Bangalore Accident, BBMP: ಬೆಂಗಳೂರು ; ಬೈಕ್ ಗೆ ಡಿಕ್ಕಿ ಹೊಡೆದ ಬಿಬಿಎಂಪಿ ಕಸದ ಲಾರಿ, ಇಬ್ಬರು ಟೆಕ್ಕಿಗಳ ಬಲಿ, ಡ್ರೈವರ್ ಪರಾರಿ 

29-07-24 12:31 pm       Bangalore Correspondent   ಕರ್ನಾಟಕ

ಬಿಬಿಎಂಪಿ ಕಸದ ಲಾರಿ ಹರಿದು ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ಕೆ.ಆರ್.ಸರ್ಕಲ್​ ಬಳಿ ನಡೆಯಿತು. ಮೃತರನ್ನು ಬಾಣಸವಾಡಿ ನಿವಾಸಿ ಪ್ರಶಾಂತ್ (25) ಹಾಗೂ ಆಂಧ್ರಪ್ರದೇಶ ಮೂಲದ ಶಿಲ್ಪಾ‌ (27) ಎಂದು ಗುರುತಿಸಲಾಗಿದೆ.

ಬೆಂಗಳೂರು, ಜುಲೈ 29: ಬಿಬಿಎಂಪಿ ಕಸದ ಲಾರಿ ಹರಿದು ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ಕೆ.ಆರ್.ಸರ್ಕಲ್​ ಬಳಿ ನಡೆಯಿತು. ಮೃತರನ್ನು ಬಾಣಸವಾಡಿ ನಿವಾಸಿ ಪ್ರಶಾಂತ್ (25) ಹಾಗೂ ಆಂಧ್ರಪ್ರದೇಶ ಮೂಲದ ಶಿಲ್ಪಾ‌ (27) ಎಂದು ಗುರುತಿಸಲಾಗಿದೆ. ಐಟಿಪಿಎಲ್​​ನ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಹಾಗೂ ಶಿಲ್ಪಾ ನಿನ್ನೆ ಊಟಕ್ಕೆಂದು ಹೊರಗಡೆ ಬಂದಿದ್ದಾಗ ಅವಘಡ ಸಂಭವಿಸಿದೆ.

ಅಪಘಾತ ನಡೆದಿದ್ದು ಹೇಗೆ?:

ರಾತ್ರಿ 8:45ರ ಸುಮಾರಿಗೆ ಮೆಜೆಸ್ಟಿಕ್‌ನಿಂದ‌ ಕೆ.ಆರ್.ವೃತ್ತದ ಕಡೆ ಬೈಕ್‌ನಲ್ಲಿ ಬರುತ್ತಿದ್ದಾಗ ಸಿಐಡಿ ಜಂಕ್ಷನ್‌ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಲಾರಿ ಇಬ್ಬರ ಮೈಮೇಲೂ ಹರಿದಿದೆ. ಗಾಯಾಳುಗಳನ್ನು ಸಮೀಪದ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆಯೇ ಇಬ್ಬರೂ ಮೃತಪಟ್ಟಿದ್ದಾರೆ

ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹಲಸೂರು ಗೇಟ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಸದ ಲಾರಿಗೆ ಟೆಕ್ಕಿಗಳು ಬಲಿ: 

ಪ್ರಶಾಂತ್ ಮತ್ತು ಶಿಲ್ಪಾ ಟೆಕ್ಕಿಗಳಾಗಿದ್ದು, ಟಿಸಿಎಸ್​ನಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಜೆ ಹಿನ್ನೆಲೆಯಲ್ಲಿ ಊಟಕ್ಕೆಂದು ಹೊರಗಡೆ ಬಂದಿದ್ದರು. ಈ ವೇಳೆ ಯಮನಂತೆ ಕಸದ ಲಾರಿ ಅಡ್ಡ ಬಂದಿದೆ. ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬಿಬಿಎಂಪಿ ಕಸದ ಲಾರಿ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.

ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ:

ಬಿಬಿಎಂಪಿ ಕಸದ ಲಾರಿ ಅಪಘಾತದಲ್ಲಿ ನಿನ್ನೆ ರಾತ್ರಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಬಿಬಿಎಂಪಿ ಮೃತರ ಕುಟುಂಬಗಳಿಗೆ ನೆರವು ಕೊಡಲಿದೆ. ಇದು ದುರಾದೃಷ್ಟಕರ ಘಟನೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.

Two persons on a two-wheeler were killed when a BBMP garbage truck ran over them near K.R. Circle on Sunday night. The deceased have been identified as Prashanth (25), a resident of Banaswadi and Shilpa (27), a native of Andhra Pradesh.