Didupe scooter found, Belthangady: ದಿಡುಪೆ, ಮಲವಂತಿಗೆಯಲ್ಲಿ ಮತ್ತೆ ಮೃತ್ಯುಂಜಯ ನದಿಯಲ್ಲಿ ರುದ್ರಪ್ರತಾಪ ; 2019ರ ಪ್ರವಾಹದಲ್ಲಿ ಕಾಣೆಯಾಗಿದ್ದ ಸ್ಕೂಟರ್ ಪತ್ತೆ, ಸ್ಥಳೀಯರಿಗೆ ಅಚ್ಚರಿ ! ಘಟ್ಟದಲ್ಲಿ ಮತ್ತೆ ಕುಸಿತದ ಆತಂಕ  

21-08-24 09:46 pm       HK News Desk   ಕರ್ನಾಟಕ

ಮಳೆಗಾಲದಲ್ಲಿ ನದಿಗಳಲ್ಲಿ ಪ್ರವಾಹ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಬೆಳ್ತಂಗಡಿ ತಾಲೂಕಿನ ದಿಡುಪೆ, ಕಡಿರುದ್ಯಾವರ, ಮಲವಂತಿಗೆ ಗ್ರಾಮದಲ್ಲಿ ಹರಿಯುವ ಮೃತ್ಯುಂಜಯ ನದಿಯಲ್ಲಿ ಮಳೆ ಇಲ್ಲದಿದ್ದರೂ ಒಮ್ಮಿಂದೊಮ್ಮೆಲೇ ಉಕ್ಕಿ ಹರಿದಿದೆ.

ಬೆಳ್ತಂಗಡಿ, ಆಗಸ್ಟ್ 21: ಮಳೆಗಾಲದಲ್ಲಿ ನದಿಗಳಲ್ಲಿ ಪ್ರವಾಹ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಬೆಳ್ತಂಗಡಿ ತಾಲೂಕಿನ ದಿಡುಪೆ, ಕಡಿರುದ್ಯಾವರ, ಮಲವಂತಿಗೆ ಗ್ರಾಮದಲ್ಲಿ ಹರಿಯುವ ಮೃತ್ಯುಂಜಯ ನದಿಯಲ್ಲಿ ಮಳೆ ಇಲ್ಲದಿದ್ದರೂ ಒಮ್ಮಿಂದೊಮ್ಮೆಲೇ ಉಕ್ಕಿ ಹರಿದಿದೆ. 2019ರ ರೀತಿಯಲ್ಲೇ ಮರದ ದಿಮ್ಮಿ, ಮಣ್ಣುಗಳ ಜೊತೆಗೆ ಭಾರೀ ನೀರು ನದಿಯಲ್ಲಿ ಉಕ್ಕಿ ಬಂದಿದೆ. ವಿಚಿತ್ರ ಅಂದರೆ, ಐದು ವರ್ಷಗಳ ಹಿಂದೆ ಪ್ರವಾಹಕ್ಕೆ ಸಿಲುಕಿ ಕಾಣೆಯಾಗಿದ್ದ ಸ್ಕೂಟರ್ ನದಿಯಿಂದ ಮೇಲೆದ್ದು ಬಂದು ನಿಂತಿದೆ.

2019ರಲ್ಲಿಯೂ ಇದೇ ರೀತಿಯ ಪ್ರವಾಹ ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಕಾಣಿಸಿಕೊಂಡಿತ್ತು. ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶದಲ್ಲಿ ಬೆಟ್ಟಗಳು ಛಿದ್ರಗೊಂಡು ನೀರು ಧುಮ್ಮುಕ್ಕಿ ಹರಿದಿತ್ತು. ಮಂಗಳವಾರ ಘಟ್ಟದ ಮೇಲ್ಭಾಗದಲ್ಲಿ ಮೇಘ ಸ್ಫೋಟದ ರೀತಿ ಭಾರೀ ಮಳೆಯಾಗಿದ್ದು, ಇದರ ಪರಿಣಾಮ ದಿಡುಪೆ, ಮಲವಂತಿಗೆ ಗ್ರಾಮದಿಂದ ಹರಿಯುವ ಸಣ್ಣ ಹೊಳೆಯ ರೂಪದಲ್ಲಿ ಹರಿಯುವ ಮೃತ್ಯುಂಜಯ ನದಿ ರುದ್ರರೂಪ ತಾಳಿತ್ತು. ಘಟ್ಟದ ಮೇಲ್ಭಾಗದಲ್ಲಿ ಮತ್ತೆ ಭೂಕುಸಿತ ಉಂಟಾಗಿದ್ದು, ಭಾರೀ ಪ್ರಮಾಣದ ನೀರು ಉಕ್ಕಿ ಬಂದಿತ್ತು. ಇದೇ ವೇಳೆ, ಈ ಹಿಂದೆ 2019ರಲ್ಲಿ ಪ್ರವಾಹ ಕಾಣಿಸಿಕೊಂಡಿದ್ದಾಗ ನಾಪತ್ತೆಯಾಗಿದ್ದ ಸ್ಕೂಟರ್ ಈಗ ನದಿಯಿಂದ ಮೇಲೆದ್ದು ಬಂದಿರುವುದು ಸ್ಥಳೀಯರನ್ನು ಅಚ್ಚರಿಗೆ ಕೆಡವಿದೆ.

ಮಲವಂತಿಗೆ ಗ್ರಾಮದ ಅಶೋಕ್ ಎಂಬವರಿಗೆ ಸೇರಿದ ಕೆಎ 21- ಎಸ್ 4451 ನಂಬರಿನ ಹೊಂಡಾ ಏಕ್ಟಿವಾ ಸ್ಕೂಟರ್ ನದಿಯಿಂದ ಮೇಲೆದ್ದು ಬಂದಿರುವ ವಾಹನ. ಮಳೆಗಾಲದಲ್ಲಿ ನದಿಯನ್ನು ದಾಟಿಕೊಂಡು ಹೋಗಲಾಗುವುದಿಲ್ಲ ಎಂದು ಸ್ಕೂಟರನ್ನು ನದಿಯ ದಡದಲ್ಲಿ ಇಟ್ಟುಹೋಗಿದ್ದರು. 2019ರ ವರಮಹಾಲಕ್ಷ್ಮೀ ದಿನದಂದು ಭಾರೀ ಪ್ರವಾಹ ಕಾಣಿಸಿಕೊಂಡು ಅಲ್ಲಿ ನಿಲ್ಲಿಸಿದ್ದ ಸ್ಕೂಟರ್ ನಾಪತ್ತೆಯಾಗಿತ್ತು. ಜೆಸಿಬಿ ಮೂಲಕ ನದಿಯಲ್ಲಿ ತುಂಬಿದ್ದ ಮಣ್ಣನ್ನು ಎತ್ತಿ ಹುಡುಕಾಡಿದ್ದರೂ ಸ್ಕೂಟರ್ ಪತ್ತೆಯಾಗಿರಲಿಲ್ಲ. ಇದೀಗ ಐದು ವರ್ಷಗಳ ನಂತರ ಅಂತಹದ್ದೇ ಪ್ರವಾಹ ಕಾಣಿಸಿಕೊಂಡಾಗ ಕಾಣೆಯಾಗಿದ್ದ ಸ್ಕೂಟರ್ ನದಿಯ ಮಣ್ಣು ಸವೆದು ಹೋಗುತ್ತಲೇ ತುಕ್ಕು ಹಿಡಿದು ಕರಟಿ ಹೋಗಿರುವ ರೀತಿಯಲ್ಲಿ ಪತ್ತೆಯಾಗಿದೆ. ಬಳಿಕ ಸ್ಥಳೀಯರು ಹಗ್ಗ ಕಟ್ಟಿ ಹೊಳೆಯ ಮಧ್ಯದಿಂದ ಎಳೆದು ಮೇಲೆ ನಿಲ್ಲಿಸಿದ್ದಾರೆ.

2014ರಲ್ಲಿ ಹೊಸತಾಗಿ ಖರೀದಿಸಿದ್ದ ಸ್ಕೂಟರ್ ಅದಾಗಿದ್ದು, ಐದು ವರ್ಷ ಕಾಲ ಹೂತು ಹೋಗಿದ್ದರಿಂದ ಸ್ಟೀಲ್ ಭಾಗ ಹೊರತುಪಡಿಸಿ ಉಳಿದ ಭಾಗ ಸವೆದು ಹೋಗಿದೆ. ಇನ್ನು ಗುಜಿರಿಗೆ ಕೊಡಬೇಕಷ್ಟೇ ಎಂದು ಹೇಳುತ್ತಾರೆ ಅಶೋಕ್. ಆದರೆ ಎಲ್ಲಿ ಹೋಯ್ತು ಎನ್ನುವ ಕುತೂಹಲ ಇತ್ತು. ಮತ್ತೆ ಪ್ರವಾಹ ಬಂದು ಸ್ಕೂಟರನ್ನು ನದಿಯೇ ಮತ್ತೆ ತೋರಿಸಿಕೊಟ್ಟಿದೆ ಎಂಬ ಸಾಂತ್ವನ ಸ್ಥಳೀಯರಿಗೆ ಸಿಕ್ಕಿದೆ. ಬುಧವಾರವೂ ದಿಡುಪೆ, ಮಲವಂತಿಗೆ, ಕಡಿರುದ್ಯಾವರ ಗ್ರಾಮದ ಜನರಲ್ಲಿ ವಾತಾವರಣ ಬಿಸಿಲಿದ್ದರೂ, ಬೆಟ್ಟ ಏನಾಗುತ್ತೋ, ಯಾವಾಗ ಪ್ರವಾಹ ಬರುತ್ತೋ ಅನ್ನುವ ಭೀತಿಯಿತ್ತು. ದೂರದಿಂದ ಕಾಣುವ ಎರ್ಮಾಯಿ ಫಾಲ್ಸ್ ನಲ್ಲಿ ಧುಮ್ಮಿಕ್ಕುವ ನೀರು ಕೆಂಪಾಗಿದ್ದು, ಘಟ್ಟದಲ್ಲೇನೋ ಅನಾಹುತ ಆಗಿದೆಯೆನ್ನುವ ಭಯ ಅವರಲ್ಲಿತ್ತು.

Heavy rains in the Charmadi region have led to the Mrityunjaya river overflowing on Tuesday, causing significant concern among the local population in the Antar area of Charmadi village.