Bengaluru Rameshwaram Cafe blast: ರಾಮೇಶ್ವರಂ ಕೆಫೆ ಬಾಂಬರ್ ಯಾರೆಂದು ಪತ್ತೆ ; ಎಸೆದು ಹೋಗಿದ್ದ ಟೋಪಿ ನೀಡಿತ್ತು ಸುಳಿವು, ಕುಕ್ಕರ್ ಬಾಂಬರ್ ಶಾರೀಕ್ ಸಹವರ್ತಿ ಮುಸಾವಿರ್ ಹುಸೇನ್ ಕೆಫೆ ಬಾಂಬರ್ ! ಸ್ಫೋಟಕ್ಕೆ ಚೆನ್ನೈ ಟು ತೀರ್ಥಹಳ್ಳಿ ಲಿಂಕ್ !   

22-03-24 10:24 pm       Bangalore Correspondent   ಕರ್ನಾಟಕ

ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಿದ ಎನ್ಐಎ ಅಧಿಕಾರಿಗಳು ಬಾಂಬರ್ ಆರೋಪಿಯ ಬಗ್ಗೆ ಮಹತ್ವದ ಮಾಹಿತಿ ಕಲೆಹಾಕಿದ್ದಾರೆ.

ಬೆಂಗಳೂರು, ಮಾ.22: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸಿದ ಎನ್ಐಎ ಅಧಿಕಾರಿಗಳು ಬಾಂಬರ್ ಆರೋಪಿಯ ಬಗ್ಗೆ ಮಹತ್ವದ ಮಾಹಿತಿ ಕಲೆಹಾಕಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮುಸಾವಿರ್ ಹುಸೇನ್ ಶಜೀಬ್ ಎನ್ನುವಾತ ಬಾಂಬರ್ ಎನ್ನುವುದನ್ನು ಪತ್ತೆ ಮಾಡಿದ್ದಾರೆ.

ಬೆಂಗಳೂರು ಸ್ಫೋಟದ ಬಗ್ಗೆ ಒಂದು ಸಾವಿರಕ್ಕೂ ಹೆಚ್ಚು ಕಡೆಯ ಸಿಸಿಟಿವಿ ದೃಶ್ಯಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮಾಹಿತಿ ಆಧರಿಸಿ ಇಬ್ಬರು ಶಂಕಿತರ ಬಗ್ಗೆ ನಿಗಾ ಇರಿಸಿದ್ದರು. ಸ್ಫೋಟದ ಬಳಿಕ ಮೂರು ಕಿಮೀ ಅಂತರದಲ್ಲಿ ಮಸೀದಿ ಬಳಿ ಎಸೆದು ಹೋಗಿದ್ದ ಟೋಪಿಯೇ ಈಗ ಪ್ರಮುಖ ಸಾಕ್ಷ್ಯವಾಗಿ ಅಧಿಕಾರಿಗಳಿಗೆ ಸಿಕ್ಕಿದೆ. ಅದರಲ್ಲಿ ಸಿಕ್ಕ ಆತನ ಕೂದಲನ್ನು ಮುಂದಿಟ್ಟು ಡಿಎನ್ಎ ಟೆಸ್ಟ್ ಮಾಡಿಸಿದ್ದಾರೆ ಎನ್ನಲಾಗಿದೆ. ತೀರ್ಥಹಳ್ಳಿಯ ಮುಸಾವಿರ್ ಕುಟುಂಬ ಸದಸ್ಯರಿಗೆ ಇದು ಹೊಂದಿಕೆಯಾಗಿದೆ ಎನ್ನಲಾಗುತ್ತಿದ್ದು ಇದೇ ಮಾಹಿತಿ ಹಿನ್ನೆಲೆಯಲ್ಲಿ ಎನ್ಐಎ ನಿಗಾ ಲಿಸ್ಟ್ ನಲ್ಲಿದ್ದ ಮುಸಾವಿರ್ ಹುಸೇನ್ ಕೃತ್ಯ ಎಸಗಿದ್ದಾನೆ ಎನ್ನುವ ನಿರ್ಧಾರಕ್ಕೆ ಎನ್ಐಎ ಬಂದಿದೆ.

ಇದಲ್ಲದೆ, ಈತ ಧರಿಸಿದ್ದ ಟೋಪಿಯನ್ನು ಕಳೆದ ಜನವರಿ ತಿಂಗಳಲ್ಲಿ ಚೆನ್ನೈನಲ್ಲಿ ಖರೀದಿಸಿದ್ದರು ಎನ್ನುವುದನ್ನೂಪತ್ತೆ ಮಾಡಿದ್ದಾರೆ. ಮುಸಾವಿರ್ ಹುಸೇನ್ ಮತ್ತು ಆತನ ಸಹಾಯಕ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಚೆನ್ನೈನಲ್ಲಿ ತಂಗಿದ್ದರು. ಅಲ್ಲಿರುವಾಗಲೇ ಮುಸಾವಿರ್ ಹುಸೇನ್ ಸಹಾಯಕ ಚೆನ್ನೈ ನಗರದ ಆರ್.ಕೆ. ಸಲಾಯ್ ಮಾಲ್ ನಲ್ಲಿ ಈ ಟೋಪಿಯನ್ನು ಖರೀದಿ ಮಾಡಿದ್ದ. ಮಾರ್ಚ್‌ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ನಲ್ಲಿ ಸ್ಫೋಟ ನಡೆಸಿ ನಾಪತ್ತೆಯಾಗಿದ್ದ ಬಾಂಬರ್‌ ಹಾಕಿಕೊಂಡಿದ್ದ ಟೋಪಿಯನ್ನು ಹಿಡಿದು ಹೊರಟ ತನಿಖಾಧಿಕಾರಿಗಳು ಚೆನ್ನೈಗೆ ತೆರಳಿದ್ದರು. ಇದೀಗ ಅಲ್ಲಿನ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದು, ಮುಸಾವಿರ್ ಮತ್ತು ಆತನ ಸಹಚರ ಚೆನ್ನೈನಲ್ಲಿ ಸುತ್ತಾಡಿರುವುದು ಪತ್ತೆಯಾಗಿದೆ.

ಮುಸಾವಿರ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನಾಗಿದ್ದು 2020ರ ಮಂಗಳೂರಿನ ಗೋಡೆ ಬರಹ ಪ್ರಕರಣದಲ್ಲಿ ಆರೋಪಿಗಳಾಗಿರುವ ಮಹಮ್ಮದ್ ಶಾರೀಕ್ ಮತ್ತು ಮುನೀರ್ ಜೊತೆಗೆ ಸಂಬಂಧ ಹೊಂದಿದ್ದ. ಆ ಕಾರಣಕ್ಕೆ ಎನ್ಐಎ ಅಧಿಕಾರಿಗಳು ಅಂದಿನಿಂದಲೇ ಮುಸಾವಿರ್ ಬಗ್ಗೆ ನಿಗಾ ಇರಿಸಿದ್ದರು. ಆದರೆ, ಮುಸಾವಿರ್ ಎನ್ಐಎ ಅಧಿಕಾರಿಗಳ ಕೈಗೆ ಸಿಕ್ಕಿರಲಿಲ್ಲ. ಮುಸಾವೀರ್‌ ಜೊತೆಗಿದ್ದ ಸಹಚರನನ್ನು ಅಬ್ದುಲ್‌ ಮಾಥರ್ನ್‌ ತಹಾ ಎಂದು ಗುರುತಿಸಲಾಗಿದೆ. ಆತ ಕೂಡ ತೀರ್ಥಹಳ್ಳಿಯವನಾಗಿದ್ದು, ಇವರು ಶಿವಮೊಗ್ಗ ಐಸಿಸ್‌ ಮಾಡ್ಯೂಲ್‌ ಭಾಗವಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಅಬ್ದುಲ್ ತಹಾ ತನ್ನ ತಲೆಯಲ್ಲಿ ಕೂದಲು ಇಲ್ಲದ್ದರಿಂದ ಟೋಪಿ ಹಾಕುತ್ತಿದ್ದ. ಚೆನ್ನೈನ ಟ್ರಿಪ್ಲಿಕೇನ್‌ ಲಾಡ್ಜ್ ನಲ್ಲಿ ತಂಗಿದ್ದಾಗ ಟೋಪಿ ಖರೀದಿಸಿದ್ದ ಎನ್ನುವುದನ್ನು ಪತ್ತೆ ಮಾಡಿದ್ದಾರೆ. ಆ ಮಾದರಿಯ 400 ಟೋಪಿಗಳನ್ನಷ್ಟೇ ಅದರ ಉತ್ಪಾದಕ ಕಂಪನಿ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಅದನ್ನು ಖರೀದಿಸಿದವರು ಯಾರೆಲ್ಲ ಎನ್ನುವುದು ಕಂಪೆನಿ ಬಳಿ ಲಿಸ್ಟ್ ಇರುವುದು ಅಧಿಕಾರಿಗಳ ತನಿಖೆಯಲ್ಲಿ ಮಹತ್ವದ ತಿರುವು ನೀಡಿದೆ. ತಹಾ ಖರೀದಿಸಿದ್ದ ಟೋಪಿಯನ್ನು ಮುಸಾವೀರ್‌ ಹುಸೇನ್‌ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟು ಹೋಗಿದ್ದಾಗ ಧರಿಸಿದ್ದ ಎನ್ನುವುದು ಈಗ ಎನ್ಐಎ ತನಿಖೆಯಲ್ಲಿ ತಿಳಿದುಬಂದ ಅಂಶ. ಇಲ್ಲಿ ವರೆಗಿನ ಮಾಹಿತಿ ಪ್ರಕಾರ, ಮುಸಾವಿರ್ ಆಂಧ್ರ ಪ್ರದೇಶದಲ್ಲಿ ಕೊನೆಯ ಬಾರಿಗೆ ಬಂದು ಹೋಗಿರುವುದನ್ನು ಪತ್ತೆ ಮಾಡಿದ್ದಾರೆ. ಅಲ್ಲಿಂದ ಯಾವ ಕಡೆಗೆ ಹೋಗಿ ಅವಿತಿದ್ದಾನೆ ಎನ್ನುವುದರತ್ತ ತನಿಖೆ ಸಾಗಿದೆ.

The trail of a baseball cap that a man wore while planting an improvised explosive device at The Rameshwaram Cafe in Bengaluru on March 1 has yielded vital clues about the suspect involved in the lunch-hour blast that left nine people injured.