ಕುಟುಂಬದ ಮುಂದಿನ ನಡೆ ಕೂತೂಹಲ ಹುಟ್ಟಿಸಿದೆ. ಕಳೆದ ಎರಡು ಅವಧಿಯಿಂದ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಹಾಲಿ ಸಂಸದ ಕರಡಿ ಸಂಗಣ್ಣ ಈ ಬಾರಿ ಹ್ಯಾಟ್ರಿಕ್ ಜಯಭೇರಿ ಬಾರಿಸುವ ಕನವರಿಕೆಯಲ್ಲಿದ್ದಾರೆ. ಹೀಗಾಗಿ ಟಿಕೆಟ್‌ಗೆ ತೀವ್ರ ಪೈಪೋಟಿ ಒಡ್ಡಿದ್ದರು. ಅಲ್ಲದೆ, ಒಂದು ಹಂತದಲ್ಲಿ ಅವರಿಗೆ ಟಿಕೆಟ್ ಫೈನಲ್ ಆಗಿದೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆದರೆ ಇದೀಗ ಕೊಪ್ಪಳ ಬಿಜೆಪಿ ಟಿಕೆಟ್‌ ವೈದ್ಯ ಬಸವರಾಜ ಕ್ಯಾವಟರ್ ಪಾಲಾಗಿದೆ.

Koppal Karadi Sanganna BJP ticket missed, members enter BJP Office vandalise window glass