MLA Shivaram Hebbar; ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರೋದು ಪಕ್ಕಾ ; ಸದ್ಯದಲ್ಲೇ ಮಗ, ಬೆಂಬಲಿಗರು ಕೈ ಪಕ್ಷಕ್ಕೆ, ಮೌನ ವ್ರತದಲ್ಲಿ ಅನಂತ ಹೆಗಡೆ, ಕಾಗೇರಿ ಈಗ ಒಂಟಿ ! 

02-04-24 01:25 pm       HK News Desk   ಕರ್ನಾಟಕ

ಬಿಜೆಪಿಯಿಂದ ದೂರ ನಿಂತಿರುವ ಯಲ್ಲಾಪುರ ಶಾಸಕ ಶಿವರಾಮ ‌ಹೆಬ್ಬಾರ್ ಕಾಂಗ್ರೆಸ್ ‌ಸೇರ್ಪಡೆಯಾಗೋದು ಪಕ್ಕಾ ಆಗಿದೆ. ಅಪ್ಪ ಕಾಂಗ್ರೆಸ್ ಸೇರುವ ಮೊದಲೇ ಮಗ ಮತ್ತು ಬೆಂಬಲಿಗರು ಕೈ ಪಕ್ಷ ಸೇರ್ಪಡೆಯಾಗಲಿದ್ದಾರೆ.

ಕಾರವಾರ, ಎ.2: ಬಿಜೆಪಿಯಿಂದ ದೂರ ನಿಂತಿರುವ ಯಲ್ಲಾಪುರ ಶಾಸಕ ಶಿವರಾಮ ‌ಹೆಬ್ಬಾರ್ ಕಾಂಗ್ರೆಸ್ ‌ಸೇರ್ಪಡೆಯಾಗೋದು ಪಕ್ಕಾ ಆಗಿದೆ. ಅಪ್ಪ ಕಾಂಗ್ರೆಸ್ ಸೇರುವ ಮೊದಲೇ ಮಗ ಮತ್ತು ಬೆಂಬಲಿಗರು ಕೈ ಪಕ್ಷ ಸೇರ್ಪಡೆಯಾಗಲಿದ್ದಾರೆ. 

ಶಿವರಾಮ ‌ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ತಮ್ಮ ಆಪ್ತರು ಮತ್ತು ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ದಿನಾಂಕ ನಿದಗದಿಯಷ್ಟೆ ಬಾಕಿ ಎನ್ನಲಾಗುತ್ತಿದ್ದು ಪಕ್ಷ ಸೇರುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಜತೆ ಮಾತುಕತೆ ನಡೆಸಿದ್ದಾರೆ. ‌ಅಧಿಕೃತವಾಗಿ ಶಾಸಕ ಶಿವರಾಮ ಹೆಬ್ಬಾರ್ ಈಗ ಬಿಜೆಪಿಯಲ್ಲೇ ಇದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆ ಹೊತ್ತಿಗೆ ಅಪ್ಪ ಒಂದು ಪಕ್ಷದಲ್ಲಿ ಮಗ ಇನ್ನೊಂದು ಪಕ್ಷದಲ್ಲಿ ಎನ್ನುವಂತಿರಲಿದ್ದಾರೆ. ಶಿವರಾಮ ಹೆಬ್ಬಾರ್ ಕೂಡಾ ದೇಹ ಬಿಜೆಪಿಯಲ್ಲಿ ಇಟ್ಟುಕೊಂಡು‌ ಮನಸ್ಸು ಕಾಂಗ್ರೆಸ್ ನಲ್ಲಿ ಇಟ್ಟುಕೊಂಡಿದ್ದಾರೆ. 

ಸದ್ಯದ ಮಟ್ಟಿಗೆ ಬಿಜೆಪಿಯಲ್ಲೇ ಇರಲಿರುವ ಶಿವರಾಮ ಹೆಬ್ಬಾರ್ ಲೋಕಸಭೆ ಚುನಾವಣೆ ಬಳಿಕವೇ ಕಾಂಗ್ರೆಸ್ ಸೇರಲಿದ್ದಾರೆ. ಲೋಕಸಭೆ ಚುನಾವಣೆ ಪ್ರಚಾರದ ಉದ್ದೇಶಕ್ಕಾಗಿ ಮಗ ಮತ್ತು ತನ್ನ ಬೆಂಬಲಿಗರನ್ನ ಕಾಂಗ್ರೆಸ್ ಕಳುಹಿಸಲಿದ್ದಾರೆ. ಪಕ್ಷದಲ್ಲಿ ತನ್ನ ಸೇರ್ಪಡೆಗೆ ಇರುವ ವಿರೋಧಿ ಮನಸ್ಸುಗಳನ್ನು ಶಮನಗೊಳಿಸಿದ ಬಳಿಕ  ಶಿವರಾಮ ಹೆಬ್ಬಾರ್ ಕೂಡ ಕೈ ಪಕ್ಷ ಸೇರಿಕೊಳ್ಳಲಿದ್ದಾರೆ. 

ಇದರಂತೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪರ ವಿವೇಕ್ ಹೆಬ್ಬಾರ್ ಪ್ರಚಾರಕ್ಕೆ ಇಳಿಯೋದು ಖಚಿತ ಆಗಿದೆ. ಆಮೂಲಕ ಹವ್ಯಕ ಬ್ರಾಹ್ಮಣರ ಪ್ರಾಬಲ್ಯದ ಉತ್ತರ ಕನ್ನಡ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗೆ ಒಂದಷ್ಟು ಬಲ ಸಿಗಲಿದೆ. ಇದೇ ವೇಳೆ, ತಮ್ಮ ಸಂಪೂರ್ಣ ‌ಬೆಂಬಲ‌ ಇದೆಯೆಂದು ಶಿವರಾಮ ಹೆಬ್ಬಾರ್ ಹೇಳಿದ್ದಾರೆ ಎನ್ನುವುದು ಸದ್ಯದ ಸುದ್ದಿ.‌ ಈಗಾಗಲೇ ಬಿಜೆಪಿ ವಿರುದ್ಧ ತೊಡೆ‌ ತಟ್ಟಿರುವ ಹೆಬ್ಬಾರ್, ಪಕ್ಷದ ಚಟುವಟಿಕೆಯಿಂದ ಸಂಪೂರ್ಣ ದೂರ ಉಳಿದಿದ್ದಾರೆ. ‌

ಇಷ್ಟೆಲ್ಲ ಬೆಳವಣಿಗೆ ಆಗುತ್ತಿದ್ದರೂ ಇತ್ತ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ತಮ್ಮ ಪರವಾಗಿ ಪ್ರಚಾರಕ್ಕೆ ಹೆಬ್ಬಾರ್ ಆಗಮಿಸ್ತಾರೆ ಎನ್ನುತ್ತಲೇ ಇದ್ದಾರೆ. ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಅವರೂ ಟಿಕೆಟ್ ಸಿಗದ ಬೇಸರದಲ್ಲಿ ಮುನಿಸುಕೊಂಡಿದ್ದು ಬಿಜೆಪಿ ಪರ ಪ್ರಚಾರಕ್ಕೆ ಬರದೆ ಮೌನಕ್ಕೆ ಜಾರಿದ್ದಾರೆ. ಹೀಗಾಗಿ ಕಾಗೇರಿ ಈಗ ಒಬ್ಬಂಟಿ ಎನ್ನುವಂತಹ ಸ್ಥಿತಿಗೆ ತಲುಪಿದ್ದಾರೆ.

Yellapur MLA Shivaram Hebbar, who has distanced himself from the BJP, is all set to join the Congress. Even before his father joins the Congress, his son and supporters will join the party.