Kali river bridge collapses in Karwar: ಕಾರವಾರದಲ್ಲಿ ತಡರಾತ್ರಿ ಮತ್ತೊಂದು ಸೇತುವೆ ಕುಸಿತ ; ಕಾಳಿ ನದಿಯಲ್ಲಿ ತಪ್ಪಿದ ದುರಂತ, ಟ್ರಕ್ ನೀರುಪಾಲು, ಚಾಲಕ ಬಚಾವ್, ಗೋವಾ ಹೆದ್ದಾರಿ ಸಂಚಾರ ಬಂದ್, ಐಆರ್ ಬಿ ಕಂಪನಿ, ಹೆದ್ದಾರಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಡೀಸಿ ಸೂಚನೆ 

07-08-24 12:03 pm       HK News Desk   ಕರ್ನಾಟಕ

ಕಾರವಾರ ಬಳಿಯ ಕೋಡಿಬಾಗ್ ನಲ್ಲಿರುವ ಕಾಳಿ ನದಿಗೆ ಅಡ್ಡಲಾಗಿದ್ದ ಹಳೆ ಸೇತುವೆ ನಿನ್ನೆ ತಡರಾತ್ರಿ ಕುಸಿದು ಬಿದ್ದಿದ್ದು ಹೆಚ್ಚಿನ ವಾಹನಗಳು ಇಲ್ಲದೇ ಇದ್ದುದರಿಂದ ಅನಾಹುತ ತಪ್ಪಿದೆ.

ಕಾರವಾರ, ಆಗಸ್ಟ್.7: ಕಾರವಾರ ಬಳಿಯ ಕೋಡಿಬಾಗ್ ನಲ್ಲಿರುವ ಕಾಳಿ ನದಿಗೆ ಅಡ್ಡಲಾಗಿದ್ದ ಹಳೆ ಸೇತುವೆ ನಿನ್ನೆ ತಡರಾತ್ರಿ ಕುಸಿದು ಬಿದ್ದಿದ್ದು ಹೆಚ್ಚಿನ ವಾಹನಗಳು ಇಲ್ಲದೇ ಇದ್ದುದರಿಂದ ಅನಾಹುತ ತಪ್ಪಿದೆ. ಟ್ರಕ್ ಒಂದು ನೀರುಪಾಲಾಗಿದ್ದು ಚಾಲಕ ಸ್ವಲ್ಪದರಲ್ಲಿ ಬಚಾವ್ ಆಗಿದ್ದಾನೆ. 

ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ 60 ವರ್ಷಗಳ ಹಿಂದೆ ಕಾಳಿ ನದಿಗೆ ನಿರ್ಮಿಸಲಾಗಿದ್ದ ಸೇತುವೆ ದುಸ್ಥಿತಿಗೆ ಒಳಗಾಗಿತ್ತು. ಹೀಗಾಗಿ ಪಕ್ಕದಲ್ಲೇ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್ ಬಿ ಕಂಪನಿಯಿಂದ ಹೊಸ ಸೇತುವೆ ರಚಿಸಲಾಗಿತ್ತು. ಹೊಸ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿರಲಿಲ್ಲ. ನಿನ್ನೆ ತಡರಾತ್ರಿ ಟ್ರಕ್ ಒಂದು ಸಂಚರಿಸುತ್ತಿದ್ದಾಗ ಹಳೆ ಸೇತುವೆ ಕುಸಿದು ಬಿದ್ದಿದ್ದು ಟ್ರಕ್ ನದಿಗೆ ಬಿದ್ದಿದೆ. ಕೂಡಲೇ ಅಗ್ನಿಶಾಮಕ‌ ದಳ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಟ್ರಕ್ ಚಾಲಕನನ್ನು ರಕ್ಷಿಸಿದ್ದಾರೆ. ಬಳಿಕ ನದಿಗೆ ನಿರ್ಮಿಸಿರುವ ಹೊಸ ಸೇತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಲಾಗಿತ್ತು. 

Karnataka: Kali River Bridge Collapses In Karwar; Driver Of Truck That Fell  Into Water Rescued

Bridge over Kali river collapses in Karnataka, traffic disrupted | Zee  Business

Traffic on Goa-Karnataka highway hit as Kali river bridge collapses

Traffic on Goa-Karnataka highway hit as Kali river bridge collapses | Goa  News - Times of India

ತಡರಾತ್ರಿಯೇ ಎಸ್ಪಿ ನಾರಾಯಣ್ ಮತ್ತು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಸ್ಥಳಕ್ಕೆ ಭೇಟಿ ನೀಡಿದ‌್ದು ಪರಿಶೀಲನೆ ನಡೆಸಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಕಳೆದ 15 ದಿನಗಳ ಹಿಂದಷ್ಟೆ ಶಿರೂರು ಗುಡ್ಡ ಕುಸಿತ ಆಗಿತ್ತು. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು.‌ ಈಗ ಅದೇ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗೋವಾ- ಕಾರವಾರ ಸಂಪರ್ಕಿಸುವ ಸೇತುವೆ ಕುಸಿದು ಬಿದ್ದಿರುವುದರಿಂದ ಜಿಲ್ಲಾಧಿಕಾರಿ, ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಐಆರ್ ಬಿ ಕಂಪನಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಹಿನ್ನೆಲೆ ಐ ಆರ್ ಬಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಕೇಸ್ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಆಸುಪಾಸು ಒಂದು ಕಿಮೀ ಉದ್ದದ ದೊಡ್ಡ ಸೇತುವೆ ಇದಾಗಿದ್ದು ಕಾರವಾರದಿಂದ ಗೋವಾ ತಲುಪಲು ಇದೇ ಹೆದ್ದಾರಿಯಲ್ಲಿ ಸಾಗಬೇಕಿದೆ.  

ಇದೇ ವೇಳೆ, ಐ ಆರ್ ಬಿ ಕಂಪನಿಯಿಂದ ನಿರ್ಮಾಣಗೊಂಡಿರುವ ಹೊಸ ಸೇತುವೆಯ ಗುಣಮಟ್ಟ ಪರೀಕ್ಷೆ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಕುಸಿದ ಸೇತುವೆಯ ಪಕ್ಕದಲ್ಲೇ ಹೊಸ ಸೇತುವೆಯಿದ್ದು ಗುಣಮಟ್ಟ ಪರೀಕ್ಷೆ ಬಳಿಕವೇ ಸಂಚಾರಕ್ಕೆ ಅನುವು ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.  ಸೇತುವೆಯ ಗುಣಮಟ್ಟದ ವರದಿ ಬರುವವರೆಗೂ ಕಾರವಾರ- ಗೋವಾ ಮಧ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಷೇಧಿಸಿ ಆದೇಶ ಮಾಡಿದ್ದಾರೆ. ‌ಸದ್ಯ ಕಾರವಾರದಿಂದ ಗೋವಾ ಕಡೆ ಹೋಗುವ ಸಂಚಾರ ಬಂದ್ ಆಗಿದೆ.

ಬೆಳಗಾಗುತ್ತಿದ್ದಂತೆ ಕಾಳಿ ನದಿಯ ಹಳೆ ಸೇತುವೆ ಕುಸಿತ ವಿಷಯ ತಿಳಿದು ಜನರು ತಂಡೋಪತಂಡವಾಗಿ ನೋಡಲು ಆಗಮಿಸಿದ್ದಾರೆ.‌ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದು ಹೊಸ ಸೇತುವೆ ಮೇಲೆ ನಿಂತು ಕುಸಿದ ಸೇತುವೆ ನೋಡುತ್ತಿದ್ದಾರೆ. ಜನರನ್ನ ಚದುರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ. ‌ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು ಬಡಕಲಾಗಿದ್ದ ಸೇತುವೆ ಬಿದ್ದಿರುವುದು ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.‌

A 37-year-old truck driver from Tamil Nadu was rescued after his vehicle fell into Kali River following the collapse of a bridge at Karwar in Karnataka's Uttara Kannada district in the early hours of Wednesday.