Thirthahalli, BJP worker Saiprasad, Rameswaram café blast: ಸ್ಫೋಟ ಕೃತ್ಯಕ್ಕೂ ತನಗೂ ಸಂಬಂಧ ಇಲ್ಲ, ಲೀಗಲೀ ಕ್ರಿಪ್ಟೋ ವ್ಯವಹಾರ ಮಾಡ್ತೀನಿ, ಎನ್ಐಎ ವಿಚಾರಣೆಗೆ ಕರೆದಿದ್ದರು, ಎಲ್ಲವನ್ನೂ ಹೇಳಿದ್ದೇನೆ ; ದೇಶದ್ರೋಹಿ ಕೆಲಸ ಮಾಡಿದ್ದರೆ ಗುಂಡು ಹೊಡೀರಿ ; ಬಿಜೆಪಿ ಕಾರ್ಯಕರ್ತ ಹೇಳಿಕೆ 

06-04-24 10:51 pm       HK News Desk   ಕರ್ನಾಟಕ

ರಾಮೇಶ್ವರ ಕೆಫೆ ಸ್ಫೋಟಕ್ಕೆ ಸಂಬಂಧಿಸಿ ಎನ್ಐಎ ಅಧಿಕಾರಿಗಳ ವಿಚಾರಣೆ ಎದುರಿಸಿದ ತೀರ್ಥಹಳ್ಳಿ ಮೂಲದ ಬಿಜೆಪಿ ಕಾರ್ಯಕರ್ತ ಸಾಯಿಪ್ರಸಾದ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ತನಗೂ ಸ್ಫೋಟ ಘಟನೆಗೂ ಸಂಬಂಧ ಇಲ್ಲವೆಂದು ಹೇಳಿದ್ದಾನೆ.  

ಶಿವಮೊಗ್ಗ, ಎ.6: ರಾಮೇಶ್ವರ ಕೆಫೆ ಸ್ಫೋಟಕ್ಕೆ ಸಂಬಂಧಿಸಿ ಎನ್ಐಎ ಅಧಿಕಾರಿಗಳ ವಿಚಾರಣೆ ಎದುರಿಸಿದ ತೀರ್ಥಹಳ್ಳಿ ಮೂಲದ ಬಿಜೆಪಿ ಕಾರ್ಯಕರ್ತ ಸಾಯಿಪ್ರಸಾದ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ತನಗೂ ಸ್ಫೋಟ ಘಟನೆಗೂ ಸಂಬಂಧ ಇಲ್ಲವೆಂದು ಹೇಳಿದ್ದಾನೆ.  

ಎನ್ಐಎ ಅಧಿಕಾರಿಗಳು ರಾಮೇಶ್ವರಂ ಸ್ಪೋಟ ವಿಚಾರಕ್ಕೆ ಸಂಬಂಧಿಸಿದಂತೆ ಕರೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮೊಬೈಲ್ ಅಂಗಡಿಯ ಮುಜಾಮಿಲ್ ಎಂಬಾತನ ವಶಕ್ಕೆ ಪಡೆಯಲಾಗಿತ್ತು. ತೀರ್ಥಹಳ್ಳಿಯಲ್ಲಿ ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಯಾಕೆ ಅಂತಾ ಗೊತ್ತಿಲ್ಲ ನನಗೂ ನೋಟಿಸ್ ಕೊಟ್ಟಿದ್ದರು. ಮತೀನ್ ಎಂಬಾತ ಸಾಯಿ ಸ್ಲ್ಯಾಷ್_ಪಿ ಎಂಬ ಅಕೌಂಟ್ ನಿಂದ ಕ್ರಿಪ್ಟೋ ಕರೆನ್ಸಿ ವ್ಯವಹಾರ ಮಾಡಿದ್ದಾನೆ. ಸಾಯಿ ಪಕ್ಕದಲ್ಲಿ ಪಿ ಇರುವುದರಿಂದ ನನ್ನ ತಮ್ಮ ಹಾಗೂ ನನಗೆ ಕರೆಸಿದ್ದರು. ಪಿ ಎಂದರೆ ಪ್ರಸಾದ್ ಅಥವಾ ಪ್ರಕಾಶ್ ಬರುತ್ತದೆ. ನಾನು ಕ್ರಿಪ್ಟೋ ಎಂಬ ಲೀಗಲ್ ಆ್ಯಪ್ ಮೂಲಕ ಹಣ ಹೂಡಿಕೆ ಮಾಡಿದ್ದೇನೆ. ಅದು ನನ್ನ ಬ್ಯಾಂಕ್ ಮೂಲಕವೇ ಕೆವೈಸಿ ಬಳಸಿ ಮಾಡಿದ್ದೇನೆ. 

ಭವಿಷ್ಯದ ದೃಷ್ಟಿಯಿಂದ ಶೇರ್ ನಲ್ಲಿ ಹೂಡಿಕೆ ಮಾಡಿದ್ದೇನೆ ಅಷ್ಟೇ. ಈ ಬಗ್ಗೆ ಅಧಿಕಾರಿಗಳಿಗೆ ನಾನು ತಿಳಿಸಿದ್ದೇನೆ. ನಾವು ಯಾವುದೇ ದೇಶದ್ರೋಹದ ಕೆಲಸ ಮಾಡಲ್ಲ. ನಾನು ಹಿಂದೂ ಪರ ಸಂಘಟನೆಯಲ್ಲಿರುವವನು. ದೇಶ ವಿರೋಧಿ ಚಟುವಟಿಕೆ ಮಾಡಲ್ಲ. ಹುಟ್ಟಿನಿಂದಲೂ ಆ ಬುದ್ಧಿ ನಮಗೆ ಬಂದಿಲ್ಲ. ಮುಜಾಮಿಲ್ ಗೂ ವಿಚಾರಣೆ ಮಾಡಿ ಬಿಟ್ಟು ಕಳಿಸಿದ್ದಾರೆ. ನಾವು ಅವರು ಸ್ನೇಹಿತರು ಅಷ್ಟೇ. ಅವರ ಕೆಲಸವೇನಾದರೂ ಇದ್ದರೆ ನಾನು ಮಾಡಿಕೊಡುತ್ತಿದ್ದೆ. ಅವರ ಅಂಗಡಿಯಲ್ಲಿ ಮೊಬೈಲ್ ಖರೀದಿ ಮಾಡಿದ್ದೆವು ಅಷ್ಟೇ. 

ಆರೋಗ್ಯಕರ ವ್ಯವಹಾರ ಮಾಡುತ್ತಿದ್ದೆವು. ಈ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಕೊಟ್ಟೆವು. ಕ್ರಿಪ್ಟೋ ಆ್ಯಪ್ ಬಳಕೆ ಬಗ್ಗೆ ತೋರಿಸಿದ್ವಿ. ಬೇರೆನೂ ವ್ಯವಹಾರ ಅವರಿಗೆ ಕಂಡು ಬಂದಿಲ್ಲ. ಕೇವಲ ನಾನು ಲೀಗಲ್ ಕ್ರಿಪ್ಟೋ ಆ್ಯಪ್ ನಿಂದ ಕರೆನ್ಸಿ ಕಾಯಿನ್ ಪರ್ಚೇಸ್ ಮಾಡಿದ್ದೇನೆ. ಅದು ಕೂಡ ನಮ್ಮ ಬ್ಯಾಂಕ್ ದಾಖಲೆ ಮೂಲಕವೇ ಮಾಡಿದ್ದೇನೆ. ಕ್ರಿಪ್ಟೋ ಅಂದಕೂಡಲೇ ಅದು ಕೆಟ್ಟದ್ದು ಎಂದಲ್ಲ. ನಾವು ನಮ್ಮ ದಾಖಲೆ ಪತ್ರಗಳು ಎಲ್ಲಿ ಜೆರಾಕ್ಸ್, ಸ್ಕ್ಯಾನ್ ಮಾಡಬೇಕೆಂಬುದರ ಬಗ್ಗೆ ನಾವು ಎಚ್ಚರ ವಹಿಸಬೇಕು.

ದೇಶದ ವಿಚಾರ ಬಂದಾಗ ಆ ಪಕ್ಷ, ಈ ಪಕ್ಷ, ಆ ಜಾತಿ, ಈ ಜಾತಿ ಎಂಬುದು ಬರಲ್ಲ. ಈ ಪ್ರಕರಣದಿಂದ ಯುವಕರು ಎಚ್ಚರವಾಗಿರಬೇಕು. ಎಲ್ಲಿ ಬೇಕಲ್ಲಿ ದಾಖಲೆ ಪತ್ರಗಳು ಜೆರಾಕ್ಸ್, ಸ್ಕ್ಯಾನಿಂಗ್ ಮಾಡಿಸಬಾರದು. ಕುವೆಂಪು ಊರು, ನಾಡು ತೀರ್ಥಹಳ್ಳಿ ಎನ್ನುತ್ತಿದ್ದೆವು. ಈಗ ಟೆರರಿಸ್ಟ್ ಗಳ ನಾಡಾಗಿ ಪರಿವರ್ತಿತವಾಗಿದೆ. 

ನಾನೊಬ್ಬ ಬಿಜೆಪಿ ಸಣ್ಣ ಕಾರ್ಯಕರ್ತ ಅಷ್ಟೇ. ಯಾವುದೇ ಮುಖಂಡ, ನಾಯಕನಲ್ಲ. ಯಾವುದೇ ಸ್ಟೇಟ್ ಬಾಡಿಯಲ್ಲೂ ಇಲ್ಲ. ಸಣ್ಣಪುಟ್ಟ ಪೇಂಟಿಂಗ್ ಮಾಡಿಕೊಂಡು ಬದುಕುತ್ತಿದ್ದೇನೆ. ಸುಖಾಸುಮ್ಮನೆ ಗೊತ್ತಿಲ್ಲದೇ ಆರೋಪ ಮಾಡಬೇಡಿ. ಮೊದಲು ವಿಚಾರ ಪೂರ್ತಿ ತಿಳಿದುಕೊಳ್ಳಿ. ತಪ್ಪಿದ್ದರೆ ನೇರವಾಗಿ ಗುಂಡು ಹೊಡೆಯಿರಿ. ಮನೆಯಲ್ಲೇ ಮೊದಲು ಹೊಡೆಯುತ್ತಾರೆ. ಈ ವಿಚಾರದಲ್ಲಿ ನನ್ನದೇನೂ ತಪ್ಪಿಲ್ಲ.

ನಮ್ಮ ಬಿಜೆಪಿ ದೇಶಪ್ರೇಮ ಕಲಿಸಿಕೊಟ್ಟಿದೆ. ಈಗ ಡಿಜಿಟಲ್ ಮಾದ್ಯಮದ ಯುಗ. ಯಾರು ಎಲ್ಲಿಂದ ಬೇಕಾದರೂ ನಿಮ್ಮ ಮೊಬೈಲ್ ಹ್ಯಾಕ್ ಮಾಡಬಹುದು. ನಾಳೆ ನಿಮ್ಮ ಮಕ್ಕಳು ಕೂಡ ಇದರಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ನೋಡಿಕೊಂಡು ಆರೋಪ ಮಾಡಿ ಎಂದು ಸಾಯಿ ಪ್ರಸಾದ್ ಜನಸಾಮಾನ್ಯರಿಗೆ ಮನವಿ ಮಾಡಿದ್ದಾನೆ.

Thirthahalli-based BJP worker Saiprasad, who was questioned by the NIA in connection with the Rameswaram café blast, has told the media that he has nothing to do with the blast.