Davangere Panipuri death; ದಾವಣಗೆರೆ ; ರುಚಿ ರುಚಿಯಾದ ಪಾನಿಪುರಿ ತಿಂದು 19 ಮಕ್ಕಳು ಅಸ್ವಸ್ಥ , 6 ವರ್ಷದ ಬಾಲಕ ಸಾವು 

18-03-24 09:55 am       HK News Desk   ಕರ್ನಾಟಕ

ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥರಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ. ಹಜರತ್ ಬಿಲಾಲ್ (6) ಮೃತಪಟ್ಟ ಬಾಲಕ.

ದಾವಣಗೆರೆ, ಮಾ 18: ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥರಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ. ಹಜರತ್ ಬಿಲಾಲ್ (6) ಮೃತಪಟ್ಟ ಬಾಲಕ. ಹರಿಹರ ತಾಲೂಕಿನ ಮಲೇಬೆನ್ನೂರು ಪಟ್ಟಣದಲ್ಲಿ ಪಾನಿಪೂರಿ ತಿಂದು ಹಲವು ಮಕ್ಕಳು ಅನಾರೋಗ್ಯಕ್ಕೀಡಾಗಿದ್ದ ಘಟನೆ ಇತ್ತೀಚೆಗೆ ನಡೆದಿತ್ತು.

ಮಾರ್ಚ್ 15ರಂದು ತಳ್ಳುಗಾಡಿಯಲ್ಲಿ ಮಾರಾಟ ಮಾಡುತ್ತಿದ್ದ ಪಾನಿಪೂರಿ ಸೇವಿಸಿರುವ ಮಕ್ಕಳು ಅಸ್ವಸ್ಥಗೊಂಡಿದ್ದರು. ಬಾಲಕ ಬಿಲಾಲ್ಗೆ ತಡರಾತ್ರಿ ವಾಂತಿ, ಭೇದಿ, ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಪೋಷಕರು ಸಮೀಪದ ಮಲೇಬೆನ್ನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಮೂರು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಕೊನೆಯುಸಿರೆಳೆದಿದ್ದಾನೆ. ಇನ್ನೂ ನಾಲ್ವರು ಮಕ್ಕಳ ಪರಿಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಉಳಿದಂತೆ ಕೆಲವರು ಚೇತರಿಸಿಕೊಂಡಿದ್ದಾರೆ.

ಈ ಬಗ್ಗೆ ಮೃತ ಬಾಲಕನ ಅಜ್ಜ ಶೇರ್ ಅಲಿ ಮಾತನಾಡಿ, "ತಳ್ಳುವ ಗಾಡಿಯಲ್ಲಿ ಬರುವ ಪಾನಿಪೂರಿ ಸೇವಿಸಿ ನಮ್ಮ ಬಾಲಕ ಸಾವನ್ನಪ್ಪಿದ್ದಾನೆ. ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಫುಡ್ ಪಾಯಿಸನ್ ಆಗಿದೆ ಎಂದು ಹೇಳಿದ್ದಾರೆ. ಸಂಜೆ ಹೊತ್ತು ಮಲೇಬೆನ್ನೂರಿನ ಜಾಮೀಯಾ ಮಸೀದಿ ಬಳಿ ಪಾನಿಪೂರಿ ಸೇವಿಸಿ ಮಕ್ಕಳು ಅಸ್ವಸ್ಥರಾಗಿದ್ದರು. ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ" ಎಂದರು.

ಶುಚಿಯಿಲ್ಲದ ಆಹಾರಗಳನ್ನು ಮಕ್ಕಳಿಗೆ ತಿನ್ನಿಸಬೇಡಿ:

ಬಾಲಕನ ಚಿಕ್ಕಪ್ಪ ಇಮ್ರಾನ್ ಅಲಿ ಪ್ರತಿಕ್ರಿಯಿಸಿ, "ಬಾಲಕನನ್ನು ಬಹಳ ಸಲುಗೆಯಿಂದ ಬೆಳೆಸಿದ್ದೆವು. ಇಂದಿನ ದಿನಗಳಲ್ಲಿ ಹೊರಗಡೆ ದೊರೆಯುವ ಶುಚಿಯಿಲ್ಲದ ಯಾವುದೇ ಆಹಾರಗಳನ್ನು ಮಕ್ಕಳಿಗೆ ತಿನ್ನಿಸಬೇಡಿ. ಅವರಿಗೆ ಏನೇ ಬೇಕಿದ್ದರೂ ಮನೆಯಲ್ಲಿಯೇ ತಯಾರಿಸಿ ಕೊಡಿ" ಎಂದು ಹೇಳಿದರು.

ಕಳೆದ ಗುರುವಾರ ರಂಜಾನ್ ಉಪವಾಸ ಆಚರಿಸುತ್ತಿದ್ದ ಮಕ್ಕಳು, ಉಪವಾಸ ಮುಗಿಸಿ ಮಸೀದಿ ಬಳಿ ಪಾನಿಪೂರಿ ಸೇವಿಸಿದ್ದರು. ಇದಾದ ಕೆಲವೇ ಹೊತ್ತಲ್ಲಿ ಎಲ್ಲ ಮಕ್ಕಳಿಗೆ ದಿಢೀರ್ ವಾಂತಿ, ಭೇದಿ, ಹೊಟ್ಟೆ ನೋವು ಕಾಣಿಸಿಕೊಂಡಿತ್ತು.

In connection with the incident in which 19 children fell ill after consuming panipuri, a boy died on Saturday night. The deceased has been identified as Hazrat Bilal (6). Recently, several children fell ill after consuming panipuri in Malebennur town of Harihara taluk.