Chikkamagaluru accident: ಚಿಕ್ಕಮಗಳೂರು ; ಗಣಪತಿ ತರಲು ಹೊರಟಿದ್ದ ವೇಳೆ ಆಟೋ ಪಲ್ಟಿ, ಇಬ್ಬರು ಯುವಕರ ಬಲಿ

07-09-24 09:33 pm       HK News Desk   ಕರ್ನಾಟಕ

ದೇಶದೆಲ್ಲೆಡೆ ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಎಲ್ಲೆಡೆ ವಕ್ರತುಂಡನ ಮೂರ್ತಿಯನ್ನು ಪ್ರತಿಷ್ಟಾಪಿಸಿ ಆರಾಧನೆ, ಪೂಜೆ ನಡೆಸಲಾಗುತ್ತಿದೆ. ಈ ನಡುವೆ ಗಣೇಶನ ತರಲು ತೆರಳಿದ್ದ ಯುವಕರಿಬ್ಬರು ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ.

ಚಿಕ್ಕಮಗಳೂರು, ಸೆ 07: ದೇಶದೆಲ್ಲೆಡೆ ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಎಲ್ಲೆಡೆ ವಕ್ರತುಂಡನ ಮೂರ್ತಿಯನ್ನು ಪ್ರತಿಷ್ಟಾಪಿಸಿ ಆರಾಧನೆ, ಪೂಜೆ ನಡೆಸಲಾಗುತ್ತಿದೆ. ಈ ನಡುವೆ ಗಣೇಶನ ತರಲು ತೆರಳಿದ್ದ ಯುವಕರಿಬ್ಬರು ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ.

ಟಾಟಾ ಏಸ್ ವಾಹನದಲ್ಲಿ ಗಣಪತಿ ತರಲು ತೆರಳುತ್ತಿದ್ದ ವೇಳೆ ಪಲ್ಟಿ ಆಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ದುರ್ಘಟನೆ ನಡೆದಿದೆ. 9 ಜನ ಯುವಕರಿದ್ದ ವಾಹನ ಅಪಘಾತಕ್ಕೀಡಾಗಿದೆ.

ಶ್ರೀಧರ್ (20) ಹಾಗೂ ಧನುಷ್ (20) ಮೃತ ಯುವಕರಾಗಿದ್ದಾರೆ. ಅಪಘಾತದಲ್ಲಿ ಮತ್ತಿಬ್ಬರು ಯುವಕರ ತಲೆಗೆ ಗಂಭೀರ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆ ರವಾನಿಸಲಾಗಿದೆ. ಅಲ್ಲದೇ ವಾಹನದಲ್ಲಿದ್ದ ಇತರ ಮೂವರು ಯುವಕರಿಗೂ ಹೆಚ್ಚಿನ ಗಾಯಗಳಾಗಿದೆ. ಅವರನ್ನು ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರು ಹಾಗೂ ಗಾಯಾಳುಗಳೆಲ್ಲ ಲಿಂಗದಹಳ್ಳಿ ನಿವಾಸಿಗಳು ಎಂದು ತಿಳಿದು ಬಂದಿದೆ. ಯುವಕರು ಗಣಪತಿ ಮೂರ್ತಿ ತರಲು ತರೀಕೆರೆಗೆ ಹೊರಟಾಗ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಟಾಟಾ ಏಸ್ ಪಲ್ಟಿ ಆಗಿದೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಣೇಶನ ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಊರಿನಲ್ಲೀಗ ಸೂತಕದ ಛಾಯೆ ಆವರಿಸಿದೆ.

ವೈದ್ಯರ ಸಲಹೆ ಮೇರೆಗೆ ಯುವಕರ ಪೋಷಕರಾದ ಕುಬೇಂದ್ರ-ಪದ್ಮಾ ಮತ್ತು ರಮೇಶ್-ಶೋಭಾ ಅವರು ತಮ್ಮ ಮಕ್ಕಳ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ನಾಲ್ವರು ಅಂಧರಿಗೆ ದೃಷ್ಟಿ ದೊರಕಿದಂತಾಗುತ್ತದೆ ಎಂದು ತರೀಕೆರೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ದೇವರಾಜು ತಿಳಿಸಿದ್ದಾರೆ.

Two youths killed in road accident while thier way to bring Ganapathi idol in Chikkamagaluru.