Cm Siddaramaiah Neha house visit: ಹುಬ್ಬಳ್ಳಿ ; ನೇಹಾ ಮನೆಗೆ ಸಿಎಂ ಸಿದ್ದು ಭೇಟಿ, ಕುಟುಂಬಸ್ಥರಿಗೆ ಸಾಂತ್ವನ, ಅಗತ್ಯವಿದ್ದರೆ ನೇಹಾ ಕುಟುಂಬಕ್ಕೆ ಭದ್ರತೆ ಕೊಡ್ತೀವಿ 

25-04-24 10:57 pm       HK News Desk   ಕರ್ನಾಟಕ

ನೇಹಾ ಹಿರೇಮಠ ಕೊಲೆಯಾಗಿ ಒಂದು ವಾರದ ಬಳಿಕ ಕೊನೆಗೂ ಆಕೆ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು. ಇದೇ ವೇಳೆ ನೇಹಾ ತಂದೆ-ತಾಯಿಗೆ ಸಾಂತ್ವನ ಹೇಳಿದರು.

ಹುಬ್ಬಳ್ಳಿ , ಏ 25: ನೇಹಾ ಹಿರೇಮಠ ಕೊಲೆಯಾಗಿ ಒಂದು ವಾರದ ಬಳಿಕ ಕೊನೆಗೂ ಆಕೆ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು. ಇದೇ ವೇಳೆ ನೇಹಾ ತಂದೆ-ತಾಯಿಗೆ ಸಾಂತ್ವನ ಹೇಳಿದರು.

ಹುಬ್ಬಳ್ಳಿಯಲ್ಲಿನ ನೇಹಾ ನಿವಾಸಕ್ಕೆ ಗುರುವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ಸಿಎಂ, ನೇಹಾ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ''ಇದೊಂದು ದುರಾದೃಷ್ಟಕರ ಘಟನೆ. ಈ ಪ್ರಕರಣವನ್ನು ಈಗಾಗಲೇ ನಾವು ಸಿಐಡಿಗೆ ಕೊಟ್ಟಿದ್ದೇವೆ. ಆರೋಪಿಯನ್ನು ಬಂಧಿಸಲಾಗಿದೆ. ಸಿಐಡಿ ತನಿಖೆ ಆರಂಭಗೊಂಡಿದೆ'' ಎಂದರು.

ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಬಿಜೆಪಿ ನಾಯಕರ ಆಗ್ರಹದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ''ನೇಹಾ ಹತ್ಯೆಯಲ್ಲಿ ಬಿಜೆಪಿಯು ರಾಜಕೀಯ ಮಾಡುತ್ತಿದೆ. ಇಲ್ಲಿಯವರೆಗೆ ಅವರು ಒಂದು ಪ್ರಕರಣವನ್ನಾದರೂ ಸಿಬಿಐಗೆ ಕೊಟ್ಟಿದ್ದಾರಾ? ನಮ್ಮ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿದ್ದೇವೆ'' ಎಂದು ತಿರುಗೇಟು ನೀಡಿದರು.

'ನೇಹಾ ಕುಟುಂಬದ ಜೊತೆಗೆ ನಾವು ಇರುತ್ತೇವೆ. ಅವರಿಗೆ ರಕ್ಷಣೆ ಬೇಕಿದ್ದರೂ ಕೊಡುತ್ತೇವೆ. ಸಿಐಡಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ವಿಶೇಷ ಕೋರ್ಟ್​​​ಗೆ ಚಾರ್ಜ್​ಶೀಟ್ ಸಲ್ಲಿಸುತ್ತಾರೆ. ನಂತರ ಕೋರ್ಟ್​​ನಲ್ಲಿ ವಿಚಾರಣೆ ನಡೆಯಲಿದೆ. ಆದಷ್ಟು ಬೇಗ ನ್ಯಾಯಾಲಯದಲ್ಲಿ ಆರೋಪಿಗೆ ಗರಿಷ್ಠ ಶಿಕ್ಷೆ ಆಗುತ್ತದೆ. ಧೈರ್ಯವಾಗಿರಿ, 120 ದಿನಗಳೊಳಗೆ ನ್ಯಾಯ ಕೊಡಿಸೋಣ' ಎಂದು ಸಿಎಂ ನೇಹಾ ತಂದೆಯ ಬೆನ್ನು ತಟ್ಟಿದರು.

ಸಿಎಂ ಎದುರು ನಿರಂಜನ ಹಿರೇಮಠ ಬೇಡಿಕೆ: 

ಇದೇ ವೇಳೆ ಮಗಳ ಸಾವಿಗೆ ನ್ಯಾಯ ಬೇಕೆಂದು ನೇಹಾ ತಂದೆ ನಿರಂಜನ ಹಿರೇಮಠ ಸಿಎಂ ಬಳಿ ಕೋರಿದರು. ಇದೇ ವೇಳೆ ಮಾತನಾಡಿದ ಅವರು, ''ನಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ವಿಶೇಷ ನ್ಯಾಯಾಲಯದಲ್ಲಿ 90-120 ದಿನಗಳ ಒಳಗಾಗಿ ನ್ಯಾಯ ಸಿಗಬೇಕು. ಸಾವಿಗೆ ಸಾವೇ ಶಿಕ್ಷೆ ಆಗಬೇಕು'' ಎಂದು ಬೇಡಿಕೆ ಇಟ್ಟರು.

ಫಯಾಜ್​ನನ್ನು ಗಲ್ಲಿಗೇರಿದ ಮೇಲೆಯೇ ನಮಗೆ ಸಮಾಧಾನ, ಅಲ್ಲಿಯವರೆಗೆ ಹೋರಾಟ ಮಾಡುತ್ತೇವೆ. ಸರ್ಕಾರ ನಮ್ಮ ಜೊತೆಗೆ ಇರಬೇಕು. ಸಿಎಂ ನಮ್ಮ ಜೊತೆಗೆ ಇದ್ದು ನ್ಯಾಯ ಒದಗಿಸಬೇಕೆಂದು ಮನವಿ ಮಾಡುತ್ತೇನೆ. ಸಿಐಡಿ ತನಿಖೆಗೆ ಒಪ್ಪಿಸಿದ್ದು ಸಂತೋಷ ತಂದಿದೆ. ಕಾಂಗ್ರೆಸ್ ಮುಖಂಡರು ನಮ್ಮ ಬೆನ್ನಿಗೆ ನಿಂತಿದ್ದಾರೆ. ಕೋಪದಲ್ಲಿ ಯಾರಿಗಾದರೂ ನೋವು ತರುವ ಹಾಗೆ ಮಾತನಾಡಿದರೆ ಕ್ಷಮೆ ಕೋರುತ್ತೇನೆ ಎಂದು ಭಾವುಕರಾದರು.

ಈ ಸಂದರ್ಭದಲ್ಲಿ ಸಚಿವರಾದ ಹೆಚ್.ಕೆ.ಪಾಟೀಲ್, ಸಂತೋಷ ಲಾಡ್, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಶಾಸಕ ಪ್ರಸಾದ್ ಅಬ್ಬಯ್ಯ, ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Karnataka Chief Minister Siddaramaiah on Thursday visited Neha Hiremath's house and offered condolences to her family members. Neha Hiremath (23), daughter of Congress councilor of Hubballi-Dharwad Muncipal Corporation Niranjan Hiremath, was stabbed to death on the campus of BVB College on April 18 by her former classmate Fayaz Khondunaik.